ಕರಾವಳಿಯ ಹಲವೆಡೆ ಮಳೆ: 2 ದಿನ ಆರೆಂಜ್ ಅಲರ್ಟ್
Team Udayavani, Sep 9, 2022, 7:26 AM IST
ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದೆ. ಮಂಗಳೂರು ಸಹಿತ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಮಳೆ ಆರಂಭಗೊಂಡಿದ್ದು, ಗುರುವಾರವೂ ಮುಂದುವರಿದಿತ್ತು. ಕೆಲವು ಕಡೆಗಳಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆಯುವ ನಿರೀಕ್ಷೆ ಇದ್ದು, ಸೆ. 8ರಿಂದ 9ರಂದು “ಆರೆಂಜ್ ಅಲರ್ಟ್’ ಘೋಷಿಸಿದೆ. ಸೆ.10 ರಿಂದ 12ರವರೆಗೆ ರಂದು ಎಲ್ಲೋ ಅಲರ್ಟ್ ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.
ಉಡುಪಿ: ಸಾಧಾರಣ ಮಳೆ:
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಸಾಧಾರಣ ಮಳೆ ಸುರಿದಿದೆ. ಬೆಳಗ್ಗೆಯಿಂದಲೇ ತುಂತುರು ಮಳೆ ಸುರಿಯಲಾರಂಭಿಸಿತ್ತು. ಅಪರಾಹ್ನದ ಬಳಿಕ ಉತ್ತಮ ಮಳೆಯಾಯಿತು. ಪಡುಬಿದ್ರಿ, ಕಾಪು, ಕಾರ್ಕಳ, ಉದ್ಯಾವರ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಉಡುಪಿ, ಮಣಿಪಾಲ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.