ನೇತ್ರಾವತಿ-ಫಲ್ಗುಣಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಹೊಸ ಯೋಜನೆ
ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಸ್ತಾವ ಸಲ್ಲಿಕೆ
Team Udayavani, Nov 28, 2020, 9:37 AM IST
ಮಹಾನಗರ, ನ. 27: ಎರಡು ವರ್ಷದ ಹಿಂದೆ ಮೊದಲ ಬಾರಿಗೆ ನದಿ ಉತ್ಸವ ನಡೆಸಿ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ನೇತ್ರಾವತಿ-ಫಲ್ಗುಣಿ ನದಿ ಹಿನ್ನೀರು ಪ್ರದೇಶದಲ್ಲಿ ವಾಟರ್ ನ್ಪೋರ್ಟ್ಸ್ ಗೆ ಆದ್ಯತೆ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಹಿನ್ನೀರು ಪ್ರವಾಸೋದ್ಯಮದತ್ತ ಜನಾಕರ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.
ಕೋವಿಡ್ ಲಾಕ್ಡೌನ್ ಸಡಿಲಗೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಚೇತರಿಕೆ ಕಾಣುತ್ತಿದ್ದು, ದ.ಕ. ಜಿಲ್ಲೆಯ ನೇತ್ರಾವತಿ-ಫಲ್ಗುಣಿ ಹಿನ್ನೀರು ಪ್ರದೇಶಗಳಲ್ಲಿ ವಾಟರ್ ನ್ಪೋರ್ಟ್ಸ್ಗೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಮಂಗಳೂರಿನ ಜಪ್ಪಿನಮೊಗರು ಪ್ರದೇಶದಿಂದ ಕೂಳೂರು ನಡುವಣ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಪಟ್ಟಂತೆ ನೇತ್ರಾವತಿ ಇಕೋ ಟೂರಿಸಂ ಸಂಸ್ಥೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇದರಂತೆ, ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನ ನೀಡುವ ಉದ್ದೇಶದಿಂದ ವಾಟರ್ ನ್ಪೋರ್ಟ್ಸ್ ಅನುಷ್ಠಾನದ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ಇಲಾಖೆ ಮುಂದಾಗಿದೆ.
ಸಾಹಸ ಕ್ರೀಡೆಗೆ ಸಿದ್ಧತೆ :
ನೇತ್ರಾವತಿ ನದಿಯ ಹಿನ್ನೀರು ಪ್ರದೇಶದಲ್ಲಿ ಈ ಸಾಹಸ ಕ್ರೀಡೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಮುಖ್ಯವಾಗಿ ಜಪ್ಪಿನ ಮೊಗರು-ಕೂಳೂರು ನಡುವಣ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ 48 ಲಕ್ಷ ರೂ. ವೆಚ್ಚದಲ್ಲಿ 4 ಕ್ರೂಸ್ ಬೋಟ್ಗಳು, 2 ಶಿಖರ್ ಬೋಟ್ಗಳನ್ನು ಅಳವಡಿಸಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ಗಾರ್ಡನ್, ಬೆಂಚ್ಗಳು, ಸ್ಟಾಲ್, ಮತ್ತು ಇತರ ಕೆಲಸ ನಡೆಯಲಿದೆ. ಅದೇ ರೀತಿ 4 ಲಕ್ಷ ರೂ. ವೆಚ್ಚದಲ್ಲಿ ವಾಟರ್ ನ್ಪೋರ್ಟ್ಸ್ ಮತ್ತು ಬೋಟ್ಗೆ ಜೆಟ್ಟಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನಿತರ ಖರ್ಚಿಗಾಗಿ 8 ಲಕ್ಷ ರೂ. ಮೀಸಲಿಟ್ಟು ಒಟ್ಟು 70 ಲಕ್ಷ ರೂ. ವೆಚ್ಚದಲ್ಲಿ ಯೋಜನೆಯ ಪ್ರಸ್ತಾವ ಕಳುಹಿಸಲಾಗಿದೆ.
ನೇತ್ರಾವತಿ ಇಕೋ ಟೂರಿಸಂ ಸಂಸ್ಥೆ ಪ್ರಮುಖರಾದ ದಿನೇಶ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನದಿಯ ತಟದಲ್ಲಿರುವ ಆ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶಿದಿಂದ ಹೋಂ ಸ್ಟೇಗಳನ್ನು ತೆರೆಯಲು ಸಂಸ್ಥೆ ಮುಂದಾಗಿದೆ. ವಾಟರ್ ನ್ಪೋರ್ಟ್ಸ್
ಉದ್ದೇಶಕ್ಕೆಂದು 20×30 ಅಡಿಯ ಪ್ಲೋಟಿಂಗ್ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಸ್ಥಳದಲ್ಲಿ ಲೈಫ್ಗಾರ್ಡ್ ಸಹಿತ ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಅಳವಡಿಸಲಾಗುತ್ತದೆ. ಇನ್ನು, ಈ ಪ್ರದೇಶ ಅಭಿವೃದ್ಧಿಗೊಂಡರೆ ಸ್ಥಳೀಯರಿಗೆ ಉದ್ಯೋಗದ ಅವಕಾಶವೂ ಒದಗಿ ಬರಲಿದೆ ಎನ್ನುತ್ತಾರೆ.
2 ಲಕ್ಷ ಮಂದಿಯಿಂದ ಬೀಚ್ ವೀಕ್ಷಣೆ :
ಪ್ರವಾಸೋದ್ಯಮ ಕ್ಷೇತ್ರ ಇದೀಗ ಮತ್ತೆ ಹಳಿಯತ್ತ ಬರುತ್ತಿದ್ದು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ತಣ್ಣೀರುಬಾವಿ ಕಡಲ ತೀರಕ್ಕೆ ಒಂದು ತಿಂಗಳಲ್ಲಿ ಸುಮಾರು 1.50 ಲಕ್ಷ ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. ಕೊರೊನಾಗೂ ಹಿಂದೆ ತಿಂಗಳಲ್ಲಿ ಸುಮಾರು 3 ಲಕ್ಷ ಮಂದಿ ಆಗಮಿಸುತ್ತಿದ್ದರು. ಅದೇ ರೀತಿ ಪಣಂಬೂರು ಬೀಚ್ಗೆ ತಿಂಗಳಲ್ಲಿ ಸುಮಾರು 70 ಸಾವಿರ ಮಂದಿ ಬೀಚ್ ವೀಕ್ಷಿಸಿದ್ದಾರೆ. ಸಾಮಾನ್ಯವಾಗಿ ಈ ಹಿಂದೆ ತಿಂಗಳಲ್ಲಿ 1 ಲಕ್ಷ ಮಂದಿ ಬರುತ್ತಿದ್ದರು.
ಪ್ರವಾಸೋದ್ಯಮಕ್ಕೆ ಉತ್ತೇಜನ : ಕೋವಿಡ್ ಲಾಕ್ಡೌನ್ ಸಡಿಲಗೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಹಳಿಯತ್ತ ಬರುತ್ತಿದೆ. ಜಿಲ್ಲೆಯ ಬೀಚ್ಗಳು, ದೇವಸ್ಥಾನಗಳು ಸಹಿತ ಪ್ರವಾಸಿತಾಣಗಳತ್ತ ಜನರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ವಾಟರ್ ನ್ಪೋರ್ಟ್ಸ್ಗೆ ಆದ್ಯತೆ ನೀಡಲಾಗುವುದು. –ಸುಧೀರ್ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ