ಮುಂದುವರಿದ ಮಳೆ; “ಆರೆಂಜ್ ಅಲರ್ಟ್’: ಉಳ್ಳಾಲ: ಮಳೆಯಿಂದ 2 ಮನೆಗಳಿಗೆ ಹಾನಿ
ಮರವಂತೆ: ಕಡಲ್ಕೊರೆತ ಬಿರುಸು
Team Udayavani, Jun 30, 2022, 2:30 AM IST
ಮಂಗಳೂರು/ ಉಡುಪಿ: ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಂಗಳವಾರ ಮಧ್ಯರಾತ್ರಿ ಆರಂಭಗೊಂಡ ಮಳೆ ಬುಧವಾರವೂ ಮುಂದುವರಿದಿತ್ತು. ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮಳೆ ಬಿರುಸು ಪಡೆದಿತ್ತು.ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ. 30ಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜು. 1ರಿಂದ 3ರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಇರಲಿದ್ದು, ಸಮುದ್ರದ ಅಬ್ಬರ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಬಿಟ್ಟುಬಿಟ್ಟು ಮಳೆಯಾಗಿದೆ. ಹೆಬ್ರಿ, ಕುಂದಾಪುರ, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳವಾರ ತಡರಾತ್ರಿ, ಬುಧವಾರ ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾರ್ಕಳ, ಕಾಪು, ಭಾಗದಲ್ಲಿ ಮಳೆಯಾಗಿದೆ. ಗಾಳಿ, ಮಳೆಯಿಂದಾಗಿ ಮುಂಡ್ಕೂರು ಭಾಗದಲ್ಲಿ ಮನೆಗೆ ಹಾನಿ ಸಂಭವಿಸಿದೆ.
ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ ಬುಧವಾರ 26.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಕಡಿಮೆ ಇತ್ತು. 22.9 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಉಳ್ಳಾಲ: ಮಳೆಯಿಂದ 2 ಮನೆಗಳಿಗೆ ಹಾನಿ
ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯ ಪರಿಣಾಮವಾಗಿ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಬುಧವಾರ ನಸುಕಿನಲ್ಲಿ ಮನೆಯೊಂದರ ಛಾವಣಿ ಕುಸಿದಿದೆ. ಮಲಗಿದ್ದ ದಂಪತಿ, ಇಬ್ಬರು ಮಕ್ಕಳು ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ. ಛಾವಣಿಯ ಹೆಂಚು ಬಿದ್ದು ಮನೆ ಯಜಮಾನ ಭಾಸ್ಕರ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಂಜನಾಡಿ ಅಸೈ ಮದಕದಲ್ಲಿ ಪ್ರವೀಣ್ ಅವರ ಮನೆಯ ಹಿಂಭಾಗದ ರಸ್ತೆ ಬದಿ ಕುಸಿದು ಮನೆಯ ಹಿಂಭಾಗಕ್ಕೆ ಹಾನಿಯಾಗಿದೆ. ರಸ್ತೆಗೂ ಹಾನಿಯಾಗಿದೆ.
ಖಾದರ್ ಭೇಟಿ
ಹಾನಿಗೀಡಾಗಿರುವ ಮನೆಗಳನ್ನು ಶಾಸಕ ಯು.ಟಿ. ಖಾದರ್ ಪರಿಶೀಲಿಸಿ ಸಾಂತ್ವನ ಹೇಳಿದರು. ಭಾಸ್ಕರ್ ಅವರ ಮನೆಗೆ ಮಾನವೀಯ ನೆಲೆಯಲ್ಲಿ ತುರ್ತು ಪರಿಹಾರ ನೀಡಿ ಬಳಿಕ ಎಂಜಿನಿಯರ್ ಆಗಮಿಸಿ ಹಾನಿಯ ಅಂದಾಜು ಲೆಕ್ಕ ಮಾಡಿ ನಷ್ಟಕ್ಕೆ ಪರಿಹಾರ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಮುಂದುವರಿದ ಕಡಲ್ಕೊರೆತ
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸಮುದ್ರ ಪ್ರಕ್ಷಬ್ಧಗೊಂಡಿದ್ದು, ಉಳ್ಳಾಲ ಸೀಗ್ರೌಂಡ್ನಲ್ಲಿ ತೀರ ಪ್ರದೇಶ ಸಮುದ್ರಪಾಲಾಗುತ್ತಿದೆ. 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಬಟ್ಟಪ್ಪಾಡಿಯಲ್ಲೂ 15ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು ತೆಂಗಿನ ಮರಗಳು ಸಮುದ್ರಪಾಲಾಗುತ್ತಿವೆ.
ಮರವಂತೆ: ಕಡಲ್ಕೊರೆತ ಬಿರುಸು
ಕುಂದಾಪುರ: ಮರವಂತೆ ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದ ಕಡಲಬ್ಬರ ಜೋರಾಗಿದ್ದು, ಕಡಲ್ಕೊರೆತ ಆರಂಭವಾಗಿದೆ.ಸುಮಾರು 200 ಮೀ. ವರೆಗಿನ ತೀರ ಪ್ರದೇಶದಲ್ಲಿರುವ ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಕಡಲ್ಕೊರೆತ ತಡೆಗೆ ಹಾಕಿರುವ ಕಲ್ಲುಗಳು ಕುಸಿದು ಸಮುದ್ರ ಸೇರುತ್ತಿವೆ.
ಮರವಂತೆ ಮಾತ್ರವಲ್ಲದೆ ತ್ರಾಸಿಯ ಕಂಚುಗೋಡು, ಗುಜ್ಜಾಡಿಯ ಬೆಣೆYರೆ ಭಾಗದಲ್ಲೂ ಕಡಲಬ್ಬರ ಜೋರಾಗಿದೆ.
ಕಳೆದ ತೌಖೆ¤à ಚಂಡಮಾರುತದ ಅನಂತರ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದೆ. ಒಂದು ವರ್ಷದಲ್ಲಿ ಸಮುದ್ರ ಕೊರೆತ ಉಂಟಾಗಿ ಸುಮಾರು 50 ಮೀ. ಕಡಲು ಮುಂದಕ್ಕೆ ಬಂದಿದೆ. ಹೀಗೇ ಮುಂದುವರಿದರೆ ಇಲ್ಲಿ ನಿಶ್ಚಿಂತೆಯಿಂದ ಇರುವುದಾದರೂ ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ತತ್ಕ್ಷಣಕ್ಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲವಾದರೂ ತಾತ್ಕಾಲಿಕ ಕ್ರಮಗಳ ನ್ನಾದರೂ ಕೈಗೊಳ್ಳದಿದ್ದರೆ ಮೀನುಗಾರರ ಶೆಡ್, ಮನೆಗಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಜನ ತಿಳಿಸಿದ್ದಾರೆ.