ಮಂಗಳೂರು ವಿಮಾನ ನಿಲ್ದಾಣ ಈಗ ‘ಟಚ್ಲೆಸ್’! ; ಕೋವಿಡ್ 19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ
Team Udayavani, Oct 8, 2020, 6:30 AM IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಾ ಕ್ರಮ.
ಮಂಗಳೂರು: ಕೋವಿಡ್ 19 ಕಾರಣ ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ನೀಡಿರುವ ಮಂಗಳೂರು ವಿಮಾನ ನಿಲ್ದಾಣ “ಟಚ್ಲೆಸ್’ ಪರಿಕಲ್ಪನೆಯನ್ನು ಜಾರಿಗೊಳಿಸಿದೆ.
ಪ್ರಯಾಣಿಕರು ಹಾಗೂ ಸಿಬಂದಿ ಮಧ್ಯೆ ಸಂಪರ್ಕ ಕನಿಷ್ಠ ಗೊಳಿಸುವ ನಿಟ್ಟಿನಲ್ಲಿ “ಕಾಗದ ರಹಿತ’ ಏರ್ಪೋರ್ಟ್ ಆಗಿಯೂ ಮಂಗಳೂರು ವಿಮಾನ ನಿಲ್ದಾಣ ಬದಲಾಗುತ್ತಿದೆ.
ಹಿಂದೆ ಪ್ರಯಾಣಿಕರು ಬೋರ್ಡಿಂಗ್ ಪಾಸ್/ಟಿಕೆಟ್ ಹಾಗೂ ದಾಖಲೆಗಳನ್ನು ನಿಲ್ದಾಣ ಪ್ರವೇಶಿಸುವ ಮುನ್ನ ಸಿಐಎಸ್ಎಫ್ ಅಧಿಕಾರಿಗಳ ಕೈಗೆ ನೀಡಬೇಕಿತ್ತು. ಈಗ ಗಾಜಿನ ಕೌಂಟರ್ ಒಳಗೆ ಇರುವ ಅಧಿಕಾರಿಗಳಿಗೆ ಹೊರಗಿನಿಂದ ತೋರಿಸಿದರೆ ಸಾಕು. ಪ್ರಯಾಣಿಕರ “ಬ್ಯಾಗೇಜ್ ಟ್ಯಾಗ್’ ಪ್ರತಿಯನ್ನು ಕೂಡ ಕೈಯಲ್ಲಿ ನೀಡುತ್ತಿಲ್ಲ; ಬದಲಾಗಿ ಎಸ್ಎಂಎಸ್ ಮೂಲಕ ಲಭ್ಯವಿದೆ.
ತಪಾಸಣಾ ಕೆಮರಾ
“ಬೋರ್ಡಿಂಗ್ ಪಾಸ್’ ಇಲ್ಲವಾದರೆ ಮೊಬೈಲ್ನಲ್ಲಿರುವ “ಬಾರ್ಕೋಡ್’ ಅನ್ನು ನಿಲ್ದಾಣದಲ್ಲಿರುವ “ಕಿಯೋಸ್ಕ್’ನಲ್ಲಿ ಸ್ಕ್ಯಾನ್ ಮಾಡಿ (ಸ್ಪರ್ಶಿಸದೆ) ಪ್ರಿಂಟ್ ಪಡೆಯಬಹುದು. ತಪಾಸಣ ಕೌಂಟರ್ನಲ್ಲಿ ಕೆಮರಾ ಅಳವಡಿಸಲಾಗಿದೆ. ಪ್ರಯಾಣಿಕ ಕೆಮರಾದೆದುರು ನಿಂತು ಬೋರ್ಡಿಂಗ್ ಪಾಸನ್ನು ತೋರಿಸಬೇಕು.
ಪ್ರಯಾಣಿಕರ ಮೊಬೈಲ್, ಪರ್ಸ್ ಇತ್ಯಾದಿಗಳ ಪರಿಶೀಲನೆಗೆ ಬಳಸುವ ಟ್ರೇಯನ್ನು ಕೂಡ ಕೈಯಿಂದ ಮುಟ್ಟುವುದಿಲ್ಲ. ಒಮ್ಮೆ ಬಳಕೆಯಾದ ಟ್ರೇಯನ್ನು ಮತ್ತೆ ಬಳಸುವ ಮುನ್ನ ಸ್ಯಾನಿಟೈಸ್ ಮಾಡಲಾಗುತ್ತದೆ.
ಪ್ರಯಾಣಿಕರಿಂದಲೇ ಸ್ಕ್ಯಾನ್
ಬೋರ್ಡಿಂಗ್ ಪಾಸನ್ನು ಈ ಹಿಂದೆ ಏರ್ಲೈನ್ಸ್ ಸಿಬಂದಿ ಸ್ಕ್ಯಾನ್ ಮಾಡುತ್ತಿದ್ದರು. ಈಗ ಪ್ರಯಾಣಿಕರೇ ಮಾಡಬೇಕು. ಒಂದು ವೇಳೆ ಮೊಬೈಲ್ನಲ್ಲಿ ಬೋರ್ಡಿಂಗ್ ಪಾಸ್ ಇದ್ದರೆ ಅದರ ಸ್ಕ್ಯಾನಿಂಗ್ ಕೆಲವೊಮ್ಮೆ ಕಷ್ಟ. ಹಾಗಾದರೆ ಮಾತ್ರ ಪಾಸ್ನ ಮುದ್ರಿತ ಪ್ರತಿ ಅನಿವಾರ್ಯ. ಉಳಿದಂತೆ ಎಲ್ಲೂ ಕಾಗದ ಬಳಕೆ ಇಲ್ಲ.
“ವ್ಹೀಲ್ಚೇರ್’ನಲ್ಲಿ ಬರುವ ಪ್ರಯಾಣಿಕರಿಗೆ ನೆರವಾಗಲು ಏರ್ಲೈನ್ಸ್ ಸಿಬಂದಿ ಸುಸಜ್ಜಿತ “ಕಿಟ್’ ಬಳಸುತ್ತಾರೆ. ವಿಮಾನದಲ್ಲಿ ಮೂವರು ಕೂರುವ ಆಸನದಲ್ಲಿ ಮಧ್ಯದ ಪ್ರಯಾಣಿಕನಿಗೆ “ಬಾಡಿ ಗೌನ್’ ನೀಡಲಾಗುತ್ತದೆ ಎನ್ನುತ್ತಾರೆ ನಿಲ್ದಾಣ ದಲ್ಲಿರುವ ಇಂಡಿಗೋ ಸ್ಟೇಷನ್ ಮ್ಯಾನೇಜರ್ ಅರ್ಚನಾ ಅವರು.
ಸದ್ಯ ದೇಶೀಯ ವಿಮಾನ ಮಾತ್ರ
ಮಂಗಳೂರಿನಿಂದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ವಿಮಾನ ಯಾನ ಸೇವೆಗಳು ಲಭ್ಯವಿವೆ. ಲಾಕ್ಡೌನ್ಗೆ ಮೊದಲು ದೇಶೀಯವಾಗಿ ಬೆಂಗಳೂರು 10, ಹೈದರಾಬಾದ್ 2, ಚೆನ್ನೈ 2, ಮುಂಬಯಿಗೆ 6, ಹೊಸದಿಲ್ಲಿಗೆ 2 ವಿಮಾನಗಳು ಸಂಚರಿಸುತ್ತಿದ್ದವು. ದುಬಾೖ, ದೋಹಾ, ಕತಾರ್, ಶಾರ್ಜಾ, ಬಹ್ರೈನ್, ಕುವೈಟ್, ಮಸ್ಕತ್ಗೆ ಸಂಚರಿಸುತ್ತಿದ್ದವು. ಆದರೆ ಲಾಕ್ಡೌನ್ ಬಳಿಕ ಮಂಗಳೂರಿ ನಿಂದ ಬೆಂಗಳೂರಿಗೆ 4, ಚೆನ್ನೈಗೆ 1, ಹೈದರಾಬಾದ್ಗೆ 1, ಮುಂಬಯಿಗೆ 3, ಹೊಸದಿಲ್ಲಿಗೆ 1 ವಿಮಾನ ಲಭ್ಯವಿದೆ. ಕೇಂದ್ರ ಸರಕಾರದ “ವಂದೇ ಭಾರತ್’ ಅಡಿಯಲ್ಲಿ ವಿದೇಶಗಳಿಗೆ ವಿಶೇಷ ವಿಮಾನ ಮಾತ್ರ ಸದ್ಯ ಸಂಚರಿಸುತ್ತಿದೆ.
“ಮುನ್ನೆಚ್ಚರಿಕೆ ಕ್ರಮ ಜಾರಿ’
ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಸಿಬಂದಿ ಮಧ್ಯೆ ಸಂಪರ್ಕ ಕಡಿಮೆ ಮಾಡುವ ಉದ್ದೇಶದಿಂದ ನಿಲ್ದಾಣದಲ್ಲಿ ಟಚ್ಲೆಸ್ ವ್ಯವಸ್ಥೆಯನ್ನು ಅನುಷ್ಠಾನಿ ಸಲಾಗಿದೆ. ಪ್ರಯಾಣಿಕರು ಆನ್ಲೈನ್ ಬುಕ್ಕಿಂಗ್, ಆನ್ಲೈನ್ ಬ್ಯಾಗೇಜ್ ಟ್ಯಾಗ್ ಬಳಸಲು ಅವಕಾಶವಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
– ವಿ.ವಿ. ರಾವ್, ನಿರ್ದೇಶಕರು, ಮಂ. ಅಂ. ವಿಮಾನ ನಿಲ್ದಾಣ ಪ್ರಾಧಿಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ