ಮಾತೃಪೂರ್ಣ ಯೋಜನೆ ಯಶಸ್ವಿಗೊಳಿಸಲು ಸರಕಾರಕ್ಕೆ ಪತ್ರ
ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ
Team Udayavani, Feb 11, 2020, 6:00 AM IST
ಮಂಗಳೂರು: ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವನ್ನು ಒದಗಿಸುವ ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆಯನ್ನು ಯಶಸ್ವಿಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಲೋಕಾಯುಕ್ತ ವತಿಯಿಂದ ಸರಕಾರಕ್ಕೆ ಪತ್ರ ಬರೆಯ ಲಾಗುವುದು; ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೂ ಆದೇಶಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುರತ್ಕಲ್ನಲ್ಲಿ ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಸಕೀಟ್ ಹೌಸ್ನಲ್ಲಿ ಲೋಕಾ ಯುಕ್ತಕ್ಕೆ ಸಾರ್ವಜನಿಕರಿಂದ ಬಂದ ಕೆಲವು ದೂರುಗಳ ವಿಚಾರಣೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಮನೆಗಳು ದೂರ ದೂರ ಇರುವುದರಿಂದ ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಆಹಾರ ಸ್ವೀಕರಿಸಲು ಮುಂದಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದರು.
ಬಂಗ್ರ ಕೂಳೂರು ಸಮಸ್ಯೆ: ಸಭೆ ನಡೆಸಲು ಸೂಚನೆ
ನಗರದ ಮಾಲೆಮಾರ್ನಿಂದ ಫೋರ್ತ್ಮೈಲ್- ಬಂಗ್ರ ಕೂಳೂರು ವರೆಗಿನ ರಾಜ ಕಾಲುವೆಯಲ್ಲಿ ಮಲಿನ ನೀರು ನಿಂತು ಸುತ್ತಮುತ್ತಲ ಸುಮಾರು 1,000 ಮನೆಗಳ ಪರಿಸರದಲ್ಲಿ ಮಾಲಿನ್ಯ ಉಂಟಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾ| ವಿಶ್ವನಾಥ ಶೆಟ್ಟಿ ಸೂಚಿಸಿದರು.
ಬಂಗ್ರ ಕೂಳೂರಿನ ರಾಜ ಕಾಲುವೆಯ ಸಮಸ್ಯೆ ಕುರಿತಂತೆ ಸುರೇಶ್ ಉಡುಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣ ಈಗ ವಿಚಾರಣೆಯಲ್ಲಿದೆ. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆ ಹರಿಸಲು ಅನುಕೂಲವಾಗುವಂತೆ ಮಹಾ ನಗರ ಪಾಲಿಕೆ, ಎಂಎಸ್ಇಝಡ್, ಎನ್ಎಚ್ಎಐ, ಮೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಲೋಕಾಯುಕ್ತರು ಸುದ್ದಿಗಾರರಿಗೆ ತಿಳಿಸಿದರು.
ಸಮುದ್ರದಲ್ಲಿ ಭರತದ ಸಂದರ್ಭ ಬಂಗ್ರ ಕೂಳೂರಿನ ರಾಜ ಕಾಲುವೆಯಲ್ಲಿ ಮಲಿನ ನೀರು ನಿಂತು ಸಮಸ್ಯೆ ಆಗುತ್ತಿದೆ. ಇದಕ್ಕೆ ಸಮಗ್ರ ಪರಿಹಾರ ಕಂಡುಕೊಳ್ಳಲು ದೊಡ್ಡ ಮೊತ್ತದ ಹಣ ಬೇಕಾಗಿದೆ. ಈ ಬಗ್ಗೆ ಲೋಕಾಯುಕ್ತದ ವತಿಯಿಂದ ಸರಕಾರಕ್ಕೆ ಪತ್ರ ಬರೆಯಲಾಗುವುದು. ಜಿಲ್ಲಾಡಳಿತ ಕೂಡ ಸರಕಾರಕ್ಕೆ ಬರೆಯಬೇಕೆಂದು ಸೂಚಿಸಲಾಗಿದೆ ಎಂದರು.
ಕಂಕನಾಡಿಯ ಕಪಿತಾನಿಯೊ ಸಮೀಪದ ರೆಡ್ ಬಿಲ್ಡಿಂಗ್ ಲೇನ್ನ ಒಳ ಚರಂಡಿ ನೀರಿನ ಸಮಸ್ಯೆ ಕುರಿತಂತೆ 2012ರಿಂದ ಇರುವ ವಿವಾದವನ್ನು ಕೂಡ ಸೋಮವಾರ ಬಗೆಹರಿಸಲಾಗಿದೆ. ಸಮಸ್ಯೆ ಪರಿಹರಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.