Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ
Team Udayavani, Sep 25, 2023, 12:43 AM IST
ಹಳೆಯಂಗಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ 10ನೇ ತೋಕೂರು ನಿವಾಸಿ ಸುಂದರ ಕುಂದರ್ ಅವರ ಪುತ್ರ ಸುಮಂತ್ (18) ಕಳೆದ ಸೆ.15ರಿಂದ ನಾಪತ್ತೆಯಾಗಿದ್ದು ರವಿವಾರ ಸಂಜೆ ಆತನ ಬಟ್ಟೆ,ಮೊಬೈಲ್ , ಚಪ್ಪಲಿಯು ಹಳೆಯಂಗಡಿ ಬಳಿಯ ಅಣೆಟ್ಟಿನ ಬಳಿಯಲ್ಲಿ ಪತ್ತೆಯಾಗಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸುಮಂತ್ ಸೆ.15ರಂದು ಸಂಜೆ 6 ಗಂಟೆಗೆ ಹಳೆಯಂಗಡಿ 10ನೇ ತೋಕೂರು ಮನೆಯಿಂದ ಉಡುಪಿಯ ಕೊರಂಗ್ರಪಾಡಿಯ ತನ್ನ ಅಜ್ಜಿ ಮನೆಗೆ ಹೋಗುತ್ತೇನೆಂದು ಹೇಳಿ ಹೋದವನು ಈ ತನಕ ಅಲ್ಲಿಯೂ ಹೋಗದೇ ಮರಳಿ ಮನೆಗೂ ಬಾರದೇ ನಾಪತ್ತೆಯಾಗಿದ್ದಾನೆ.ಹೆತ್ತವರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರವಿವಾರ ಹಳೆಯಂಗಡಿ ಬಳಿಯ ಚೆಳ್ಯಾರು ರೈಲ್ವೇ ಅಣೆಕಟ್ಟಿನ ಕೆಳಗೆ ಮಣ್ಣಿನ ದಿಬ್ಬದಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಆತನ ಬಟ್ಟೆ, ಬನಿಯನ್, ಮೊಬೈಲ್ , ಚಪ್ಪಲಿ ದೊರೆತಿದೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಬಂದು ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ನಾಪತ್ತೆಯಾದ ಬೆನ್ನಿಗೆ ತನಿಖೆ ನಡೆಸುವಾಗ ಉಡುಪಿಯಲ್ಲಿ ಆತನನ್ನು ನೋಡಿದವರು ನೇರವಾಗಿ ಮನೆಯವರಿಗೆ ಮಾಹಿತಿ ನೀಡಿದ್ದರು ಹಾಗೂ ಮೊಬೈಲ್ ಟವರ್ ಲೊಕೇಶನ್ ಸಹ ಅಲ್ಲಿಯೇ ನಿಂತು. ಸ್ವಿಚ್ ಆಫ್ ಆಗಿತ್ತು. ನಂತರ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆತನ ಮೊಬೆ„ಲ್ ಸಹಿತ ವಸ್ತ್ರಗಳು ಸಿಕ್ಕಿದ್ದು ಕಾಣೆಯಾದ ಪ್ರಕರಣ ಕುತೂಹಲ ಕೆರಳಿಸಿದೆ.