ಮಂಗಳೂರು ಏರ್ಪೋರ್ಟ್ ಖಾಸಗೀಕರಣ
Team Udayavani, Feb 15, 2020, 5:24 AM IST
ಮಂಗಳೂರು: ಕಳೆದ ವರ್ಷ ಖಾಸಗೀ ಕರಣಗೊಂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಶುಕ್ರವಾರ ಅಧಿಕೃತ ಸಹಿ ಹಾಕಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಉನ್ನತ ಅಧಿಕಾರಿಗಳು ಹಾಗೂ ಅದಾನಿ ಸಮೂಹ ಸಂಸ್ಥೆಗಳ ಪ್ರಮುಖರು ಒಪ್ಪಂದಕ್ಕೆ ಸಹಿ ಹಾಕಿದ್ದು, ಖಾಸಗಿ ಪಾಲುದಾರಿಕೆ ಅಡಿಯಲ್ಲಿ ನಿರ್ವಹಣೆಗಾಗಿ ಮುಂದಿನ 50 ವರ್ಷಗಳಿಗೆ ನಿಲ್ದಾಣವನ್ನು ಗುತ್ತಿಗೆಗೆ ನೀಡಿದಂತಾಗಿದೆ. ಜತೆಗೆ ಅಹ್ಮದಾಬಾದ್ ಮತ್ತು ಲಕ್ನೋ ವಿಮಾನ ನಿಲ್ದಾಣಗಳ ಹಸ್ತಾಂತರಕ್ಕೂ ಸಹಿ ಹಾಕಲಾಗಿದೆ.
ಕೇಂದ್ರ ಸರಕಾರ ಮತ್ತು ಅದಾನಿ ಸಂಸ್ಥೆಯ ಮಧ್ಯೆ ಇತರ ಆಡಳಿತಾತ್ಮಕ ಪ್ರಕ್ರಿಯೆಗಳು ಇನ್ನಷ್ಟೇ ಆರಂಭಗೊಳ್ಳಬೇಕಿದ್ದು, ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಹಾಗೂ ಟರ್ಮಿನಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅದಾನಿ ಸಂಸ್ಥೆಯೇ ಸಂಪೂರ್ಣವಾಗಿ ಕೈಗೆತ್ತಿಕೊಳ್ಳಲು ಇನ್ನೂ ಕೆಲವು ತಿಂಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.ವಿಮಾನ ನಿಲ್ದಾಣ ಖಾಸಗೀಕರಣ ಹಿನ್ನೆಲೆಯಲ್ಲಿ ಸದ್ಯ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಉದ್ಯೋಗ ಮುಂದುವರಿಸುವ ಮತ್ತು ಇತರರ ನೇಮಕ ಕುರಿತಂತೆಯೂ ಇನ್ನಷ್ಟೇ ಎಎಐ ಮತ್ತು ಅದಾನಿ ಸಂಸ್ಥೆ ಮಾತುಕತೆ ನಡೆಸಲಿದೆ.
ಕೋಟ್ಯಂತರ ರೂ. ಹೂಡಿಕೆ ನಿರೀಕ್ಷೆ
ವಿಮಾನ ನಿಲ್ದಾಣದ ಜವಾಬ್ದಾರಿ ವಹಿಸಿಕೊಂಡ ಬಳಿಕ ಅದಾನಿ ಸಂಸ್ಥೆ ಕೋಟ್ಯಂತರ ರೂ. ಹೂಡಿಕೆ ಮಾಡುವ ನಿರೀಕ್ಷೆಯಿದೆ. ಬಹುನಿರೀಕ್ಷೆಯ ರನ್ವೇ ವಿಸ್ತರಣೆಗೂ ಮೊದಲ ಆದ್ಯತೆ ನೀಡಲಿದೆ. ಜತೆಗೆ ದಿಲ್ಲಿ-ಮುಂಬಯಿ ಏರ್ಪೋರ್ಟ್ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್ಗಳು ಬರುವ ಸಾಧ್ಯತೆಯಿದೆ.
ಏರ್ಪೋರ್ಟ್ ಆಸ್ತಿ ಪರಿಶೀಲನೆ,
ಏರ್ಲೈನ್ ಅಧ್ಯಯನ!
ಕೇಂದ್ರ, ರಾಜ್ಯ ಸರಕಾರ ಮತ್ತು ಅದಾನಿ ಸಂಸ್ಥೆಯ ಜತೆಗೆ ಇನ್ನೂ ಕೆಲವು ಒಡಂಬಡಿಕೆ, ಪತ್ರ ವ್ಯವಹಾರ ನಡೆಯಬೇಕಿದೆ. ಜತೆಗೆ ಮಂಗಳೂರು ವಿಮಾನ ನಿಲ್ದಾಣದ ಆಸ್ತಿಗಳ ಪರಿಶೀಲನೆ, ಸಿಬಂದಿ ಕೆಲಸ ಕಾರ್ಯ, ಆದಾಯದ ಮೂಲ, ಏರ್ಲೈನ್ ಸಂಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಒಟ್ಟು ವಿಚಾರಗಳ ಬಗ್ಗೆ ಅದಾನಿ ಸಂಸ್ಥೆಯ ಪ್ರಮುಖರು ಅಧ್ಯಯನ ಆರಂಭಿಸಲಿದ್ದಾರೆ.