ಟಿವಿ, ಫ್ರಿಜ್, ವಾಶಿಂಗ್ ಮೆಶಿನ್ …ಎಲ್ಲವನ್ನೂ ಕಳೆದುಕೊಂಡೆವು !
Team Udayavani, May 31, 2018, 10:42 AM IST
ಮಹಾನಗರ: ‘ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲ ಕಳೆದುಕೊಂಡ ನೋವು ಒಂದೆಡೆಯಾದರೆ, ಊಟ, ನಿದ್ದೆಯಿಲ್ಲದೆ ನೀರಿನಲ್ಲೇ ಕುಳಿತು ದಿನ ದೂಡಿದ ಸಂಕಷ್ಟ ಮತ್ತೂಂದು ಕಡೆ. ಪರವಾಗಿಲ್ಲ ಮಳೆ ಕಡಿಮೆಯಾಗಿದೆ, ನೆರೆ ಪರಿಸ್ಥಿತಿಯಿಂದ ಮುಕ್ತಿ ಸಿಕ್ಕಿತು ಎಂದು ಸಮಾಧಾನಪಡುವಂತೆಯೂ ಇಲ್ಲ. ಏಕೆಂದರೆ, ಮನೆಯೊಳಗೆ ನುಗ್ಗಿದ್ದು ಗಬ್ಬುನಾತದ ಚರಂಡಿ ನೀರು, ಅದನ್ನು ಶುಚಿಗೊಳಿಸಬೇಕಾದ ಚಿಂತೆಯ ಜತೆಗೆ, ಸಾಂಕ್ರಾಮಿಕ ರೋಗ ಹರಡುವ ಭೀತಿ ಇಲ್ಲಿನ ಜನರ ಬದುಕನ್ನೇ ಹೈರಾಣಾಗಿಸಿದೆ.
ಮಂಗಳವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿದ್ದ ಕೃತಕ ನೆರೆಗೆ ಅತಿಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳ ಪೈಕಿ ಪಂಪ್ವೆಲ್, ಪಡೀಲ್, ಅಳಪೆ, ಗೋರಿಗುಡ್ಡ ಮತ್ತಿತರ ಜಾಗವೂ ಸೇರಿವೆ. ಈ ಭಾಗದಲ್ಲಿ ಜನರಿಗೆ ಏನೆಲ್ಲ ತೊಂದರೆಯಾಗಿದೆ? ಸದ್ಯ ಜಲಾವೃತಗೊಂಡಿದ್ದ ಮನೆಗಳ ಸ್ಥಿತಿ-ಗತಿ ಅವುಗಳಲ್ಲಿ ವಾಸ ಮಾಡುತ್ತಿರುವ ಜನರ ಪಾಡೇನು ಎಂಬಿತ್ಯಾದಿ ವಿಚಾರಗಳ ವಾಸ್ತವಾಂಶ ಅರಿಯುವ ಉದ್ದೇಶದಿಂದ ಬುಧವಾರ ‘ಸುದಿನ’ವು ಪಂಪ್ವೆಲ್ ಹಾಗೂ ಸುತ್ತಲಿನ ಪ್ರದೇಶಕ್ಕೆ ಹೋಗಿ ಅಲ್ಲಿನ ಸಮಸ್ಯೆಗಳ ಪ್ರತ್ಯಕ್ಷ ದರ್ಶನ ಮಾಡಿದಾಗ ಕಂಡುಬಂದ ಸನ್ನಿವೇಶವಿದು.
ಈ ಭಾಗದಲ್ಲಿ ಮಳೆ ಅಥವಾ ಚರಂಡಿ ನೀರು ಹರಿದು ಹೋಗುವುದಕ್ಕೆ ಸರಿಯಾದ ತೋಡು ಅಥವಾ ಒಳ ಚರಂಡಿ ವ್ಯವಸ್ಥೆಯಿಲ್ಲ. ಈ ಒಂದೇ ಕಾರಣಕ್ಕೆ ಪಂಪ್ವೆಲ್ ವೃತ್ತ ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ 75 ಹಾಗೂ 66ರಲ್ಲಿಯೂ ಸಾಕಷ್ಟು ನಷ್ಟ-ಹಾನಿ ಉಂಟಾಗಿದೆ.
ಪಂಪ್ವೆಲ್ ಸರ್ಕಲ್ ಬಳಿಯಲ್ಲಿರುವ ದಿನೇಶ್ ಅವರ ಮನೆಯ ಗೇಟ್ ಪ್ರವೇಶಿಸುತ್ತಿದ್ದಂತೆಯೇ ಆ ಕುಟುಂಬ ಮಳೆ ಅವಾಂತ ರಕ್ಕೆ ತತ್ತರಿಸಿರುವುದರ ಕಾಣಿಸಿತು. ಅಂಗಳವಿಡೀ ಕೆಸರಿನಿಂದ ಕೂಡಿತ್ತು. ಮನೆಯ ಹೊರಾಂಗಣದಲ್ಲಿರುವ ಹೂವಿನ, ಆಲಂಕಾರಿಕ ಗಿಡಗಳು ಸಂಪೂರ್ಣ ಭೂಮಿಗೆ ಮುಖ ಮಾಡಿದ್ದವು. ಕಾಂಪೌಂಡ್ ಕುಸಿದು ಹತ್ತಿರದ ಗಿಡಗಳೆಲ್ಲ ನಾಶವಾಗಿದ್ದವು. ಮನೆಯೊಳಗಡೆ ನುಗ್ಗಿದ ಕೆಸರು ಮಿಶ್ರಿತ ನೀರನ್ನು ಸ್ವಚ್ಛಗೊಳಿಸುವುದರಲ್ಲಿ ಹತ್ತಾರು ಮಂದಿ ತೊಡಗಿಸಿಕೊಂಡಿದ್ದರು. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳೆಲ್ಲ ಸಂಪೂರ್ಣ ಹಾಳಾಗಿದ್ದವು.
ಪಂಪ್ವೆಲ್ ಮರಿಯ ಬೇಕರಿ ಲೇನ್ ಬಳಿಯ ಮಜಲಕೋಡಿಯಲ್ಲಿ ನಾರಾಯಣ, ರುಕ್ಮಯ್ಯ, ಐರಿನ್ ಪಾಯಸ್, ಈಶ್ವರ, ಸೋಮನಾಥ, ನ್ಯಾನ್ಸಿ ಡಿ’ಸೋಜಾ, ಕಿಶೋರ್ ಎಲ್ಲರ ಮನೆಗಳಲ್ಲಿಯೂ ಮನೆ ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಟ್ಟೆ ಬರೆ, ಸೋಫಾ, ಹಾಸಿಗೆ, ಮಂಚ..ಹೀಗೆ ಪ್ರತಿಯೊಂದನ್ನೂ ಮನೆಯ ಹೊರಗಿಟ್ಟಿದ್ದರು. ಮನೆಗಳೊಳಗೆ ನೆರೆ ನೀರಿನೊಂದಿಗೆ ಚರಂಡಿ ನೀರು ಮಿಶ್ರಿತವಾಗಿ ಬಂದಿರುವುದರಿಂದ ವಾಸನೆಯಿಂದ ಕೂಡಿತ್ತು. ಎಲ್ಲ ಮನೆಗಳಲ್ಲಿಯೂ ಟಿವಿ, ಫ್ರಿಜ್, ಇನ್ವರ್ಟರ್, ವಾಶಿಂಗ್ ಮೆಶಿನ್, ಸೋಫಾ ಸೆಟ್, ಮಂಚ, ಬೆಡ್ ಸೇರಿದಂತೆ ಬೆಲೆ ಬಾಳುವ ವಸ್ತುಗಳೆಲ್ಲ ಸಂಪೂರ್ಣ ಹಾಳಾಗಿದ್ದವು. ಶಾಲಾ ಮಕ್ಕಳ ಪುಸ್ತಕ, ಗೋದ್ರೇಜ್, ಕವಾಟುಗಳಲ್ಲಿಟ್ಟ ಬಟ್ಟೆಗಳಿಗೂ ನೀರು ನುಗ್ಗಿ ಇನ್ನೆಂದೂ ಬಳಕೆ ಮಾಡಲಾಗದ ರೀತಿಯಲ್ಲಿದ್ದವು.
ಇಡೀ ದಿನ ಊಟವಿಲ್ಲ; ನಿದ್ದೆಯಿಲ್ಲ
ಇಲ್ಲಿನ ಬಹುತೇಕ ಮನೆಗಳಲ್ಲಿಯೂ ಸುಮಾರು ಎರಡರಿಂದ ಎರಡೂವರೆ ಅಡಿಯಷ್ಟು ಎತ್ತರಕ್ಕೆ ನೀರು ನಿಂತಿತ್ತು. ಇಲ್ಲಿನ ಕೆಲವು ಮನೆಮಂದಿ ಮಂಗಳವಾರ ಮಧ್ಯಾಹ್ನದ ಬಳಿಕ ಊಟವೇ ಮಾಡಿಲ್ಲ. ಅಕ್ಕಿ, ಆಹಾರ ಸಾಮಗ್ರಿ, ತರಕಾರಿ ಎಲ್ಲವೂ ನೀರಲ್ಲಿ ಹೋಗಿದೆ. ಗ್ಯಾಸ್ ಸಿಲಿಂಡರ್ ಕೂಡ ನೀರಿನಲ್ಲಿ ಮುಳುಗಿತ್ತು ಎನ್ನುವಾಗ ಮನೆಮಂದಿಯ ಮುಖದಲ್ಲಿ ದುಃಖ ಮಡುಗಟ್ಟಿತ್ತು.
ಬೆಂಗಳೂರಿನಿಂದ ರಾತ್ರಿಯೇ ಹೊರಟು ಬಂದೆ
ಇಲ್ಲಿನ ಮನೆಯೊಂದರ ಗೃಹಿಣಿಯೋರ್ವರು ಬೆಂಗಳೂರಿನಲ್ಲಿರುವ ಮಗಳ ಮನೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಅವರು, ಮಳೆಯಿಂದ ಮನೆಗೆ ನೀರು ನುಗ್ಗಿರುವ ಕುರಿತು ಪಕ್ಕದ ಮನೆಯವರಿಂದ ತಿಳಿದುಕೊಂಡು ರಾತ್ರಿಯೇ ಹೊರಟು ಬಂದರು.
ವಾಹನಕ್ಕೂ ಹಾನಿ
ದಿನೇಶ್ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ಮೂರು ಕಾರು, ಮೂರು ಬೈಕ್ ಗಳಿಗೆ ಹಾಗೂ ಕಿಶೋರ್ ಅವರ ಮೂರು ದ್ವಿಚಕ್ರ ವಾಹನಗಳಿಗೆ ಮಳೆ ನೀರಿನಿಂದ ಹಾನಿಯಾಗಿದ್ದು, ಚಾಲನೆ ಮಾಡಲಾಗದ ಸ್ಥಿತಿಯಲ್ಲಿವೆ.
ತೋಡಿನಿಂದ ಸಮಸ್ಯೆ ಸೃಷ್ಟಿ
ಪಂಪ್ವೆಲ್ನಲ್ಲಿ ಹರಿಯುತ್ತಿರುವ ತೋಡಿನಿಂದ ನೀರು ಓವರ್ ಫ್ಲೋ ಆಗಿ ಹರಿದಿರುವುದು, ಒಳ ಚರಂಡಿ ಅವ್ಯವಸ್ಥೆಗಳಿಂದಾಗಿ ಇಲ್ಲಿ ಕೃತಕ ನೆರೆ ಸೃಷ್ಟಿ ಯಾಗಿದೆ. ನಿರ್ಮಾಣ ಹಂತದ ಫ್ಲೈ ಓವರ್ ಕಾಮಗಾರಿಗಾಗಿ ರಸ್ತೆ ಅಗೆದಿರುವುದು ಕಾರಣ ಆಗಿರಬಹುದು ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ‘ರಸ್ತೆ ವಿಸ್ತ ರಣೆ, ಕಟ್ಟಡ ನಿರ್ಮಾಣ ಕಾರ್ಯಗಳಿಗಾಗಿ ಈ ತೋಡನ್ನು ಕಿರಿದುಗೊಳಿಸುತ್ತಿದ್ದಾರೆ. ಈ ಬಾರಿ ತೋಡಿನ ಸ್ವಚ್ಛತೆಯನ್ನೂ ಮಾಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಣೆಯ ನೆಪದಲ್ಲಿ ಬಂದು ಫೋಟೋ ತೆಗೆಸಿ ಕೊಂಡು ಹೋಗುತ್ತಾರೆ. ತೊಂದರೆ ತಪ್ಪಿದ್ದಲ್ಲ’ ಎಂಬುದು ಸ್ಥಳೀ ಯ ವ್ಯಾಪಾರಸ್ಥ ರವಿಕುಮಾರ್ ಆಕ್ರೋಶಿತ ನುಡಿ.
ನೋವಿನಲ್ಲಿ ಮಾನವೀಯತೆ ಮೆರೆದ ಆಶಾ
ಮಜಲಕೋಡಿಯ ಆಶಾ ಅವರ ಮನೆಗೆ ಸುಮಾರು ಎರಡೂವರೆ ಅಡಿಯಷ್ಟು ಮಳೆ ನೀರು ನುಗ್ಗಿದೆ. ಆದರೆ ಮಂಗಳೂರು-ಬೆಂಗಳೂರು ಕೆಎಸ್ಸಾರ್ಟಿಸಿ ಬಸ್ನಲ್ಲಿ ಚಾಲಕರಾಗಿರುವ ಆಶಾರ ಪತಿ ಸೋಮನಾಥ ಅವರಿಗೆ ಮನೆಗೆ ನೀರು ನುಗ್ಗಿ ವಸ್ತುನಾಶ ಆಗಿರುವ ಬಗ್ಗೆ ತಿಳಿದದ್ದು ಬುಧವಾರ ಬೆಳಗ್ಗೆಯೇ! ‘ಪತಿ ರಾತ್ರಿ ಹೊತ್ತಿನಲ್ಲಿ ಬಸ್ ಚಾಲನೆಯಲ್ಲಿರುತ್ತಾರೆ. ಚಾಲಕ ಅಂದ ಮೇಲೆ ಬಸ್ನಲ್ಲಿರುವ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿಯ ಜೀವ ಅವರ ಕೈಯಲ್ಲಿರುತ್ತದೆ. ಈ ವಿಷಯ ಅವರಿಗೆ ತಿಳಿಸಿದರೆ ಆತಂಕಗೊಂಡಲ್ಲಿ ಅದು ಬಸ್ ಪ್ರಯಾಣಿಕರ ಮೇಲೂ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆಯಿಂದ ನಾನು ಹೇಳಲಿಲ್ಲ.
ಸ್ವಲ್ಪ ನೀರು ಬಂದಿದ್ದು, ಚಿಂತೆ ಮಾಡುವ ಅವಶ್ಯವಿಲ್ಲ ಎಂದಿದ್ದೆ’ ಎನ್ನುತ್ತಾರೆ ಗೃಹಿಣಿಯಾಗಿರುವ ಪತ್ನಿ ಆಶಾ. ಆ ಮೂಲಕ ತಮ್ಮ ಮನೆಯಲ್ಲದ ನಷ್ಟದ ನೋವಿನ ನಡುವೆಯೂ ಎಪ್ಪತ್ತು ಪ್ರಯಾಣಿಕರ ಜೀವದ ಬಗ್ಗೆ ಯೋಚಿಸಿದ ಆಶಾ ಅವರದು ಮಾದರಿ ನಡೆಯಾಗಿದೆ.
ಯಾಕೆ ಸ್ವಚ್ಛ ಮಾಡುತ್ತೀರಿ!
ನೆರೆ ನೀರಿನಿಂದ ಹಾನಿಗೊಳಗಾದ ಕೆಲವು ಮನೆಗಳಿಗೆ ಈಗಾಗಲೇ ಈ ಭಾಗದ ಕಾರ್ಪೊರೇಟರ್ ಮತ್ತಿತರರು ಭೇಟಿ ನೀಡಿದ್ದಾರೆ. ಈ ಸಂದರ್ಭ ಹಾನಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಕೆಲವು ಮನೆಗಳಲ್ಲಿ ಒಳ ಚರಂಡಿ ವ್ಯವಸ್ಥೆ, ತೋಡಿನ ನೀರು ಬರದಂತೆ ವ್ಯವಸ್ಥೆ ಮಾಡದ್ದರ ಬಗ್ಗೆ ಜನರೂ ಆಕ್ರೋಶಿತರಾಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಮನೆಯಲ್ಲಿ ಮನೆ ಮಂದಿ ಅಂಗಳವನ್ನು ಸ್ವಚ್ಛ ಮಾಡುತ್ತಿರುವಾಗ ‘ಯಾಕೆ ಸ್ವಚ್ಛ ಮಾಡುತ್ತೀರಿ, ಇನ್ನೂ ಮಳೆ ಬರುತ್ತದೆ’ ಎಂದು ಜನಪ್ರತಿನಿಧಿಯೊಬ್ಬರು ಹೇಳಿದ್ದರ ಬಗ್ಗೆ ಮನೆ ಮಂದಿ ಅಸಮಾಧಾನ ವ್ಯಕ್ತಪಡಿಸಿದರು.
ಧನ್ಯಾ ಬಾಳೆಕಜೆ