ಕೆಐಒಸಿಎಲ್ಗೆ ಬಳ್ಳಾರಿಯಲ್ಲಿ ಕಬ್ಬಿಣ ಅದಿರು ನಿಕ್ಷೇಪ
ಶೀಘ್ರ ಕಾರ್ಯಾರಂಭ ; ಕಂಪೆನಿ ಪುನಶ್ಚೇತನ ನಿರೀಕ್ಷೆ
Team Udayavani, Feb 3, 2020, 5:17 AM IST
ಮಂಗಳೂರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)ಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಬ್ಬಿಣದ ಅದಿರು ನಿಕ್ಷೇಪದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಪರಿಸರ ಇಲಾಖೆ ಅನುಮತಿ ಯಷ್ಟೆ ಬಾಕಿಯಿದೆ. ಇದರಿಂದ ಕಂಪೆನಿಯ ಪುನರುತ್ಥಾನದ ನಿರೀಕ್ಷೆ ಮೂಡಿದೆ.
ಅಲ್ಲಿ ಹೊಸ ಅದಿರು ಉಂಡೆಗಟ್ಟುವ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನವಾಗಲಿದೆ.
ಬಳ್ಳಾರಿ ಜಿಲ್ಲೆಯ ದೇವದಾರಿಯ 470 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ನಿಕ್ಷೇಪ ವನ್ನು ಗುರುತಿಸಲಾಗಿದ್ದು, ಅಲ್ಲಿ ಗಣಿಗಾರಿಕೆ ನಡೆಸಲು ಕೆಐಒಸಿಎಲ್ಗೆ ಅನುಮತಿ ನೀಡುವ ಪ್ರಕ್ರಿಯೆ ನಡೆಸಲಾ ಗುತ್ತದೆ. ಅಲ್ಲಿ ವರ್ಷಕ್ಕೆ 20 ಲಕ್ಷ ಮೆ. ಟನ್ ಕಬ್ಬಿಣದ ಅದಿರು ಬೆನಿಫಿಸಿಯೇಶನ್ ಸ್ಥಾವರ ಮತ್ತು ವರ್ಷಕ್ಕೆ 20 ಲಕ್ಷ ಮೆ. ಟನ್ ಕಬ್ಬಿಣದ ಆಕ್ಸೈಡ್ ಉಂಡೆಗಟ್ಟುವ ಸ್ಥಾವರ ಸ್ಥಾಪಿಸಲಾ ಗುವುದು. ಇದರಿಂದ 2 ಸಾವಿರಕ್ಕೂ ಅಧಿಕ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದು ಕೇಂದ್ರ ಸರಕಾರ ತಿಳಿಸಿತ್ತು.
ಉತ್ಪಾದನ ಸ್ಥಾವರಕ್ಕೆ ಒಪ್ಪಿಗೆ
ಈ ಮಧ್ಯೆ ದಶಕದ ಹಿಂದಿನಿಂದಲೂ ಪ್ರಸ್ತಾವನೆಯ ಹಂತದಲ್ಲೇ ಉಳಿದಿದ್ದ ಮೌಲ್ಯವರ್ಧಿತ ಡಕ್ಟೆ$çಲ್ ಐರನ್ ಸ್ಪನ್ ಪೈಪ್ (ಡಿಐಎಸ್ಪಿ) ಉತ್ಪಾದನ ಸ್ಥಾವರವನ್ನು ಮಂಗಳೂರಿನಲ್ಲಿ ಸ್ಥಾಪಿ ಸಲು ಉಕ್ಕು ಸಚಿವಾಲಯ ಒಪ್ಪಿಗೆ ನೀಡಿದೆ. ಇದರೊಂದಿಗೆ 2009ರಿಂದ ಸ್ಥಗಿತಗೊಂ ಡಿರುವ ಬೀಡು ಕಬ್ಬಿಣ ಉತ್ಪಾದಿಸುವ ಊದು ಕುಲುಮೆ ಯನ್ನು ಮೇಲ್ದರ್ಜೆಗೇರಿಸಿ, ಪೂರಕ ವಾದ ವಾರ್ಷಿಕ 1.7 ಲಕ್ಷ ಟನ್ ಕೋಕ್ ಉತ್ಪಾದನ ಸ್ಥಾವರ, 7 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಕ್ಯಾಪ್ಟಿವ್ ವಿದ್ಯುತ್ ಸ್ಥಾವರವೂ ಸೇರಿದಂತೆ 836 ಕೋಟಿ ರೂ. ಮೊತ್ತದ ಯೋಜನೆಗೆ ಅನು ಮೋದನೆ ಸಿಕ್ಕಿದಂತಾಗಿದೆ. ಮುಂದಿನ ತಿಂಗಳು ಈ ಯೋಜನೆಗೆ ಶಿಲಾನ್ಯಾಸ ನಡೆಯಲಿದೆ. ಕೂಳೂರು ಫಲ್ಗುಣಿ ನದಿಯ ಪಕ್ಕ, ಎಂಸಿಎಫ್ ಹಿಂಭಾಗ ದಲ್ಲಿ ಕೆಐಒಸಿಎಲ್ಗೆ 150 ಎಕರೆ ಸ್ವಂತ ಸ್ಥಳವಿದ್ದು, ಇಲ್ಲೇ ನೂತನ ಘಟಕ ತಲೆಯೆತ್ತಲಿದೆ.
ದೇಶಾದ್ಯಂತ ನೀರು ಸರಬರಾಜು ಮತ್ತು ಒಳಚರಂಡಿ ಜಾಲದಲ್ಲಿ ಬಳಕೆ ಯಾ ಗುವುದು ಡಿಐಎಸ್ಪಿ ಪೈಪ್. ಈ ಪೈಪ್ ಉತ್ಪಾದಿಸುವ ಬೆರಳೆಣಿ ಕೆಯ ಕಂಪೆನಿಗಳಷ್ಟೇ ದೇಶ ದಲ್ಲಿವೆ. 100ರಿಂದ 1 ಸಾವಿರ ಎಂ.ಎಂ.ವರೆಗಿನ ವ್ಯಾಸದಲ್ಲಿ ವಾರ್ಷಿಕ 2 ಲಕ್ಷ ಪೈಪ್ಗ್ಳನ್ನು ಹೊಸ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.
2006ರಿಂದ ಗಣಿ ಇಲ್ಲ
ಸುಪ್ರೀಂ ಕೋರ್ಟ್ ಆದೇಶದಂತೆ 2006ರ ಜ.1ರಿಂದ ಕುದುರೆಮುಖ ದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ರಾಜ್ಯದಲ್ಲಿ ಸಾಕಷ್ಟು ನಿಕ್ಷೇಪಗಳಿದ್ದರೂ ಕೆಐಒಸಿಎಲ್ಗೆ ಪರ್ಯಾಯ ನಿಕ್ಷೇಪದ ವ್ಯವಸ್ಥೆ ಆಗಿರಲಿಲ್ಲ. 1999ರಲ್ಲಿ ಕುದುರೆ ಮುಖದಲ್ಲಿ ಗುತ್ತಿಗೆಯ ಪ್ರಥ ಮ ಅವಧಿ ಮುಗಿದ ಕೂಡಲೇ ಪರ್ಯಾ ಯ ಅದಿರು ನಿಕ್ಷೇಪಕ್ಕಾಗಿ ಕಂಪೆನಿ ಬೇಡಿಕೆ ಸಲ್ಲಿಸಿತ್ತು. ಆದರೆ ಬೇಡಿಕೆ ಈಡೇರಿರಲಿಲ್ಲ.
1.8 ಲಕ್ಷ ಟನ್ ಸಾಮರ್ಥ್ಯದ ಕೋಕ್ ಓವೆನ್
ಬೀಡುಕಬ್ಬಿಣ ಉತ್ಪಾದನೆಗೆ ಕಲ್ಲಿದ್ದಲನ್ನು ಸಂಸ್ಕರಿಸಿದ ಕೋಕ್ ಅಗತ್ಯ. ಸದ್ಯ ಇದು ಆಮದಾಗುತ್ತಿದೆ. ಹೀಗಾಗಿ 1.8 ಲಕ್ಷ ಟನ್ ವಾರ್ಷಿಕ ಉತ್ಪಾದನ ಸಾಮರ್ಥ್ಯದ ಕೋಕ್ ಓವೆನ್ ನಿರ್ಮಿಸಲಾಗುವುದು. ಇಲ್ಲಿ ಕಲ್ಲಿದ್ದಲನ್ನು ಕೋಕ್ ಆಗಿ ಪರಿವರ್ತಿಸಲಾಗುತ್ತದೆ. ಉಪ ಉತ್ಪನ್ನವಾದ ಅನಿಲದಿಂದ 10 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಕಬ್ಬಿಣದ ನಿಕ್ಷೇಪವಿರುವ ಜಾಗ ನೀಡಲು ಸರಕಾರ ಒಪ್ಪಿಗೆ ಸೂಚಿಸಿದ್ದು, ಪರಿಸರ ಇಲಾಖೆಯ ಅನುಮತಿಯ ನಿರೀಕ್ಷೆಯಲ್ಲಿದೆ. ಶೀಘ್ರದಲ್ಲಿ ಎಲ್ಲ ಅಗತ್ಯ ಅನುಮತಿ ಪಡೆದು ಕುದುರೆಮುಖ ಕಂಪೆನಿಯು ಅದಿರು ಮೌಲ್ಯವರ್ಧನೆಯತ್ತ ಒತ್ತು ನೀಡಲಿದೆ.
– ಎಂ.ವಿ. ಸುಬ್ಟಾರಾವ್,
ವ್ಯವಸ್ಥಾಪಕ ನಿರ್ದೇಶಕರು, ಕೆಐಒಸಿಎಲ್
– ದಿನೇಶ್ ಇರಾ