ಪ್ರಕೃತಿ ಮಡಿಲಿನಲ್ಲಿಯೇ ನಡೆಯಲಿದೆ ಪರಿಸರ ಸಮ್ಮೇಳನ
ಅರಣ್ಯ-ವನ್ಯ ಜೀವಿಗಳ ಸಂರಕ್ಷಣೆ ಉದ್ದೇಶ
Team Udayavani, Jan 16, 2020, 5:57 AM IST
ಮಹಾನಗರ: ಕನ್ನಡ, ತುಳು ಸಹಿತ ವಿವಿಧ ಭಾಷೆಗಳ ಸಾಹಿತ್ಯ ಸಮ್ಮೇಳ ನಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಅದರಂತೆ, ಇದೀಗ ಪರಿಸರವಾದಿಗಳು ಒಟ್ಟು ಸೇರಿ ಅರಣ್ಯ-ವನ್ಯ ಜೀವಿಗಳ ಸಂರಕ್ಷಣೆ ಕುರಿತಂತೆ ಮಂಗಳೂರಿನಲ್ಲಿ ಪರಿಸರ ಸಮ್ಮೇಳನವೊಂದನ್ನು ಆಯೋ ಜಿಸುವುದಕ್ಕೆ ಸಜ್ಜಾಗಿದ್ದಾರೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್ಇಸಿಎಫ್) ಇದೀಗ ಮಂಗಳೂರು ನಗರದಲ್ಲಿ ಮಾರ್ಚ್ 1ರಂದು ರಾಜ್ಯ ಮಟ್ಟದ ಪರಿಸರ ಸಮ್ಮೇಳನ ನಡೆಸಲು ತೀರ್ಮಾನಿಸಿದೆ. ಅಂದಹಾಗೆ, ಈ ಸಮ್ಮೇಳನದಲ್ಲಿ ಯಾವುದೇ ವೇದಿಕೆಗಳಿರುವುದಿಲ್ಲ. ಬದಲಾಗಿ ನ್ಯಾಯಾಲಯದ ಕಟಕಟೆಯ ರೀತಿ ಇರುತ್ತದೆ. ನ್ಯಾಯಾಧೀಶರಾಗಿ ಓರ್ವ (ಹೋರಾಟಗಾರರು), 6 ಮಂದಿ ವೃತ್ತಿಪರ ವಕೀಲರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪರಿಸರ ಹೋರಾಟಗಾರರು ಭಾಗವಹಿಸಲಿದ್ದು, ಅವರು ಎದುರಿಸಿದ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಹೇಳಲಿದ್ದಾರೆ. ಈ ವಿಷಯಗಳ ಬಗ್ಗೆ 6 ಮಂದಿ ವೃತ್ತಿ ಪರ ವಕೀಲರು ಮಾರ್ಗದರ್ಶನ ನೀಡಲಿದ್ದಾರೆ.
ಈ ಹಿಂದೆ 2014ರಲ್ಲಿ ಮೊದಲ ಪರಿಸರ ಸಮ್ಮೇಳನವು ಅಶೋಕನಗರದ ಕಾಡಿನಲ್ಲಿ ನಡೆಯಿತು. ಆ ವೇಳೆಯೂ ಅನೇಕ ಮಂದಿ ಪರಿಸರ ಪ್ರೇಮಿಗಳು, ಪರಿಸರವಾದಿಗಳು ಭಾಗವಹಿಸಿದ್ದರು. ಇದೀಗ ದೊಡ್ಡ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಿದ್ದು, ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಸೇರಿಸುವ ಪ್ರಯತ್ನ ನಡೆಯುತ್ತಿದೆ.
ಐದು ವಿಷಯಗಳ ಬಗ್ಗೆ ಚರ್ಚೆ
ಪರಿಸರ ಸಮ್ಮೇಳನದಲ್ಲಿ ಪ್ರಮುಖವಾಗಿ ಐದು ವಿಚಾರಗಳ ಬಗ್ಗೆ ಬೆಳಕು ಚೆಲ್ಲಲು ನಿರ್ಧರಿಸಲಾಗಿದೆ. ಎಂಡೋಸಲ್ಫಾನ್ ಸಹಿತ ಪ್ರಕೃತಿ ಮೇಲೆ ವಿಷ ಪ್ರಹಾರ, ಅರಣ್ಯಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆ, ಕಾಡಿನ ಮೂಲ ನಿವಾಸಿಗಳ ಹಕ್ಕುಗಳ ಬಗ್ಗೆ ಚರ್ಚೆ, ಪಶ್ಚಿಮಘಟ್ಟ ಸಹಿತ ಕರ್ನಾಟಕದ ಅರಣ್ಯ ಹೇಗೆ ರಕ್ಷಿಸಬಹುದು, ಕೋಲಾರ-ಚಿಕ್ಕಬಳ್ಳಾಪುರ ಪ್ರದೇಶದ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಪರಿಸರವಾದಿಗಳು ಚರ್ಚೆ ನಡೆಸಲಿದ್ದಾರೆ. ಸಮ್ಮೇಳನದಲ್ಲಿ ಯಾವುದೆಲ್ಲ ಚರ್ಚೆಗಳು ನಡೆದಿವೆ ಎನ್ನುವುದನ್ನು ಪಟ್ಟಿ ಮಾಡಿ ಒಂದು ನಿರ್ಣಯಕ್ಕೆ ಬರಲಿದ್ದಾರೆ.
ಪರಿಸರ ಅರಿವು
ಸಾಹಿತ್ಯದ ಮುಖೇನ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ನಮ್ಮ ದೇಶದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಈ ಸಮ್ಮೇಳನದಲ್ಲಿ ಪರಿಸರ ಆರಾಧಕರನ್ನು ಕರೆಸಿ, ಶಿಥಿಲಗೊಳ್ಳುತ್ತಿರುವ ಅರಣ್ಯ ಮತ್ತು ಪರಿಸರ ರಕ್ಷಣೆಗೆ ನಿರ್ಣಯ ಕೈಗೊಂಡು ಅದನ್ನು ಸರಕಾರದ ಗಮನಕ್ಕೆ ತರಲಿದ್ದೇವೆ.
– ಸ್ವರ್ಣ ಸುಂದರ್, ಎನ್ಇಸಿಎಫ್ ಅಧ್ಯಕ್ಷ
ಟ್ರೀ ಪಾರ್ಕ್ನಲ್ಲಿ ಆಯೋಜನೆ
ಮಾಚ್ 1ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಮಟ್ಟದ ಪರಿಸರ ಸಮ್ಮೇಳನವು ನಗರದ ತಣ್ಣೀರುಬಾವಿ ಬಳಿ ಇರುವ ಟ್ರೀ ಪಾರ್ಕ್ನಲ್ಲಿ ನೆರವೇರಲಿದೆ. ಸಾಮಾನ್ಯವಾಗಿ ಸಮ್ಮೇಳನಗಳು ಸಭಾಂಗಣದಲ್ಲಿ ನಡೆಯುತ್ತವೆ. ಆದರೆ, ಪರಿಸರ ಸಮ್ಮೇಳನವು ಪ್ರಕೃತಿ ಮಡಿಲಿನಲ್ಲಿಯೇ ನಡೆಯುವುದು ವಿಶೇಷ. ತಣ್ಣೀರುಬಾವಿ ಟ್ರೀ ಪಾರ್ಕ್ಗೆ ತೆರಳುವಾಗ ಬೋಟ್ ಮುಖೇನ ಫಲ್ಗುಣಿ ನದಿ ದಾಟಿ ಹೋಗಬೇಕು. ಹೊರ ಜಿಲ್ಲೆಯ ಮಂದಿಗೆ ಇದೊಂದು ಒಳ್ಳೆಯ ಅನುಭವವಾಗಲಿದೆ ಎನ್ನುತ್ತಾರೆ ಆಯೋಜಕರು.
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು