ಫುಟ್ಪಾತ್ಗೆ ಸ್ಥಳಾವಕಾಶದ ಕೊರತೆ; ರಸ್ತೆಯಲ್ಲೇ ಪಾರ್ಕಿಂಗ್
ಪಿವಿಎಸ್-ಬಂಟ್ಸ್ ಹಾಸ್ಟೆಲ್ ರಸ್ತೆ ವಿಸ್ತರಣೆ
Team Udayavani, Mar 3, 2020, 4:40 AM IST
ಮಹಾನಗರ: ಜನ ಮತ್ತು ವಾಹನ ನಿಬಿಡವಾಗಿರುವ ಪಿವಿಎಸ್-ಬಂಟ್ಸ್ ಹಾಸ್ಟೆಲ್ ರಸ್ತೆಯನ್ನು ಅಗಲಗೊಳಿಸಲಾಗುತ್ತಿದೆ. ಆದರೆ ಈ ರಸ್ತೆಯ ಹೆಚ್ಚಿನ ಕಡೆಗಳಲ್ಲಿ ಫುಟ್ಪಾತ್ಗೆ ಅವಕಾಶವೇ ಇಲ್ಲದ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ರಸ್ತೆ ವಿಸ್ತರಣೆಗೊಂಡರೂ ವಾಹನಗಳ ಸುಗಮ ಓಡಾಟ, ಪಾದಚಾರಿಗಳ ಸುರಕ್ಷಿತ ಸಂಚಾರ ಅನುಮಾನ ಎನ್ನುವಂತಾಗಿದೆ.
ಕಿರಿದಾದ ರಸ್ತೆ, ರಸ್ತೆಯಲ್ಲಿಯೇ ವಾಹನಗಳ ಪಾರ್ಕಿಂಗ್, ಜನರು ಕೂಡ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಾ ಇದ್ದುದರಿಂದ ಇಲ್ಲಿ ಸಂಚಾರ ಸಮಸ್ಯೆ ಇತ್ತು. ಸಂಚಾರ ಸರಿಪಡಿಸುವ ಉದ್ದೇಶದಿಂದ ಟ್ರಾಫಿಕ್ ಕೋನ್ಗಳನ್ನು ಕೂಡ ಅಳವಡಿಸಲಾಗಿತ್ತು. ಆದರೂ ಈ ರಸ್ತೆಯ ಸಮಸ್ಯೆ ಬಗೆಹರಿಯಲಿಲ್ಲ. ಇದೀಗ ಸ್ಥಳಾವವಕಾಶ ಇರುವಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯ ವಿಸ್ತರಣೆ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಮಳೆನೀರು ಹರಿಯುವ ಚರಂ ಡಿಯೂ ನಿರ್ಮಾಣವಾಗುತ್ತಿದೆ. ಆದರೆ ಇದು ಯೋಜನಾಬದ್ಧವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ರಸ್ತೆಯೇ ಫುಟ್ಪಾತ್!
ಈಗ ವಿಸ್ತರಣೆಗೊಂಡಿರುವ ಜಾಗ ರಸ್ತೆಗೆ ಸಮತಟ್ಟಾಗಿಯೇ ಇದೆ. ಇದಕ್ಕೆ ಫುಟ್ಪಾತ್ನ ಸ್ವರೂಪವೇ ಇಲ್ಲ! ಇದು ರಸ್ತೆಯ ಮಟ್ಟಕ್ಕಿಂತ ಸ್ವಲ್ಪವಾದರೂ ಮೇಲ್ಮಟ್ಟದಲ್ಲಿದ್ದರೆ ಮಾತ್ರ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಒಂದು ವೇಳೆ ಈಗ ವಿಸ್ತರಣೆಗೊಂಡಿರುವ ಸ್ಥಳವನ್ನು ಫುಟ್ಪಾತ್ಗೆಂದು ಮೀಸಲಿಟ್ಟರೂ ಅದರಲ್ಲಿ ನಡೆದಾಡುವುದು ಕೂಡ ಅಪಾಯ ಕಾರಿಯಾಗಲಿದೆ. ಇನ್ನು ಕೆಲವು ಕಡೆ ಫುಟ್ಪಾತ್ಗೆ ಸ್ವಲ್ಪ ಸ್ಥಳವೂ ಉಳಿದಿಲ್ಲ. ಹಾಗಾಗಿ ರಸ್ತೆಯ ನಡುವೆಯೇ ನಡೆದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಈಗಲೇ ವಾಹನ ನಿಲುಗಡೆ
ವಿಸ್ತರಣೆ ಕಾಮಗಾರಿ ಭಾಗಶಃ ಪೂರ್ಣಗೊಂಡ ಸ್ಥಳಗಳಲ್ಲಿ ಈಗಲೇ ವಾಹನಗಳ ನಿಲುಗಡೆ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಂಡ ಅನಂತರವೂ ವಾಹನ ಪಾರ್ಕಿಂಗ್ ಮುಂದುವರಿದರೆ ರಸ್ತೆ ವಿಸ್ತರಣೆಯಿಂದ ಮುಕ್ತ ವಾಹನ ಸಂಚಾರ ಸಾಧ್ಯವಾಗದು. ಈಗಲೇ ಎಚ್ಚೆತ್ತುಕೊಂಡು ವಿಸ್ತರಣೆ ಗೊಂಡಿರುವ ರಸ್ತೆಯ ಉದ್ದಕ್ಕೂ ಫುಟ್ಪಾತ್ ನಿರ್ಮಿಸಬೇಕು. ಅಲ್ಲದೆ ಇನ್ನು ನಡೆಯಲಿರುವ ಕಾಮಗಾರಿಯಲ್ಲಿಯೂ ಫುಟ್ಪಾತ್ಗೆ ಆದ್ಯತೆ ನೀಡುವುದು ಅವಶ್ಯ.ಅಂತೆಯೇ ಬಸ್ ನಿಲುಗಡೆಗೆ (ಬಸ್ಬೇ) ಸ್ಥಳಾವಕಾಶ ಒದಗಿಸುವ ಜತೆಗೆ ರಸ್ತೆಯಲ್ಲಿಯೇ ವಾಹನಗಳ ಪಾರ್ಕಿಂಗ್ನ್ನು ನಿರ್ಬಂಧಿಸಿದರೆ ಸುಗಮ ಸಂಚಾರ ಸಾಧ್ಯವಾದೀತು.
ಪಾರ್ಕಿಂಗ್ಗೆ ಅವಕಾಶವಿಲ್ಲ
ವಿಸ್ತರಣೆಗೊಳ್ಳುತ್ತಿರುವ ರಸ್ತೆಯಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡುವುದಿಲ್ಲ. ಇದು ವಾಹನ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ರಸ್ತೆಯಾಗಿರುವುದರಿಂದ ಫುಟ್ಪಾತ್ನ್ನು ಕೂಡ ವ್ಯವಸ್ಥಿತವಾಗಿ ನಿರ್ಮಿಸಲು ಗಮನ ಹರಿಸುತ್ತೇವೆ. ಈ ಬಗ್ಗೆ ಕೂಡಲೇ ಕಾಮಗಾರಿಯ ಪರಿಶೀಲನೆ ನಡೆಸಿ ಎಂಜಿನಿ ಯರ್ಗಳಿಗೆ ನಿರ್ದೇ ಶನ ನೀಡಲಾಗುವುದು.
- ಅಜಿತ್ ಕುಮಾರ್ ಹೆಗ್ಡೆ , ಶಾನಾಡಿ,ಆಯುಕ್ತರು, ಮಹಾನಗರ ಪಾಲಿಕೆ
ಪಾದಚಾರಿಗಳ ಸುರಕ್ಷತೆ ಒತ್ತು ನೀಡಿ
ವಿದ್ಯಾರ್ಥಿಗಳು ಸಹಿತ ನಿತ್ಯ ನೂರಾರು ಮಂದಿ ನಡೆದಾಡುವ ರಸ್ತೆ ಇದು. ಇಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ, ವೇಗವೂ ಹೆಚ್ಚು. ಈ ಹಿಂದೆ ಇಲ್ಲಿ ಕೆಲವು ಕಡೆ ಫುಟ್ಪಾತ್ ಇತ್ತು. ಕೆಲವು ಕಡೆ ಇರಲಿಲ್ಲ. ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಅಪಾಯ ಕಾರಿಯಾಗಿಯೇ ನಡೆದುಕೊಂಡು ಹೋಗುವ ಸ್ಥಿತಿ ಇದೆ. ಈಗ ಕೆಲವು ಕಡೆ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ. ಇದರ ಪ್ರಯೋಜನ ಪಾದಚಾರಿಗಳಿಗೂ ಸಿಗಬೇಕು. ಪಾದಚಾರಿಗಳ ಸುರಕ್ಷತೆಗೂ ಗಮನ ಕೊಡಬೇಕು.
- ಯಶೋದಾ,ಪಾದಚಾರಿ