ಹವಾಮಾನ ಮಾಹಿತಿಗೆ ಎಸ್ ಬ್ಯಾಂಡ್ ರಾಡಾರ್
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಧುನಿಕ ವ್ಯವಸ್ಥೆ
Team Udayavani, Nov 28, 2019, 4:01 AM IST
ಮಹಾನಗರ: ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇ ಮತ್ತು ಪರಿಸರದ ಹವಾಮಾನ ಮಾಹಿತಿಯನ್ನು ಕ್ಷಣಕ್ಷಣಕ್ಕೆ ನೀಡುವ ಅತ್ಯಾಧುನಿಕ ಎಸ್ ಬ್ಯಾಂಡ್ ಮಾದರಿಯ ರಾಡಾರ್ ನಿರ್ಮಾಣಕ್ಕೆ ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದೆ.
ಈ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಶೀಘ್ರ ಅನುಷ್ಠಾನವಾಗುವ ನಿರೀಕ್ಷೆಯಿದೆ. ಸದ್ಯ ಹವಾಮಾನ ಮಾಹಿ ತಿಗಾಗಿ ಕಾರ್ಯಾಚರಿಸುತ್ತಿರುವ “ಇನ್ಸ್ಟ್ರೆಮೆಂಟ್ ಲ್ಯಾಂಡಿಂಗ್ ಸಿಸ್ಟಂ’ (ಐಎಲ್ಎಸ್) ಕಟ್ಟಡದಲ್ಲಿಯೇ ನೂತನ ರಾಡಾರ್ ಸ್ಥಾಪನೆಗೆ ಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಲವು ಪಿಲ್ಲರ್ಗಳಷ್ಟೇ ಬೇಕಿರುವುದರಿಂದ ಸ್ಥಾಪನೆ ವೆಚ್ಚವೂ ಕಡಿಮೆಯಾಗಲಿದೆ.
ಸದ್ಯ ವಿಮಾನ ನಿಲ್ದಾಣದಲ್ಲಿ ವಿಮಾನ ಗಳ ಆಗಮನ-ನಿರ್ಗಮನ ವೇಳೆ ರನ್ ವೇಸಹಿತ ಪರಿಸರದ ಹವಾಮಾನದ ಬಗ್ಗೆ ನಿಗದಿತ ಸಮಯಕ್ಕೆ ಅನುಗುಣವಾಗಿ ಮಾಹಿತಿ ಪಡೆಯಲಾಗುತ್ತದೆ. ಇದಕ್ಕಾಗಿಯೇ ಸುಸ ಜ್ಜಿತ ಕಚೇರಿ, 12 ತಜ್ಞರು ಇದ್ದಾರೆ. ಈ ವ್ಯವಸ್ಥೆ ಯನ್ನು ಇನ್ನಷ್ಟು ಉನ್ನತೀಕರಿಸುವುದೇ ಎಸ್ ಬ್ಯಾಂಡ್ ರಾಡಾರ್ ಸ್ಥಾಪನೆಯ ಉದ್ದೇಶ. ಹೊಸದಿಲ್ಲಿ, ಮುಂಬಯಿ, ಚೆನ್ನೈ ಅಂ. ವಿಮಾನ ನಿಲ್ದಾಣಗಳಲ್ಲಿ ಇದು ಈಗಾಗಲೇ ಜಾರಿಯಲ್ಲಿದೆ.
ಒಪ್ಪಿಗೆಯಿಲ್ಲ
ಮಂಗಳೂರು ನಿಲ್ದಾಣದಲ್ಲಿ 20 ಕೋ.ರೂ ವೆಚ್ಚದಲ್ಲಿ “ಟಾಪ್ ಫ್ಲೋರ್ ವೆದರ್ ರಾಡಾರ್’ ಸ್ಥಾಪಿಸಲು ಕೇಂದ್ರ ಸರಕಾರ ಮೊದಲಿಗೆ ನಿರ್ಧರಿಸಿತ್ತು. ಶಕ್ತಿನಗರದಲ್ಲಿ ಜಾಗ ಗುರುತಿಸಿ 5 ಮಹಡಿ ಕಟ್ಟಡ ನಿರ್ಮಾಣಕ್ಕೂ ಉದ್ದೇಶಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡದ್ದರಿಂದ ಎಸ್. ಬ್ಯಾಂಡ್ ಮಾದರಿಯ ರಾಡಾರ್ ಆರಂಭಿಸಲು ಚಿಂತನೆ ನಡೆಸಿದ್ದು, ಒಪ್ಪಿಗೆ ಲಭಿಸಿದೆ.
ಕಾರ್ಯನಿರ್ವಹಣೆ ಹೇಗೆ?
ಈ ರಾಡಾರ್ ವಾತಾವರಣಕ್ಕೆ ಸಂಕೇತಗಳನ್ನು ರವಾನಿಸುತ್ತದೆ. ಪ್ರತಿಫಲನಗೊಂಡು ಹಿಂದಿರುಗಿದ ಈ ಸಂಕೇತಗಳನ್ನು ವಿಶ್ಲೇಷಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ. ಇದರಿಂದ ಮೋಡಗಳ ಸ್ಥಿತಿಗತಿ, ಗಾತ್ರ, ಸಾಂದ್ರತೆ, ತೇವಾಂಶ ಇತ್ಯಾದಿ ನಿಖರವಾಗಿ ತಿಳಿಯುತ್ತದೆ. ಇದರ ಮೂಲಕ ಸ್ಯಾಟಲೈಟ್ ಚಿತ್ರಗಳು, ಭಾತರದ ಯಾವುದೇ ಮೂಲೆಯ ಹವಾಮಾನ ಕೂಡ ತಿಳಿಯಲು ಸಾಧ್ಯ. ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಹವಾ ಮಾನ ಸಂಬಂಧಿ ಯಾವುದೇ ಅಪಾಯಕಾರಿ ವಿದ್ಯಮಾನಗಳಿದ್ದರೂ ಅದು ಮುನ್ಸೂಚನೆ ನೀಡಬಲ್ಲುದು. ಇದರಿಂದ ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಲು ಸಾಧ್ಯ.
ಶೀಘ್ರ ಕಾರ್ಯಾರಂಭ
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ-ನಿರ್ಗಮನ ಸಂದರ್ಭ ಹವಾಮಾನದ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಅತ್ಯಂತ ಸುಧಾರಿತ ಎಸ್. ಬ್ಯಾಂಡ್ ರಾಡಾರ್ ಸ್ಥಾಪಿಸಲು ಕೇಂದ್ರ ಹವಾಮಾನ ಇಲಾಖೆ ನಿರ್ಧರಿಸಿದೆ. ಶೀಘ್ರದಲ್ಲಿ ಈ ಕುರಿತಂತೆ ಕಾರ್ಯ ಆರಂಭವಾಗಲಿದೆ.
- ಯದುಕಲೇಶ್ ಎಸ್., ಹವಾಮಾನ ತಜ್ಞರು, ಮಂಗಳೂರು ಅಂ. ವಿಮಾನ ನಿಲ್ದಾಣ
- ದಿನೇಶ್ ಇರಾ