ಕೊಂಕಣಿ ವಚನ ಗಾಯನ ಕಾರ್ಯಾಗಾರ ಶ್ಲಾಘನಾರ್ಹ: ಕುಂಬಳೆ ಲಕ್ಷ್ಮಣ ಪ್ರಭು
Team Udayavani, Apr 20, 2018, 12:39 PM IST
ಮಹಾನಗರ: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಕೊಂಕಣಿ ಭಾಷೆಯಲ್ಲಿರುವ ವಚನಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ 3 ದಿವಸ ನಡೆದ ‘ಕೊಂಕಣಿ ವಚನ ಗಾಯನ’ ಉಚಿತ ತರಬೇತಿ ಶಿಬಿರ ಸಮಾರೋಪವು ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬುಧವಾರ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ನರಸಿಂಹಮೂರ್ತಿ ಆರ್. ಮಾತನಾಡಿ, ಸರ್ವಜ್ಞರಾದ ಭಕ್ತಿ ಭಂಡಾರಿ ಬಸವಣ್ಣರವರ ಹಾಗೂ ಇತರ ಹಲವು ವಚನ ಸಾಹಿತ್ಯದ ಬಗ್ಗೆ ಸಭಿಕರಿಗೆ ತಿಳಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬಳೆ ಲಕ್ಷ್ಮಣ ಪ್ರಭು ಅಧ್ಯಕ್ಷತೆ ವಹಿಸಿ, ವಚನ ಸಾಹಿತ್ಯವನ್ನು ಕೊಂಕಣಿಯಲ್ಲಿ ಹಾಡಿಸುವಂತಹ ಶಿಬಿರವನ್ನು ಹಮ್ಮಿಕೊಂಡಿರುವ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿ, ಲೆಕ್ಕ ಪರಿ ಶೋಧಕ ಸಿ. ಎ. ನಂದಗೋಪಾಲ ಶೆಣೈ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ. ದೇವದಾಸ ಪೈ ಅತಿಥಿಗಳನ್ನು ಗೌರವಿಸಿದರು.
ಕೊಂಕಣಿ ಭಾಷೆಗೆ ಅನುವಾದಗೊಂಡ ವಚನಗಳನ್ನು ಸಮಾಜ ಸೇವಕಿ ಮಾಲತಿ ಕಾಮತ್ ಅವರು ರಾಗ ಸಂಯೋಜನೆ ಮಾಡಿ, ಹಾಡಿ 3 ದಿವಸ ತರಬೇತಿ ನೀಡಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಸಮ್ಮಾನಿಸಲಾಯಿತು.
ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತಿರುವ ವಚನ ಗಾಯನ ಪ್ರಾತ್ಯಕ್ಷಿಕೆ ನೀಡಿ, ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕೊಂಕಣಿ ವಚನ ಗಾಯನ ಶಿಬಿರಾರ್ಥಿಗಳು ವಚನ ಹಾಡಿ ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಹೊಲಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಸಂಚಾಲಕಿ ಗೀತಾ ಸಿ. ಕಿಣಿ, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಶಕುಂತಳಾ ಆರ್. ಕಿಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು ವಂದಿಸಿದರು. ಎಂ. ಆರ್. ಕಾಮತ್ ಅವರು ನಿರೂಪಿಸಿದರು.