ಸಚ್ಛತೆ ಪಾಲಿಸದ ಗ್ರಾಮ ಚಾವಡಿ
Team Udayavani, Apr 18, 2018, 11:58 AM IST
ಪುತ್ತೂರು: ಪಟೇಲರ ಕಾಲದಲ್ಲಿ ನ್ಯಾಯ ತೀರ್ಮಾನ ಕೊಡುತ್ತಿದ್ದ ಗ್ರಾಮ ಚಾವಡಿ ಇಂದು ಅಶುಚಿತ್ವಕ್ಕೆ ಮಾದರಿ ಆಗಿದೆ. ಪುತ್ತೂರಿನ ಕಿಲ್ಲೆ ಮೈದಾನದ ಕೊನೆಯಲ್ಲಿ ಹಾಗೂ ಪುತ್ತೂರು ನಗರಸಭೆಗೆ ತಾಗಿಕೊಂಡೇ ಇದೆ ಈ ಗ್ರಾಮ ಚಾವಡಿ.
ಗ್ರಾಮ ಚಾವಡಿ ಎನ್ನುವುದು ಕಂದಾಯ ನಿರೀಕ್ಷಕರು ಹಾಗೂ ಪುತ್ತೂರು ಕಸ್ಬಾದ ಗ್ರಾಮ ಕರಣಿಕರ ಕಚೇರಿ. ಪುತ್ತೂರು ಹೋಬಳಿಗೆ ಸಂಬಂಧಪಟ್ಟ ಎಲ್ಲ ಕಂದಾಯ ಕೆಲಸಗಳು ಇಲ್ಲಿಯೇ ನಡೆಯಬೇಕು. ಪುತ್ತೂರು ಕಸ್ಬಾಕ್ಕಂತೂ ಜೀವನಾಡಿ. ಪ್ರತಿ ಕಾರ್ಯಕ್ಕೂ ಗ್ರಾಮ ಚಾವಡಿಯನ್ನೇ ಅವಲಂಬಿಸಬೇಕು. ಹೀಗಿರುವ ಗ್ರಾಮ ಚಾವಡಿಯಲ್ಲಿ ಶುಚಿತ್ವ ಕಾರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಖೇದಕರ.
ವರ್ಷದ ಹಿಂದೆ ದೇಶ, ರಾಜ್ಯ ಮಾತ್ರವಲ್ಲ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲೂ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಸರಕಾರಿ ಕಚೇರಿಗಳ ಸ್ವತ್ಛತಾ ಕಾರ್ಯವನ್ನು ಆಗಿನ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆಸಲಾಯಿತು. ಹೀಗೆ ಸ್ವತ್ಛತೆ
ಮಾಡುವಾಗ ಗ್ರಾಮ ಕರಣಿಕರ ಕಚೇರಿಯನ್ನೂ ಶುಚಿ ಮಾಡಬೇಕಿತ್ತಲ್ಲವೇ? ಆದರೆ ಈ ಗ್ರಾಮ ಚಾವಡಿ ಹಿಂದಿನಂತೆಯೇ ಜೋತು ಬಿದ್ದುಕೊಂಡಿದೆ.
ಹೆಚ್ಚೇಕೆ, ಗ್ರಾಮ ಚಾವಡಿಯ ಬಾಗಿಲ ಬಳಿಯೇ ಒಂದಷ್ಟು ಸಾರ್ವಜನಿಕ ಪ್ರಕಟನೆಗಳನ್ನು ಅಂಟಿಸಿರುವುದು ಕಂಡು ಬರುತ್ತದೆ. ಗ್ರಾಮ ಚಾವಡಿಯ ಒಟ್ಟು ಅವ್ಯವಸ್ಥೆಯನ್ನು ತಿಳಿಸಲು ಇಷ್ಟೇ ಸಾಕು. ಊರಿಗೇ ಮಾದರಿ ಆಗಬೇಕಾದ ಗ್ರಾಮ ಚಾವಡಿ, ಅವ್ಯವಸ್ಥೆಗಳ ಆಗರ ಆಗಿರುವುದು ಎಷ್ಟು ಸರಿ? ತಹಶೀಲ್ದಾರ್ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಗ್ರಾಮ ಚಾವಡಿ ಪುತ್ತೂರಿಗೇ ಮಾದರಿ ಆಗಿ ಬೆಳೆಯಬೇಕು.
ಎಸ್.ಎನ್. ಅಮೃತ್, ಪುತ್ತೂರು