ಎಡಕುಮೇರಿ: ರೈಲ್ವೇ ಸಿಬಂದಿ ರಕ್ಷಣೆ
Team Udayavani, Aug 18, 2018, 1:50 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಎಡಕುಮೇರಿ ಬಳಿ ರೈಲು ಹಳಿ ಮೇಲೆ ಬಿದ್ದ ಗುಡ್ಡ ತೆರವು ಕಾರ್ಯಕ್ಕೆ ತೆರಳಿದ್ದ ರೈಲ್ವೇ ಸಿಬಂದಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆ ಕಾರ್ಯ ಶುಕ್ರವಾರ ನಡೆಯಿತು. ವಿಪರೀತ ಮಳೆಗೆ ಎಡಕುಮೇರಿ ರೈಲು ನಿಲ್ದಾಣದ ಬಳಿಯ ಕಾಗಿನೆರೆ ಬಳಿ ಗುಡ್ಡ ರೈಲು ಹಳಿ ಮೇಲೆ ಬಿದ್ದಿತ್ತು. ಬಂಡೆ ಮತ್ತು ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸಕಲೇಶಪುರ ಭಾಗದ ಸಿಬಂದಿ ತೆರಳಿದ್ದರು. ರೈಲು ಮಾರ್ಗದ 2 ಕಡೆ ಗುಡ್ಡ ಜರಿದು ಬಿದ್ದಿದ್ದರಿಂದ ಅದರ ನಡುವೆ 12 ಮಂದಿ ಸಿಲುಕಿ ಹಾಕಿಕೊಂಡಿದ್ದು, ಎರಡು ದಿನಗಳಿಂದ ಅನ್ನ ಆಹಾರವಿಲ್ಲದೆ ಸಮಸ್ಯೆಗೆ ಒಳಗಾಗಿದ್ದರು. ಇವರೆಲ್ಲರನ್ನು ಶುಕ್ರವಾರ ರಕ್ಷಣೆ ಮಾಡಲಾಯಿತು.
ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ತಹಶೀಲ್ದಾರ್ ಗಿರೀಶ್ ನಂದನ್ ನೇತೃತ್ವದಲ್ಲಿ ತೆರಳಿದ ತಂಡ ಸಂಕಷ್ಟದಲ್ಲಿದ್ದ ಸಿಬಂದಿಗೆ ಆಹಾರ ನೀಡಿ ಅವರ ರಕ್ಷಣೆ ಮಾಡಿದರು. ಕಾರ್ಮಿಕರು ಅಪಾಯವಿಲ್ಲದೆ ಸುರಕ್ಷಿತವಾಗಿ ಸಕಲೇಶಪುರಕ್ಕೆ ತಲುಪಿದರು.