ಮಂಗಳೂರು: ನಟೋರಿಯಸ್ ರೌಡಿಶೀಟರ್ ಕಾಲಿಯಾ ರಫೀಕ್ ಬರ್ಬರ ಹತ್ಯೆ
Team Udayavani, Feb 15, 2017, 8:52 AM IST
ಮಂಗಳೂರು: ಉಳ್ಳಾಲದ ನಟೋರಿಯಸ್ ರೌಡಿ ಶೀಟರ್ ಕಾಲಿಯಾ ರಫೀಕ್(35) ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬಳಿಕ ಕೊಚ್ಚಿ ಕೊಲೆಗೈದ ಘಟನೆ ಮಂಗಳವಾರ ತಡರಾತ್ರಿ ಕೋಟೆಕಾರು ಬಳಿ ನಡೆದಿದೆ.
ರಫೀಕ್ ಸಂಚರಿಸುತ್ತಿದ್ದ ರಿಟ್ಜ್ ಕಾರಿಗೆ ಈಚರ್ ಮಿನಿ ಟ್ರಕ್ ಢಿಕ್ಕಿ ಹೊಡೆಸಿ ಆತ ಇಳಿದು ಪರಾರಿಯಾಗುತ್ತಿದ್ದಂತೆ ಗುಂಡಿನ ದಾಳಿ ನಡೆಸಲಾಗಿದೆ. ಕುಸಿದು ಬಿದ್ದ ರಫೀಕ್ನನ್ನು ತಲವಾರಿನಿಂದ ಬರ್ಬರವಾಗಿ ಕಡಿಯಲಾಗಿದೆ. ಜೊತೆಗಿದ್ದ ಜಾವೇದ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾವೇದ್
ಉಪ್ಪಳ ಮೂಲದ ರಫೀಕ್ ಅಂತರಾಜ್ಯ ಮಟ್ಟದ ಕುಖ್ಯಾತ ಆರೋಪಿಯಾಗಿದ್ದು ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕೊಲೆ ಕೇಸ್ಗಳು ಈತನ ಮೇಲೆ ದಾಖಲಾಗಿವೆ.
ಕಳೆದ ಕೆಲವರ್ಷಗಳಿಂದ ಜೈಲಿನಲ್ಲಿದ್ದ ಈತ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ .ಬಿಡುಗಡೆಯಾದ ಬಳಿಕವೂ ತನ್ನ ಚಾಳಿ ಮುಂದುವರಿಸಿದ್ದ ರಫೀಕ್ ಉಪ್ಪಳದ ವೈದ್ಯರೋರ್ವರಿಗೆ ಹಫ್ತಾಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ.
ಈತನ ವಿರೋಧಿಗಳಾದ ಉಪ್ಪಳದ ನೂರ್ ಅಲಿ ತಂಡ ಹತ್ಯೆ ಎಸಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರಿಸಿದ್ದಾರೆ.