ಸುಳ್ಯ: ತಾ| ಪೌಷ್ಟಿಕ ಪುನಶ್ಚೇತನ ಕೇಂದ್ರ
ಐದು ಹಾಸಿಗೆ ಸಾಮರ್ಥ್ಯ
Team Udayavani, Jun 1, 2022, 9:37 AM IST
ಸುಳ್ಯ: ಆರು ವರ್ಷದೊಳಗಿನ ಮಕ್ಕಳಲ್ಲಿರುವ ಅಪೌಷ್ಟಿಕತೆ ಗುರುತಿಸಿ ನಿವಾರಿಸುವ ಮಹತ್ವದ ಯೋಜನೆಯ ಭಾಗವಾಗಿ ಸುಳ್ಯದಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ಆರಂಭವಾಗಿದೆ. ಸರಕಾರದ ಅನುದಾನ ಬಿಡುಗಡೆಯಾಗಬೇಕಾಗಿದ್ದು, ಪ್ರಸ್ತುತ ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಕೇಂದ್ರ ಕಾರ್ಯಾಚರಿಸುತ್ತಿದೆ.
ಈ ವರ್ಷದ ಬಜೆಟ್ನಲ್ಲಿ ಘೋಷಣೆಯಾದಂತೆ ಕೇಂದ್ರ ಆರಂಭಿಸಲಾಗಿದೆ. ತ್ವರಿತವಾಗಿ ಕೇಂದ್ರ ಆರಂಭಿಸುವಂತೆ ಎಪ್ರಿಲ್ನಲ್ಲಿ ಆದೇಶ ಹೊರಡಿಸಲಾಗಿತ್ತು. ರಾಜ್ಯದ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ 14 ತಾಲೂಕು ಮಟ್ಟದ ಪೌಷ್ಟಿಕ ಪುನಶ್ಚೇತನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ 37 ವಿ.ಸ. ಮೀಸಲು ಕ್ಷೇತ್ರಗಳಲ್ಲಿ ಕೇಂದ್ರ ಆರಂಭಿಸಲು ಸೂಚಿಸಲಾಗಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮೀಸಲಾತಿ ಕ್ಷೇತ್ರ ಸುಳ್ಯದಲ್ಲಿ ತಾಲೂಕು ಮಟ್ಟದ ಪೌಷ್ಟಿಕ ಪುನಶ್ಚೇತನ ಕೇಂದ್ರ ಕಾರ್ಯಾಚರಿಸಲಿದೆ.
ಅಪೌಷ್ಟಿಕತೆಗೆ ಚಿಕಿತ್ಸೆ
6 ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಹಾಗೂ ಸಾಧರಣ ಅಪೌಷ್ಟಿಕತೆಯನ್ನು ಗುರುತಿಸುವಿಕೆ, ಚಿಕಿತ್ಸೆ ಹಾಗೂ ಪುನಶ್ಚೇತನ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇಂದ್ರಕ್ಕೆ ದಾಖಲಿಸಿ, ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಕ್ಕಳ ಪೋಷಕರ ಒಪ್ಪಿಗೆ ಪಡೆದು ಮಕ್ಕಳನ್ನು ದಾಖಲೀಕರಿಸಿ, ಪೌಷ್ಟಿಕಾಂಶ ವೃದ್ಧಿಗೆ ಪೂರಕ ವಿಧಾನ, ಆಹಾರ, ಚಿಕಿತ್ಸೆ ಒದಗಿಸಲಾಗುತ್ತದೆ. ಮಗುವಿನ ಜತೆಯಲ್ಲಿ ಉಳಿದುಕೊಳ್ಳುವ ಪೋಷಕರಲ್ಲಿ ಒಬ್ಬರಿಗೆ ನರೇಗಾ ಅಡಿಯಲ್ಲಿ ವೇತನ ನೀಡುವ ವ್ಯವಸ್ಥೆಯೂ ಇದರಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾತ್ಕಾಲಿಕ ಕೇಂದ್ರ
ಆರಂಭ ಸುಳ್ಯದ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ತಾತ್ಕಲಿಕವಾಗಿ ಐದು ಹಾಸಿಗೆಗಳ ಪೌಷ್ಟಿಕ ಪುನಶ್ಚೇತನ ಕೇಂದ್ರ ಆರಂಭಿಸಲಾಗಿದೆ. ಆಸ್ಪತ್ರೆ ಕಟ್ಟಡದಲ್ಲಿ ಮಕ್ಕಳ ವಾರ್ಡ್ನ ಹೆಚ್ಚುವರಿ ಕೊಠಡಿ ನಿರ್ಮಾಣ ಹಂತದಲ್ಲಿದ್ದು, ಮುಂದೆ ಅಲ್ಲಿ ಕೇಂದ್ರ ನಡೆಯಲಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಂದಿ, ಮೇಲ್ವಿಚಾರಕರು, ಅಡುಗೆ ಸಿಬಂದಿ ನೇಮಕವಾಗುವ ನಿರೀಕ್ಷೆ ಇದೆ. ಸರಕಾರದಿಂದ ಅನುದಾನ ಬಿಡುಗಡೆಯಾಗಬೇಕಾಗಿದ್ದು, ಅಲ್ಲಿಯ ವರೆಗೆ ಆಸ್ಪತ್ರೆಯ ವಿವಿಧ ಸಂಪನ್ಮೂಲಗಳಿಂದ ಕೇಂದ್ರ ಕಾರ್ಯಾಚರಿಸಲಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೃಢೀಕರಿಸಿ ದಾಖಲು
ಅಂಗನವಾಡಿಯಲ್ಲಿ 6 ವರ್ಷದೊಳಗಿನ ಮಕ್ಕಳ ಮಾಹಿತಿಗಳಿವೆ. ಮಕ್ಕಳ ಬೆಳವಣಿಗೆ ಸಂಬಂಧಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಲ್ಲಿರುವ ಮಾಹಿತಿ ಪ್ರಕಾರ ಯಾವ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ ಎನ್ನುವುದನ್ನು ಗಮನಿಸಿ ಅವರನ್ನು ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಲು ಸಲಹೆ ನೀಡಲಾಗುತ್ತದೆ. ಮಕ್ಕಳ ವಯೋಮಿತಿಗೆ ಅನುಗುಣವಾಗಿ ತೂಕ, ಬೆಳವಣಿಗೆ, ಪೌಷ್ಟಿಕಾಂಶ ಕೊರತೆ ಮುಂತಾದವುಗಳನ್ನು ಲೆಕ್ಕಚಾರ ಹಾಕಿ ವೈದ್ಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ದೃಢೀಕರಿಸಿದ ಬಳಿಕ ಕೇಂದ್ರಕ್ಕೆ ದಾಖಲಿಸಲು ಅವಕಾಶ ಇದೆ ಎನ್ನುತ್ತಾರೆ ಅಧಿಕಾರಿಗಳು.
ಅನುದಾನದ ನಿರೀಕ್ಷೆ
ಸುಳ್ಯದಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಸದ್ಯಕ್ಕೆ ಅಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಕೇಂದ್ರ ಕಾರ್ಯಾಚರಿಸಲಿದೆ. ಮುಂದೆ ವಿವಿಧ ಹುದ್ದೆಗಳಾದ ವೈದ್ಯರು, ನರ್ಸ್ಗಳು, ಕೌನ್ಸಿಲರ್ಗಳು ಮತ್ತಿತರ ಹುದ್ದೆಗಳಿಗೆ ನಿಯೋಜನೆಯಾಗಲಿದೆ. ಬಜೆಟ್ ಅನುದಾನ ಬಿಡುಗಡೆಗೊಂಡಲ್ಲಿ ಎಲ್ಲ ಹಂತಗಳನ್ನು ಪೂರ್ಣಗೊಳಿಸಲಾಗುವುದು. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. –ಡಾ| ರಾಜೇಶ್, ಯೋಜನ ಅಧಿಕಾರಿ, ಆರೋಗ್ಯ ಇಲಾಖೆ
ದಯಾನಂದ ಕಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ