ಬಿಷಪ್ ಕಾರ್ಯದರ್ಶಿಗೆ ಕಿರುಕುಳ, ಬೆದರಿಕೆ : 6 ಮಂದಿ ವಿರುದ್ಧ ಪ್ರಕರಣ
Team Udayavani, Mar 9, 2023, 6:53 AM IST
ಮಂಗಳೂರು: ನಗರದ ಬಲ್ಮಠದ ಸಿಎಸ್ಐ ಕೆಎಸ್ಡಿ ಸಭಾ ಪ್ರಾಂತ ಕಚೇರಿಯಲ್ಲಿ ಬಿಷಪ್ ಅವರ ಕಾರ್ಯದರ್ಶಿಯಾಗಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ, ಜೀವ ಬೆದರಿಕೆ ಹಾಕಿರುವ ಬಗ್ಗೆ 6 ಮಂದಿ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಜಾಂಚಿ ವಿನ್ಸೆಂಟ್ ಪಾಲನ್ನ 4 ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಕೆಲಸದಿಂದ ತೆಗೆಯಲು ಪ್ರಯತ್ನಿಸಿದ್ದಾರೆ, ಮಾನಭಂಗ ಮಾಡಿ ದ್ದಾರೆ. ತನಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಹೇಳಿ ಹೆದರಿಸಿದ್ದಾರೆ. 2022ರ ಆ.19ರಂದು ಕಾನೂನು ಸಲಹೆಗಾರ ಫಾದರ್ ನೊಯೆಲ್ ಕರ್ಕಡ ಕೂಡ ಮಾನಭಂಗ ಮಾಡಿದ್ದಾರೆ, ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ನೋಡುವಂತೆ ಬಲವಂತ ಮಾಡಿದ್ದಾರೆ. ಸ್ಟೋರ್ ಕೀಪರ್ ಮನೋಹರ ಅಮ್ಮನ್ನ ಮತ್ತು ಬಿಷಪ್ ಅವರ ಕಾರು ಚಾಲಕ ಕರುಣಾಕರ ಕುಂದರ್ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಸಿಸ್ಟರ್ ಸುಜಾತ ಮತ್ತು ಕಾರ್ಯದರ್ಶಿ ವಿಲಿಯಂ ಕೇರಿ ಅವರು ಕೂಡ ಅವಾಚ್ಯವಾಗಿ ಬೈದಿದ್ದಾರೆ. ಆರೋಪಿಗಳು ಪ್ರಭಾವಶಾಲಿಗಳಾಗಿದ್ದು ಬೆದರಿಸಿರುವುದರಿಂದ ಇದುವರೆಗೆ ದೂರು ನೀಡಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು ಅದರಂತೆ ಐಪಿಸಿ ಕಲಂ 354, 354ಎ, 354ಡಿ, 504, 506 ಮತ್ತು 34ರಡಿ ಎಫ್ಐಆರ್ ದಾಖಲಾಗಿದೆ.