ಸರಕಾರಿ ಕಚೇರಿಗಳಲ್ಲಿ ಸಕಾಲ ಬೋರ್ಡ್ ಕಡ್ಡಾಯ: ಎಡಿಸಿ
Team Udayavani, Feb 4, 2020, 12:01 AM IST
ಮಂಗಳೂರು: ಸಾರ್ವಜನಿಕರಿಗೆ ಸಕಾಲ ಯೋಜನೆ ಬಗ್ಗೆ ಮಾಹಿತಿ ನೀಡಲು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಸಂಬಂಧಿಸಿದ ಸೂಚನೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಹೇಳಿದರು.
ಸಕಾಲದ ಸಮರ್ಪಕ ಅನುಷ್ಠಾನವನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಕಾಲ ಅನುಷ್ಠಾನದಲ್ಲಿ ಜಿಲ್ಲೆಯು ಈಗಾಗಲೇ ಕಡಿಮೆ ಸ್ಥಾನ ಪಡೆದುಕೊಂಡಿದೆ. ಅಧಿಕಾರಿಗಳು ಯೋಜನೆ ಅಡಿಯಲ್ಲಿ ಬರುವ ಎಲ್ಲ ಸೇವೆಗಳನ್ನು ಸಾರ್ವಜನಿಕರಿಗೆ ನೀಡಬೇಕು. ಒಂದು ವೇಳೆ ಯಾವುದೇ ಅಧಿಕಾರಿ ಈ ಸೇವೆ ನೀಡಲು ನಿರಾಕರಿಸಿದರೆ ಅಂಥವರ ವಿರುದ್ಧ ಸರಕಾರವು ಕ್ರಮ ಕೈಗೊಳ್ಳಲಿದೆ ಎಂದರು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಎಲ್ಲ ಅಧಿಕಾರಿಗಳೂ ಈ ಕಾಯ್ದೆಯ ಸಂಪೂರ್ಣ ಮಾಹಿತಿ ಹೊಂದಿರಬೇಕು. ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಸೇವೆ ನೀಡುವುದು ಸಂಬಂಧಿಸಿದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ. ಎಲ್ಲ ಇಲಾಖೆಗಳು ಸಕಾಲ ಯೋಜನೆಯ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಬೇಕು. ನಿಗದಿತ ಸಮಯದಲ್ಲಿ ಸಾರ್ವ ಜನಿಕ ಸೇವೆಯನ್ನು ಒದಗಿಸಬೇಕು ಎಂದರು.