ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ
Team Udayavani, May 22, 2022, 9:54 PM IST
ಪುತ್ತೂರು: ರವಿವಾರ ಮಳೆ ನೀರು ಮನೆ ವಠಾರಕ್ಕೆ ಹರಿದಿರುವುದು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬಿರುಸು ಪಡೆದಿದ್ದು, ಜಿಲ್ಲೆಯಾದ್ಯಂತ ರವಿವಾರ ಉತ್ತಮ ಮಳೆಯಾಗಿದೆ.
ಸುಬ್ರಹ್ಮಣ್ಯ, ಸುಳ್ಯ, ಪಂಜ, ಗುತ್ತಿಗಾರು, ಐವರ್ನಾಡು, ಜಾಲೂÕರು, ಅರಂತೋಡು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ವೇಣೂರು, ಚಾರ್ಮಾಡಿ, ಮಡಂತ್ಯಾರು, ಗುರುವಾಯನಕೆರೆ, ಉಪ್ಪಿನಂಗಡಿ, ಪುತ್ತೂರು, ಕಡಬ, ಬಂಟ್ವಾಳ, ವಿಟ್ಲ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಲ್ಕಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಮಂಗಳೂರಿನಲ್ಲಿ ಬಿರುಸಿನ ಮಳೆ
ಮಂಗಳೂರು ನಗರದಲ್ಲಿ ರವಿವಾರ ಮಧ್ಯಾಹ್ನ ವೇಳೆ ಒಂದು ತಾಸು ಬಿರುಸಾದ ಮಳೆಯಾಗಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿತ್ತು. ನಗರದ ಅತ್ತಾವರ, ಕೊಟ್ಟಾರಚೌಕಿ, ಪಾಂಡೇಶ್ವರ, ಎಂ.ಜಿ. ರಸ್ತೆ, ಕೊಡಿಯಾಲ್ಬೈಲ್ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಆ್ಯಂಬುಲೆನ್ಸ್ ಮಳೆ ನೀರಿನಲ್ಲಿ ಸಿಲುಕಿದ ಘಟನೆ ನಡೆಯಿತು. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ಈ ಅವಾಂತರ ಸೃಷ್ಟಿಯಾಗಿದೆ.
ಉಡುಪಿ: ಮೋಡ-ಬಿಸಿಲು
ಉಡುಪಿ ಜಿಲ್ಲೆಯಲ್ಲಿ ರವಿವಾರ ದಿನವಿಡೀ ಮೋಡ- ಬಿಸಿಲಿನ ಆಟ ಕಂಡುಬಂದಿದ್ದು, ಆಗಾಗ ತುಂತುರು ಮಳೆಯಾಗಿದೆ.
ಇಂದು ಎಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಮೇ 23ರ ಬೆಳಗ್ಗೆವರೆಗೆ ಎಲ್ಲೋ ಅಲರ್ಟ್ ಘೋಷಿಸಿದೆ. ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.
ಕೃತಕ ನೆರೆ: ಮನೆಗಳಿಗೆ ಆತಂಕ
ಪುತ್ತೂರು: ದರ್ಬೆಯ ಕೆ.ವಿ. ಶೆಣೈ ಕೌಂಪೌಂಡ್ ರಸ್ತೆಯಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು, ಹತ್ತಾರು ಮನೆಗಳಿಗೆ ಆತಂಕ ಉಂಟಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನೇರವಾಗಿ ಮನೆ ಅಂಗಳಕ್ಕೆ ನುಗ್ಗುತ್ತಿದೆ. ತಾಸುಗಟ್ಟಲೆ ಮಳೆ ಸುರಿದರೆ ಮನೆಗಳ ಒಳಗೆ ನುಗ್ಗುವ ಭೀತಿ ಉಂಟಾಗಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ನಗರಸಭೆಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.