ಮದೀನಕ್ಕೆ ಯಾತ್ರೆ ತೆರಳಿದ್ದ ಮೂಡುಬಿದಿರೆಯ ಹಾಮದ್ ಸಾವು
Team Udayavani, Aug 13, 2023, 8:51 PM IST
ಮೂಡುಬಿದಿರೆ: ಮದೀನಕ್ಕೆ ಯಾತ್ರೆಗೆ ತೆರಳಿದ್ದ ಇಲ್ಲಿನ ಕೊಡಂಗಲ್ಲು ನಿವಾಸಿ ಹಾಮದ್ (73) ಹೃದಯಾಘಾತದಿಂದ ಅಲ್ಲೇ ನಿಧನ ಹೊಂದಿದ ಸಾವನಪ್ಪಿದ ಘಟನೆ ಶನಿವಾರ ನಡೆದಿದೆ.
ಹಾಮದ್ ಅವರು ಎರಡು ವಾರಗಳ ಹಿಂದೆ ತನ್ನ ಕುಟುಂಬಿಕರ ಜತೆ ಮೆಕ್ಕಾ ಮತ್ತು ಮದೀನ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದು, ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶನಿವಾರ ತಾಯ್ನಾಡಿಗೆ ಮರಳುವವರಿದ್ದರು. ಅಂದು ಮಧ್ಯಾಹ್ನ ಮದೀನ ಸಮೀಪದ ಜಿಲ್ಲಾ ಏರ್ಪೋರ್ಟ್ಗೆ ಹೊರಡಲು ಸಿದ್ಧತೆಯಲ್ಲಿದ್ಧಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಅವರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ಧಾರೆ.
ಮದೀನದಲ್ಲೇ ಅಂತ್ಯಸಂಸ್ಕಾರ
ಮದೀನ ವ್ಯಾಪ್ತಿಯೊಳಗಿನ ಕೊಠಡಿಯಲ್ಲಿಯೇ ಮೃತರಾದ ಕಾರಣ ಅಲ್ಲಿನ ನಿಯಮದ ಪ್ರಕಾರ ಅಲ್ಲೇ ರವಿವಾರ ಅಂತ್ಯಸಂಸ್ಕಾರ ನಡೆಸಲಾಯಿತೆಂದು ಮಾಹಿತಿ ಲಭಿಸಿದೆ. ಹಾಮದ್ ಅವರು 15 ವರ್ಷ ವಿದೇಶದಲ್ಲಿದ್ದು, ಬಳಿಕ ಊರಿನಲ್ಲಿ ನೆಲೆಸಿದ್ದರು. ಮೂಡುಬಿದಿರೆಯಲ್ಲಿ ಸುಮಾರು 25 ವರ್ಷಗಳಿಗೂ ಮಿಗಿಲಾಗಿ “ಮದನಿ’ ಹೆಸರಿನ ಅಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು.