Sasihithlu Yakshagana ಮೇಳದ ಕಲಾವಿದ ನಲ್ಕ ಜಗದೀಶ ನಿಧನ
Team Udayavani, Apr 7, 2023, 1:04 PM IST
ಹಳೆಯಂಗಡಿ : ತುಳುನಾಡಿನ ಪ್ರತಿಷ್ಠಿತ ಯಕ್ಷಗಾನ ಮೇಳವಾದ ಸಸಿಹಿತ್ಲು ಶ್ರೀ ಭಗವತೀ ಮೇಳದ ಬಹುಮುಖ ಪ್ರತಿಭಾವಂತ ಕಲಾವಿದ ನಲ್ಕ ಜಗದೀಶ ( 56 )ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಾಸರಗೋಡು ತಾಲೂಕಿನ ನಲ್ಕ ಎಂಬಲ್ಲಿ ಜನಿಸಿದ ಜಗದೀಶರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸತ್ಯನಾರಾಯಣ ಹೈಸ್ಕೂಲ್ ಪೆರ್ಲ ಇದರಲ್ಲಿ ಪೂರೈಸಿ ಜೊತೆಯಲ್ಲಿ ಸಬ್ಬಣ ಕೊಡಿ ರಾಮಭಟ್ಟರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ಮುಂದೆ ಹವ್ಯಾಸಿ ಕಲಾವಿದರಾಗಿ ಊರಿನ ಹೆಮ್ಮೆಗೆ ಪಾತ್ರರಾಗಿದ್ದರು.
ಎಳವೆಯಲ್ಲಿಯೇ ಯಕ್ಷಗಾನ, ನಾಟಕ, ಹರಿಕಥೆ, ಏಕಪಾತ್ರ ಅಭಿನಯ ಮುಂತಾದ ಹಲವು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪುಗೊಂಡು ಹಲವಾರು ವರ್ಷಗಳಿಂದ ಸಸಿಹಿತ್ಲು ಭಗವತೀ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.
ಹೊಸ ಪ್ರಸಂಗಗಳ ಕಥಾನಾಯಕನ ಪಾತ್ರವನ್ನು ನಿರ್ವಹಿಸಿ ಪ್ರಸಂಗದ ಯಶಸ್ವಿಗೆ ಕಾರಣೀಭೂತರಾಗಿದ್ದರು, ಯಾವುದೇ ಪಾತ್ರವನ್ನು ಪಾತ್ರಗಳಿಗೆ ಕಿಂಚಿತ್ತು ಅಪಚಾರ ವಾಗದಂತೆ ನಿರ್ವಹಿಸುವ ಕಲಾವಿದರಾಗಿದ್ದು ಅವರ ಅಗಲುವಿಕೆಯಿಂದ ಯಕ್ಷರಂಗಕ್ಕೂ ತುಂಬಲಾರದ ನಷ್ಟವಾಗಿದೆ.
ಇದನ್ನೂ ಓದಿ:ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವು ಬದಲಾಗದು: ಎಚ್ ಡಿ ಕುಮಾರಸ್ವಾಮಿ
ಸಸಿಹಿತ್ಲು ಮೇಳದಲ್ಲಿ ಹೆಚ್ಚಾಗಿ ಕಥಾನಾಯಕನ ಪಾತ್ರ ನಿರ್ವಹಿಸುತಿದ್ದರು. ಪೋಷಕ ಪಾತ್ರದಲ್ಲೂ ಸೈ ಎನಿಸಿಕೊಂಡವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರ ನಿರ್ವಹಿಸುತಿದ್ದರು. ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು ಮತ್ತು ಗಂಡು ಮಗುವನ್ನು ಅಗಲಿದ್ದಾರೆ.
ನಲ್ಕ ಜಗದೀಶ್ ಅವರ ಅಕಾಲಿಕ ನಿಧನಕ್ಕೆ ಶ್ರೀ ಭಗವತೀ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಪ್ರಮುಖರು, ಮೇಳದ ಸಂಚಾಲಕರು, ಸಹಕಲಾವಿದರು, ಯಕ್ಷಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.