ಮಂಗಳೂರು-ಕಾರ್ಕಳ ಹೈವೇಗೆ ಮತ್ತೆ ಭೂಸ್ವಾಧೀನ
ಹೊಸ ಅಧಿಸೂಚನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ
Team Udayavani, Dec 7, 2019, 5:45 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕುಲಶೇಖರದಿಂದ ಮೂಡುಬಿದಿರೆ- ಕಾರ್ಕಳ ನಡುವಿನ ಸುಮಾರು 60 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಮತ್ತೂಮ್ಮೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಹೆದ್ದಾರಿ ಪ್ರಾಧಿಕಾರವು ಮಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಸೂಚಿಸಿದೆ.
ಈ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ವಶ ಸಂಬಂಧ 2 ಬಾರಿ ಕರಡು ಅಧಿ ಸೂಚನೆ ಹೊರಡಿಸಿ ಪ್ರಕ್ರಿಯೆ ನಡೆಸಿದರೂ ಹೆದ್ದಾರಿ ಪ್ರಾಧಿಕಾರಕ್ಕೆ ನಿಗದಿತ ಅವಧಿಯೊಳಗೆ ಅಂತಿಮ ಹಂತದ ಭೂಸ್ವಾಧೀನ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 3ನೇ ಬಾರಿಗೆ ಪ್ರಾ. ಹಂತದ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಹೆದ್ದಾರಿ ನಿರ್ಮಾಣ ಪ್ರಾರಂಭ ವಿಳಂಬವಾಗಬಹುದು.
2016ರಿಂದ ಇಲ್ಲಿಯವರೆಗೆ ಆದದ್ದೇನು?
ಭೂಸ್ವಾಧೀನಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು 2016ರ ಮಾ.16ರಂದು ನಮೂನೆ 3 (ಎ) ಪ್ರಕಾರ
ಅಧಿಸೂಚನೆ ಹೊರಡಿಸಿ ಭೂಸ್ವಾಧೀನಕ್ಕೆ ಪ್ರಕಟನೆ ನೀಡಿತ್ತು. ಆದರೆ ಕೆಲವೆಡೆ 30 ಮೀ. ಮತ್ತು ಇನ್ನುಳಿದೆಡೆ 45 ಮೀ. ಭೂಸ್ವಾಧೀನ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಸಕಾಲದಲ್ಲಿ ಅಂತಿಮ 3 (ಡಿ) ಹೊರಡಿ ಸಲು ಸಾಧ್ಯವಾಗದೆ ಅಧಿಸೂಚನೆಯೇ ರದ್ದಾಗಿತ್ತು. ಹೀಗಾಗಿ 2ನೇ ಬಾರಿಗೆ 2018ರ ಅ.26ರಂದು ಅಧಿಸೂಚನೆ ಹೊರಡಿಸಿ ಡಿ.1ರಂದು ಜಾಹೀರಾತು ಪ್ರಕಟಿಸಲಾಗಿತ್ತು. ಸರ್ವೆ ನಡೆದು, ಭೂಮಾಲಕರಿಗೆ ಆಕ್ಷೇಪ ಸಲ್ಲಿಸಲು ನೋಟಿಸ್ ನೀಡಲಾಗಿತ್ತು, ಅಹವಾಲು ಆಲಿಸಲಾಗಿತ್ತು. ಕಳೆದ ವರ್ಷ ಅ.5ರಂದು ಅಂತಿಮಗೊಳಿಸಿ ಮಂಗಳೂರು ಭೂಸ್ವಾಧೀನ ಅಧಿಕಾರಿಗಳು ಕಡತ ಕಳುಹಿಸಿದ್ದರು. ನಿಯಮ ಪ್ರಕಾರ 3 (ಎ) ಅಧಿಸೂಚನೆ ಪ್ರಕಟನೆ ಯಾದ ದಿನದಿಂದ ವರ್ಷದೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಿದ್ದರೂ ಅದಾಗದೆ ಈಗ 2ನೇ ಬಾರಿಯೂ ರದ್ದುಗೊಂಡಿದೆ.
ಇಕ್ಕಟ್ಟಿನಲ್ಲಿ ಭೂಮಾಲಕರು!
2016ರಲ್ಲಿಯೇ ಅಧಿಸೂಚನೆ ಆದ ಕಾರಣ ಪ್ರಸ್ತಾವಿತ ಜಮೀನಿನುದ್ದಕ್ಕೂ ಪರಭಾರೆ, ಭೂಪರಿವರ್ತನೆ ಅಥವಾ ಅಡವು ಮಾಡುವಂತಿಲ್ಲ, ಅಭಿವೃದ್ಧಿಯೂ ಅಸಾಧ್ಯ. ಇದರಿಂದ ಹೆದ್ದಾರಿಯ ಇಕ್ಕೆಲಗಳ ಭೂ ಮಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಕೈಕಂಬದಲ್ಲಿ ಟೋಲ್
3ನೇ ಹಂತದ ಅಧಿಸೂಚನೆ ಸಂದರ್ಭ ಟ್ರಕ್ ಯಾರ್ಡ್, ಟೋಲ್ಗಾಗಿ ಹೆಚ್ಚುವರಿ ಭೂಮಿ ಖರೀ
ದಿಸಲು ಪ್ರಾಧಿಕಾರ ಸೂಚಿಸಿದೆ. ಕೈಕಂಬ ಸಮೀಪ ಟೋಲ್ಬೂತ್ ಮತ್ತು ಸಾಣೂರು ಸಮೀಪ ಟ್ರಕ್ ಯಾರ್ಡ್ ಇರಲಿದೆ.
ಹೆದ್ದಾರಿ ನಿರ್ಮಾಣ ಸಂಬಂಧ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಅಧಿಸೂಚನೆ ಹೊರಡಿಸುವಂತೆ ಸೂಚನೆ ಬಂದಿದೆ. ಈಗಾಗಲೇ ನಾವು ಸರ್ವೆ ಸೇರಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ 3(ಎ) ತುರ್ತಾಗಿ ಮುಗಿಸಿ, ಆಕ್ಷೇಪಣೆಗಳನ್ನು ಸ್ವೀಕರಿಸಿ, ನಿಯಮ ಪ್ರಕಾರ ಮತ್ತೂಮ್ಮೆ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಮೇಘನಾ ಆರ್. ವಿಶೇಷ ಭೂಸ್ವಾಧೀನ ಅಧಿಕಾರಿ, ಮಂಗಳೂರು
– ದಿನೇಶ್ ಇರಾ