ಲಿಂಬೆ ಹಣ್ಣಿನ ಟ್ರೇಗಳ ನಡುವೆ ಗಾಂಜಾ ಸಾಗಾಟ: 40 ಕೆಜಿ ಗಾಂಜಾ ವಶ, ಇಬ್ಬರ ಬಂಧನ
Team Udayavani, Jul 3, 2021, 1:52 PM IST
ಮಂಗಳೂರು: ವಾಹನದಲ್ಲಿ ಲಿಂಬೆ ಹಣ್ಣಿನ ಟ್ರೇಗಳ ನಡುವೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರಿಂದ 40 ಕೆಜಿ ಗಾಂಜಾ ವಶಪಡಿಸಲಾಗಿದೆ.
ಜುಲೈ 2ರಂದು ಉರ್ವಾ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟೆಯವರು ಕೊಟ್ಟರಾ ಚೌಕಿ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಬಂದ ಬುಲೆರೋ ವಾಹನದಲ್ಲಿ ಈ ಮಾದಕ ವಸ್ತುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್ ಟ್ರೇಗಳಲ್ಲಿ ಲಿಂಬೆ ಹಣ್ಣು ತುಂಬಿ ಅದರ ಮಧ್ಯೆ ತಲಾ ಎರಡು ಕೆಜಿ ತೂಕದ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು.
ಇದನ್ನೂ ಓದಿ:ಪಣಂಬೂರು: ಲಾಕ್ ಡೌನ್ ವೇಳೆ ಸುಮ್ಮನಿದ್ದ ಹೆದ್ದಾರಿ ಇಲಾಖೆಯಿಂದ ಈಗ ಕಾಮಗಾರಿ;ಟ್ರಾಫಿಕ್ ಜಾಮ್
ಪ್ರಕರಣದ ಆರೋಪಿಗಳಾದ ಕಾಸರಗೋಡಿನ ಕಂಬಲ್ಲೂರಿನ ಶಿಹಾಬುದ್ದೀನ್.ವಿ.ವಿ. (32 ವರ್ಷ) ಮತ್ತು ಲತೀಫ್ (38 ವರ್ಷ) ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ತಲಾ ಎರಡು ಕೆಜಿ ತೂಕದ 20 ಗಾಂಜಾ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಬಳಸಿದ ಬೊಲೆರೋ ವಾಹನ ಸೇರಿ ಒಟ್ಟು 11,17,000 ರೂ ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.