ವ್ಯವಸ್ಥಿತ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ
ನೆಕ್ಕಿಲದಲ್ಲಿ 4.5 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ
Team Udayavani, Feb 15, 2020, 5:44 AM IST
ಪುತ್ತೂರು: ದಶಕಗಳಿಂದ ಪುತ್ತೂರು ನಗರ ಸ್ಥಳೀಯಾಡಳಿತಕ್ಕೆ ಸವಾಲಾಗಿರುವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ರೂಪಿಸಲಾದ 4.5 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬನ್ನೂರು ನೆಕ್ಕಿಲದಲ್ಲಿರುವ ಡಂಪಿಂಗ್ ಯಾರ್ಡ್ನಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
ವೈಜ್ಞಾನಿಕವಾಗಿ ನಿರ್ವಹಿಸುವ ಈ ಬೃಹತ್ ಯೋಜನೆಗೆ 4.49 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಶೇ. 35 ಕೇಂದ್ರ ಸರಕಾರ (1.57 ಕೋಟಿ) ಭರಿಸಲಿದೆ. ಶೇ. 23.30 (1.04 ಕೋಟಿ) ರಾಜ್ಯ ಸರಕಾರ, ಶೇ. 41.70 (1.87 ಕೋಟಿ) ನಗರಸಭೆ ಭರ್ತಿ ಮಾಡಲಿದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 119.13 ಲಕ್ಷ (1.19 ಕೋಟಿ), ಸಂಸ್ಕರಣೆ ಮತ್ತು ನಿರ್ವಹಣೆಗೆ 330.25 ಲಕ್ಷ (3.30 ಕೋಟಿ) ನಿಗದಿ ಮಾಡಲಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಮೂಲಕ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ನಗರಸಭೆಯ ಕೌನ್ಸಿಲ್ ಮೀಟಿಂಗ್ 1 ವರ್ಷದ ಹಿಂದೆ ಅಂಗೀಕರಿಸಿತ್ತು. ಜಿಲ್ಲಾಧಿಕಾರಿ ಅನುಮತಿ ಬಳಿಕ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ರಾಜ್ಯ ಪೌರಾಡಳಿತ ಇಲಾಖೆಯ ನಿರ್ದೇಶಕರು ಮಂಜೂರಾತಿ ನೀಡಿದ್ದಾರೆ. ಈ ಯೋಜನೆಯ ಗುತ್ತಿಗೆ ಕಾಮಗಾರಿಯನ್ನು ಹಂಝ ಅವರು ವಹಿಸಿಕೊಂಡಿದ್ದು, ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ.
ಕಾಮಗಾರಿ ಆರಂಭ
ಬನ್ನೂರು ನೆಕ್ಕಿಲದ ಡಂಪಿಂಗ್ ಯಾರ್ಡ್ನ ಆವರಣ ಗೋಡೆ ಎತ್ತರಿಸಿ ವಿದ್ಯುತ್ ಕಾಮಗಾರಿಯ ಕಾರ್ಯ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಯಾರ್ಡ್ ನಿರ್ಮಾಣಕ್ಕಾಗಿ ಕಾಮಗಾರಿಗಳು, ಯಂತ್ರಗಳ ಖರೀದಿ ಸೇರಿದಂತೆ ಹತ್ತಾರು ಬಗೆಯ ಸಲಕರಣೆಗಳ ಖರೀದಿಗೆ ಸಿದ್ಧತೆ ನಡೆದಿದೆ. ಬನ್ನೂರಿನ ಲ್ಯಾಂಡ್ಫಿಲ್ ಸೈಟಿನಲ್ಲಿ ಘನ, ಹಸಿ, ಒಣ ತ್ಯಾಜ್ಯ ಗಳ ವೈಜ್ಞಾನಿಕ ವಿಂಗ ಡಣೆಗೆ ಬೇಕಾದ ಯಂತ್ರ ಗಳ ಜೋಡ ನೆಗೆ ಬೇಕಾದ ಸ್ಥಳ, ಬೆಡ್ಡಿಂಗ್ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಶೆಡ್ಗಳ ನಿರ್ಮಾಣ, ಕಸ ಸಂಗ್ರಹ, ಸಾಗಾಟಗಳಿಗೆ ಬೇಕಾದ ವಾಹನಗಳ ವ್ಯವಸ್ಥೆ, ಕಾರ್ಮಿಕರು, ತಂತ್ರಜ್ಞರು, ಮೇಲ್ವಿಚಾರಕರು, ಕಾವಲು ಸಿಬಂದಿ ವ್ಯವಸ್ಥೆ ನಗರಸಭೆಯ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. 75 ಕಾರ್ಮಿಕರು, ಸಿಬಂದಿ ನೇಮಿಸಿಕೊಳ್ಳುವ, 15 ವಾಹನ ಬಳಸಿಕೊಳ್ಳುವ ಯೋಜನೆಯ ಟೆಂಡರ್ ಹಂತ ಮುಗಿದಿದೆ.
ಸವಾಲಾಗಿತ್ತು
30 ವರ್ಷಗಳ ಹಿಂದೆ ನೆಕ್ಕಿಲದಲ್ಲಿ ಸ್ಥಾಪನೆಯಾದ ಲ್ಯಾಂಡ್ಫಿಲ್ ಸೈಟ್, ಕ್ರಮೇಣ ಸಮಸ್ಯೆಯ ಆಗರವಾಗಿ ಬೆಳೆದಿದೆ. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳು ಬಿದ್ದಿರುವ ಎರೆ ಗೊಬ್ಬರ ತಯಾರಿ ವ್ಯವಸ್ಥೆ, ಪರಿಸರದಲ್ಲಿ ಸೃಷ್ಟಿಸಿದ ವಾಸನೆ, ಸ್ಥಳೀಯರಿಗೆ ಪದೇ ಪದೇ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ, ಆಗಾಗ್ಗೆ ಸ್ಥಳೀಯರಲ್ಲಿ ಕಟ್ಟೆಯೊಡೆಯುವ ಆಕ್ರೋಶ. ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದು ಬಂದಿದೆ. 2017ರಲ್ಲಿ ಈ ಡಂಪಿಂಗ್ಯಾರ್ಡ್ ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ 3 ವಾರದ ಕಾಲ ಹೊಗೆಯಾಡಿದ್ದು, ಇಡೀ ಕಸದ ಬೆಟ್ಟವನ್ನೇ ಸುಟ್ಟು ಕರಕಲುಗೊಳಿಸಿತ್ತು. 1989ರಲ್ಲಿ ನಿರ್ಮಾಣವಾದ ಬನ್ನೂರು ಡಂಪಿಂಗ್ ಯಾರ್ಡ್ 7 ಎಕ್ರೆ ವಿಸ್ತೀರ್ಣ ಹೊಂದಿದೆ. ಪ್ರತ್ಯೇಕ ಜಾಗಕ್ಕೆ ಆಗ್ರಹವಿದೆಯಾದರೂ ವಿರೋಧದ ಕಾರಣದಿಂದ ಈಡೇರಿಲ್ಲ.
ಆರು ತಿಂಗಳೊಳಗೆ ಪೂರ್ಣ
ನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುವ ನಿಟ್ಟಿನಲ್ಲಿ 4.5 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲಿದೆ.
– ರೂಪಾ ಟಿ. ಶೆಟ್ಟಿ, ಪುತ್ತೂರು ನಗರಸಭೆ ಪೌರಾಯುಕ್ತೆ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ