ಚೆನ್ನಾವರ ಕಿಂಡಿ ಅಣೆಕಟ್ಟಿನಲ್ಲಿ ಭರಪೂರ ನೀರು ಸಂಗ್ರಹ
ಕೃಷಿಕರ ಮೊಗದಲ್ಲಿ ಸಂತಸ ,ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ
Team Udayavani, Jan 9, 2021, 2:30 AM IST
ಪುತ್ತೂರು, ಜ. 8: ಪೆರುವಾಜೆ ಗ್ರಾಮದಲ್ಲಿ ಹರಿಯುವ ಗೌರಿ ಹೊಳೆಗೆ ಚೆನ್ನಾವರದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲಿ ಭರಪೂರ ನೀರು ತುಂಬಿ ಕೃಷಿಕರ ಮುಖದಲ್ಲಿ ಸಂತಸ ಸೃಷ್ಟಿಸಿದೆ.
ಹಲವು ಕಿ.ಮೀ. ದೂರದ ತನಕ ಕೃಷಿ ಭೂಮಿಯ ಜತೆಗೆ ಅಂತರ್ಜಲ ಹೆಚ್ಚಳಕ್ಕೂ ಈ ಅಣೆಕಟ್ಟು ಸಹಕಾರಿಯಾಗಿದೆ. ಕಳೆದ ಬಾರಿ ನೀರು ಸಂಗ್ರಹದಿಂದ ಸುತ್ತಮುತ್ತಲಿನ ಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು.
ಉಭಯ ದಿಕ್ಕಿಗೂ ನೀರಿನ ಸೆಲೆ :
ಗೌರಿ ಹೊಳೆಗೆ ಚೆನ್ನಾವರ- ಕುಂಡಡ್ಕ ಸಂಪರ್ಕ ಸೇತುವೆ ಬಳಿಯಿಂದ ಕೆಲವು ಮೀಟರ್ ದೂರದಲ್ಲಿ ಈ ಕಿಂಡಿ ಅಣೆಕಟ್ಟು ಇದೆ. ವಾರದ ಹಿಂದೆ ಹಲಗೆ ಅಳವಡಿಸಲಾಗಿದೆ. ಕಟ್ಟದಲ್ಲಿ ನೀರು ಪೂರ್ತಿಯಾಗಿ ಸಂಗ್ರಹಗೊಂಡು ಹಲಗೆಯ ಮೇಲ್ಭಾಗದಿಂದ ಹೆಚ್ಚುವರಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಹೊಳೆಯ ಕೆಳಭಾಗದ ಪ್ರದೇಶದ ಕೃಷಿ ಭೂಮಿಗೂ ಅನುಕೂಲವಾಗಿದೆ. ಅಲ್ಲಲ್ಲಿ ಪಂಪ್ನಿಂದ ನೀರೆತ್ತುವ ಹೊಂಡ ದಲ್ಲಿಯೂ ನೀರು ಸಂಗ್ರಹ ಹೆಚ್ಚಾಗಿದ್ದು, ಕಿಂಡಿ ಅಣೆಕಟ್ಟು ಇಬ್ಬಗೆಯಲ್ಲಿಯೂ ಪ್ರಯೋಜನ ಸೃಷ್ಟಿಸಿದೆ.
ಎರಡು ವರ್ಷದ ಹಿಂದೆ ಶಾಸಕ ಅಂಗಾರ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ 35 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಿತ್ತು. 2018ರಲ್ಲಿ ಕಾಮಗಾರಿ ಆರಂಭಗೊಂಡು 2019ರಲ್ಲಿ ಮುಕ್ತಾಯಗೊಂಡಿತು. ಜಿ.ಪಂ.ನಿಂದ ಹೆಚ್ಚುವರಿ ಹಲಗೆ ಒದಗಿಸಿಕೊಡುವ ಭರವಸೆಯನ್ನು ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ ನೀಡಿದ್ದಾರೆ.
ಸುರಕ್ಷತೆಗೆ ಒತ್ತು :
ಕಿಂಡಿ ಅಣೆಕಟ್ಟು ತುಂಬಿ ಹಲಗೆಯ ಮೇಲ್ಭಾಗದಿಂದ ನೀರು ಹರಿಯುತ್ತಿರುವ ದೃಶ್ಯ ಮಿನಿ ಜಲಪಾತವನ್ನು ಹೋಲುತ್ತಿದೆ. ತಡೆಗೋಡೆ ಮೇಲ್ಭಾಗದಿಂದಲೂ ನೀರು ಹರಿಯುತ್ತಿದೆ. ಕುಂಡಡ್ಕ-ಚೆನ್ನಾವರ ಸಂಪರ್ಕ ರಸ್ತೆ ಸನಿಹದಲ್ಲಿಯೇ ಈ ಕಟ್ಟ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಅಣೆ ಕಟ್ಟಿನ ಮೇಲ್ಭಾಗಕ್ಕೆ ಸಾರ್ವಜನಿಕರು ತೆರಳದಂತೆ ನಿರ್ಬಂಧ ಹೇರಲಾಗಿದೆ.
ಬೇಸಗೆಯ ಬಿಸಿಗೆ ಅಗತ್ಯ ನೀರು ಒದಗಿಸಲು ಕಿಂಡಿ ಅಣೆಕಟ್ಟು ಸಹಕಾರಿಯಾಗಲಿದೆ. ಕಳೆದ ವರ್ಷ ಮೇ ಅಂತ್ಯದ ತನಕ ಕಟ್ಟದಲ್ಲಿ ನೀರು ಸಂಗ್ರಹವಿತ್ತು. ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಹಲಗೆ ಜೋಡಿಸಿದ ಪರಿಣಾಮ ಮೇ ತಿಂಗಳ ತನಕ ನೀರಿನ ಸಂಗ್ರಹವಿರುವ ನಿರೀಕ್ಷೆ ಇದೆ. ಚೆನ್ನಾವರ, ಕನ್ನೆಜಾಲು ಪರಿಸರದಲ್ಲಿನ ಕೃಷಿ ತೋಟಗಳಿಗೆ ಈ ಅಣೆಕಟ್ಟು ಸಾಕಷ್ಟು ಪ್ರಯೋಜನ ತಂದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಇಕ್ಬಾಲ್ ಚೆನ್ನಾವರ.