ರಸ್ತೆಯಲ್ಲಿ ಸೂಚನ ಫಲಕಗಳಿಲ್ಲದೆ ಗೊಂದಲ, ಅಪಘಾತ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Team Udayavani, Dec 13, 2019, 4:19 AM IST
ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೆಂಜಾರಿನಲ್ಲಿರುವ ಆಗಮನ ಮತ್ತು ನಿರ್ಗಮನ ಮಾರ್ಗದಲ್ಲಿ ಸಮ ರ್ಪಕ ಸೂಚನ ಫಲಕಗಳ ಕೊರತೆಯಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ – ಬರುವ ವಾಹನ ಚಾಲಕರು ಗೊಂದಲಕ್ಕೀಡಾಗಿ ಅಪಘಾತಕ್ಕೀಡಾಗುವ ಪರಿಸ್ಥಿತಿ ಇದೆ.
ಬಜಪೆ- ಮಂಗಳೂರು ರಾಜ್ಯ ಹೆದ್ದಾರಿ 67ಕ್ಕೆ ಕೆಂಜಾರಿನಲ್ಲಿ ವಿಮಾನ ನಿಲ್ದಾಣ ರಸ್ತೆ ಸೇರುತ್ತದೆ. ಇದು ಹಾವಿನ ಆಕಾ ರದ ತಿರುವಿನ ಏರುರಸ್ತೆಯಾಗಿದ್ದು, ಸಂಪೂರ್ಣ ಕಾಂಕ್ರೀಟ್ಗೊಂಡಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನ ಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚಾರಕ್ಕೆ ಪ್ರವೇಶವಿದೆ.
ಕೆಂಜಾರಿನ ವಾಜಪೇಯಿ ವೃತ್ತದಿಂದ ವಿಮಾನ ನಿಲ್ದಾಣ ಪ್ರವೇಶದ್ವಾರದ ಮೂಲಕ ಈ ರಸ್ತೆ ಆರಂಭಗೊಳ್ಳುತ್ತದೆ. ಇಲ್ಲಿ “ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಗೆ ಮಾತ್ರ ಪ್ರವೇಶ’ ಎಂದು ಸೂಚನ ಫಲಕ ಇಲ್ಲ. ವೃತ್ತದಲ್ಲಿರುವ ಹಲ ವಾರು ಫಲಕಗಳ ನಡುವೆ ಒಂದು ಬಾಣದ ಗುರುತಿನ ಫಲಕ ಇದ್ದು, ಇದು ವಾಹನ ಚಾಲಕನಿಗೆ ಕಾಣಿಸುವಂತೆ ಇಲ್ಲ.
ಪ್ರವೇಶ ಶುಲ್ಕ ಕೌಂಟರ್ ವರ್ಗಾವಣೆ
ಆಗಮನ ರಸ್ತೆಯ ಮೂಲಕ ಬರುವ ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕೌಂಟರ್ ಈಗ ವಿಮಾನ ನಿಲ್ದಾ ಣದ ಪಾರ್ಕಿಂಗ್ ಸ್ಥಳದ ಎದುರಿಗೆ ಸ್ಥಳಾಂತರವಾಗಿದೆ. ವಾಹನಗಳು ವಿಮಾನ ನಿಲ್ದಾಣ ದಿಂದ ಹಿಂದಿರುಗಿ ಅದೇ ರಸ್ತೆ ಯಲ್ಲಿ ವಾಪಸ್ ಹೋಗುವುದರಿಂದ ಅಪಘಾತ ವಾಗುವ ಸಾಧ್ಯತೆ ಇದೆ.
ಭದ್ರತಾ ಸಿಬಂದಿ ನೇಮಕ ಅಗತ್ಯ
ಆಗಮನ ರಸ್ತೆಯಿಂದ ಬರುವ ವಾಹನಗಳ ಪರಿಶೀಲನೆಗೆ ಭದ್ರತಾ ಸಿಬಂದಿ ನೇಮಕವಾದರೆ ವಾಹನಗಳು ಆ ರಸ್ತೆಯ ಮೂಲಕ ವಾಪಸ್ ಹೋಗುವುದನ್ನು ತಡೆಗಟ್ಟಬ ಹುವುದು, ಭದ್ರತೆಗೂ ಅನುಕೂಲ.
ವಿಮಾನ ನಿಲ್ದಾಣ ನಿರ್ಗಮನ ರಸ್ತೆ
ಈ ರಸ್ತೆ ಮೊದಲು ಅದ್ಯಪಾಡಿಗೆ ಹೋಗುವ ರಸ್ತೆಯನ್ನು ದಾಟಿ ಕೆಂಜಾರಿನಲ್ಲಿ ರಾಜ್ಯ ಹೆದ್ದಾರಿ 67ನ್ನು ಕೂಡುತ್ತದೆ. ಈ ಪ್ರದೇಶದಲ್ಲಿ ಬಜಪೆ -ಮಂಗಳೂರು ರಾಜ್ಯ ಹೆದ್ದಾರಿಯಿಂದ ಅದ್ಯಪಾಡಿ ಕಡೆಗೆ, ಅದ್ಯಪಾಡಿ ಮತ್ತು ವಿಮಾನ ನಿಲ್ದಾಣದಿಂದ ಬರುವ ವಾಹನಗಳಿಗೆ ಬಜಪೆ ಕಡೆಗೆ ಮತ್ತು ಮಂಗಳೂರು ಕಡೆಗೆ ಡಿವೈಡರ್ ಇದೆ. ಇಲ್ಲಿ ಒಂದೆಡೆ ಮಾತ್ರ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯ ಸೂಚಿಯಾಗಿ ಬಾಣದ ಗುರುತು ಇದೆ. ಕೆಂಜಾರಿನಿಂದ ಅದ್ಯಪಾಡಿಗೆ ಹೋಗುವ ರಸ್ತೆಯಲ್ಲಿ ಅದ್ಯಪಾಡಿ ಮತ್ತು ವಿಮಾನ ನಿಲ್ದಾ ಣದ ನಿರ್ಗಮನ ರಸ್ತೆಯ ಡಿವೈಡರ್ ಮಧ್ಯೆ “ವಿಮಾನ ನಿಲ್ದಾಣಕ್ಕೆ ಹೋಗುವ ವಾಹನ ಗಳಿಗೆ ನಿಷೇಧ’ ಎಂದು ಒಂದು ಸೈನ್ಬೋರ್ಡ್ ಮಾತ್ರ ಇದ್ದು, ದೊಡ್ಡ ಗಾತ್ರದ ಫಲಕ ಮತ್ತು ಸೈನ್ ಬೋರ್ಡ್ ಬೇಕು.
ಏನೇನು ಅಗತ್ಯ?
ವಿಮಾನ ನಿಲ್ದಾಣಕ್ಕೆ ಹೆಚ್ಚು ವೇಗವಾಗಿ ಬರುವ ಮತ್ತು ಹೋಗುವ ವಾಹನಗಳಿಗೆ ಮಾರ್ಗದರ್ಶಕ ಫಲಕಗಳು ಅಗತ್ಯ. ಇದಿಲ್ಲದೆ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ. ಕೆಂಜಾರಿನ ನಿರ್ಗಮನ ರಸ್ತೆಯಲ್ಲಿ ಡಿವೈಡರ್ಗಳ ಮೇಲೆ ಹುಲ್ಲು ಬೆಳೆದಿದೆ. ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೌಂದರ್ಯವನ್ನು ಕೆಡಿಸುತ್ತಿದೆ. ಆದಷ್ಟು ಬೇಗನೆ ಇದನ್ನು ಕಟಾವು ಮಾಡಿಸಬೇಕಾಗಿದೆ.
ತ್ರಿಭಾಷಾ ಫಲಕ ಬೇಕು
ಆಗಮನ ರಸ್ತೆಯಲ್ಲಿ “ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಗೆ ಮಾತ್ರ’ ಎನ್ನುವ ಫಲಕ, ಸಿಗ್ನಲ್ ಬೇಕಾಗಿದೆ. ಇಲ್ಲಿಯೇ ಪ್ರವೇಶ ದ್ವಾರದ ಫಲಕದ ಹಿಂಬದಿ ವಾಹನ ನಿರ್ಗಮನದ ಬಗ್ಗೆ ಇರುವ ಸೂಚನೆಯನ್ನು ಅಳಿಸಿಲ್ಲ. ಇದರಿಂದ ವಿಮಾನ ನಿಲ್ದಾಣದಿಂದ ಬರುವ ವಾಹನಗಳಿಗೂ ಇದು ನಿರ್ಗಮನ ರಸ್ತೆ ಎನ್ನುವಂತೆ ಭಾಸವಾಗುತ್ತಿದೆ.
ಸಿಗ್ನಲ್ ಅಳವಡಿಕೆ
ಈ ರಸ್ತೆಯಲ್ಲಿ ಅಪಘಾತದ ಬಗ್ಗೆ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ.ಈ ರಸ್ತೆ ಏಕಮುಖ ರಸ್ತೆಯಾಗಿರುವುದರಿಂದ ವಾಹನಗಳು ಹಿಂದಿರುಗಿ ಬರುವುದು ತಪ್ಪು. ರಸ್ತೆ ನಿರ್ಮಾಣದ ಹಂತದಲ್ಲಿ ಸಿಗ್ನಲ್ಗಳನ್ನು ಹಾಕಬೇಕಿತ್ತು. ವಿಮಾನ ನಿಲ್ದಾಣದ ಆಗಮನ-ನಿರ್ಗಮನ ರಸ್ತೆಯಾದ ಕಾರಣ ವಿಮಾನ ನಿಲ್ದಾಣ ಪ್ರಾಧಿಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಪರಿಶೀಲಿಸುತ್ತೇವೆ.
- ಮಂಜುನಾಥ ಶೆಟ್ಟಿ,, ಎಸಿಪಿ, ಮಂಗಳೂರು ಸಂಚಾರ ವಿಭಾಗ
ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ
ಆಗಮನ ಮತ್ತು ನಿರ್ಗಮನ ರಸ್ತೆಯಲ್ಲಿ ವಾಹನಗಳು ವಿರುದ್ಧ ದಿಕ್ಕಿನಿಂದ ಬಂದು ಕೆಲವು ಅಪಘಾತಗಳು ನಡೆದಿವೆ. ಸಮರ್ಪಕವಾದ ಸೂಚನ ಫಲಕ ಮತ್ತು ಸಿಗ್ನಲ್ಗಳು ಇದ್ದಲ್ಲಿ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ವಿಮಾನ ನಿಲ್ದಾಣ ಖಾಸಗೀಕರಣವಾಗುತ್ತಿದ್ದು, ಇದರ ಹೊಣಗಾರಿಕೆ ಯಾರಿಗೆ ಸೇರುತ್ತದೆ ಅಥವಾ ಯಾರಿಗೆ ಮನವಿ ಮಾಡುವುದು ಎಂದು ಹೇಳುವುದು ಕಷ್ಟ, ಟ್ರಾಫಿಕ್ ಇಲಾಖೆ ಅಥವಾ ಪೊಲೀಸ್ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೆಂಜಾರಿನ ರಸ್ತೆ ಡಿವೈಡರ್ನಲ್ಲಿ ಹುಲ್ಲುಗಳು ಬೆಳೆದಿದ್ದು, ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
- ಗಣೇಶ್ ಅರ್ಬಿ, ಮಳವೂರು ಗ್ರಾ.ಪಂ. ಅಧ್ಯಕ್ಷ