ಒಂಬತ್ತು ವರ್ಷಗಳಾದರೂ ಪೂರ್ಣಗೊಳ್ಳದ ಕಾಮಗಾರಿ!
Team Udayavani, Sep 24, 2019, 5:17 AM IST
ಮಹಾನಗರ: ನಗರದ ಮೀನುಗಾರಿಕಾ ಬಂದರಿನ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಯೋಜಿಸಲಾಗಿದ್ದ ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾಮಗಾರಿಗೆ 9 ವರ್ಷಗಳು ಸಂದರೂ ಇನ್ನೂ ಪೂರ್ಣಗೊಳ್ಳುವಂತೆ ಕಾಣುತ್ತಿಲ್ಲ!
ಮೀನುಗಾರಿಕಾ ಬಂದರಿನ 1 ಮತ್ತು 2ನೇ ಜೆಟ್ಟಿ ನಿರ್ಮಾಣವಾದ ಬಳಿಕ ಬೋಟುಗಳು, ಮೀನುಗಾರರಿಗೆ ವಿವಿಧ ಸಮಸ್ಯೆ-ಸವಾಲುಗಳು ಇವೆ ಎಂಬ ಕಾರಣಕ್ಕೆ 2010ರಲ್ಲಿ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಸರಕಾರ ಮನಸ್ಸು ಮಾಡಿತ್ತು. ಆದರೆ ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಇಚ್ಛಾಶಕ್ತಿ ಇಲ್ಲದೆ ಈ ಯೋಜನೆ ಬಹುತೇಕ ಆದರೂ ಪೂರ್ಣವಾಗಲು ಇನ್ನೂ ಸಾಧ್ಯವಾಗಿಲ್ಲ.
ಇಲ್ಲಿಯವರೆಗೆ ಆಗಿರುವ ಕಾಮಗಾರಿಯ ಹಳೆಯ ಗುತ್ತಿಗೆದಾರರಿಂದ ಟೆಂಡರ್ ಮುಕ್ತಾಯಗೊಳಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಬಾಕಿ ಉಳಿದ ಕಾಮಗಾರಿಯನ್ನು ಹೊಸ ಗುತ್ತಿಗೆ ಮೂಲಕ ನಡೆಸಲು ಮೀನುಗಾರಿಕೆ-ಬಂದರು ಇಲಾಖೆ ನಿರ್ಧರಿಸಿದೆ.
36 ತಿಂಗಳೊಳಗೆ ಪೂರ್ಣಗೊಳಿಸುವ ಸೂಚನೆ
3ನೇ ಹಂತದ ವಿಸ್ತರಣಾ ಕಾಮಗಾರಿಗೆ 57.60 ಕೋ.ರೂ.ಗಳ ಪ್ರಸ್ತಾವನೆಗೆ 2010ರ ಸೆ. 20ರಂದು ಕೇಂದ್ರ ಸರಕಾರದಿಂದ ಮಂಜೂರಾತಿ ದೊರಕಿತ್ತು. ಇದರಲ್ಲಿ ಶೇ.75ರಷ್ಟು ಪಾಲನ್ನು (43.20 ಕೋ.ರೂ) ಕೇಂದ್ರ ಸರಕಾರ, ಶೇ.25 ಪಾಲನ್ನು (14.40ಕೋ.)ರಾಜ್ಯ ಸರಕಾರ ನೀಡುವುದೆಂದು ತೀರ್ಮಾನಿಸಲಾಗಿತ್ತು. 2011-12ರಲ್ಲಿ ಈ ಕಾಮಗಾರಿಯ ಟೆಂಡರ್ ಅನ್ನು ಗುತ್ತಿಗೆದಾರರಿಗೆ ನೀಡಿ, 36 ತಿಂಗಳೊಳಗೆ (2015)ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿತ್ತು.
ಕಾಮಗಾರಿ ಪ್ರಗತಿಯ ಸಂದರ್ಭದಲ್ಲಿ, ಸ್ಥಳೀಯ ಮೀನುಗಾರರ ಬೇಡಿಕೆಯಂತೆ, ರಾಜ್ಯಮಟ್ಟದ ನಿರ್ಣಯದಂತೆ ಕಾಮಗಾರಿಯ ದಕ್ಷಿಣ ಭಾಗದ ಜೆಟ್ಟಿಯ ಎತ್ತರವನ್ನು +2.50ಮೀ.ನಿಂದ +3.00ಮೀ.ಗೆ ಎತ್ತರಿಸುವಂತೆ ನಿರ್ಣಯಿಸಲಾಗಿತ್ತು. ಅದರಂತೆ ಅನುಮೋದಿತ ವಿನ್ಯಾಸಗಳಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜುಪಟ್ಟಿಯನ್ನು 98.25 ಕೋ.ರೂ.ಗೆ ತಯಾರಿಸಿ ಅನುಮೋದನೆಗೆ ಮೀನುಗಾರಿಕಾ ಇಲಾಖೆಗೆ ಸಲ್ಲಿಸಲಾಗಿತ್ತು. ಇದನ್ನು ಬೆಂಗಳೂರು ಸಭೆಯಲ್ಲಿ ಚರ್ಚಿಸಿ ಉನ್ನತ ಮಟ್ಟದ ಸಮಿತಿ ರಚಿಸಿ ಸ್ಥಳಪರಿಶೀಲಿಸಿ ತೀರಾ ಅಗತ್ಯದ ಕನಿಷ್ಠ ಅಂಶಗಳನ್ನು ಗುರುತಿಸಿ 72.80 ಕೋ.ರೂ.ಗಳ ಪರಿಷ್ಕೃತ ಪ್ರಸ್ತಾವನೆ ಮಾಡಿ ಸರಕಾರಕ್ಕೆ ಸಲ್ಲಿಸಲಾಗಿತ್ತು.
2016ರಲ್ಲಿ ಕಾಮಗಾರಿಗೆ ತಡೆಯಾಜ್ಞೆ
ಈ ಮಧ್ಯೆ ದಕ್ಷಿಣ ಬದಿಯ ಕ್ರಿಕ್ ಭಾಗಕ್ಕೆ ಸಂಬಂಧಿಸಿದ ಆಕ್ಷೇಪಗಳಿದ್ದ ಕಾರಣದಿಂದ ಕೆಲವರು ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ದಾವೆ ಹೂಡಿದ್ದರು. ಹೀಗಾಗಿ 2014 ಎಪ್ರಿಲ್ನಿಂದ 2016ರಲ್ಲಿ ಮೇವರೆಗೆ ಕಾಮಗಾರಿಗೆ ತಡೆಯಾಜ್ಞೆ ನೀಡಲಾಗಿತ್ತು. ಬಳಿಕ ಕ್ರಿಕ್ ಭಾಗವನ್ನು ಅನುಮೋದಿತ ನಕ್ಷೆಯಲ್ಲಿರುವಂತೆ ಪೂರ್ಣಗೊಳಿಸಿ ಪೀಠಕ್ಕೆ ವರದಿ ಮಾಡುವಂತೆ ಪೀಠವು ಆದೇಶಿಸಿತ್ತು.
ಹೊಸ ಗುತ್ತಿಗೆಗೆ ಸೂಚನೆ
2018ರ ಆಗಸ್ಟ್ನಲ್ಲಿ ಮೀನುಗಾರಿಕಾ ಇಲಾಖೆಯು ಸಭೆ ನಡೆಸಿ ಪರಾಮರ್ಶಿಸಿದಾಗ ಕಾಮಗಾರಿಯು ಸ್ಥಗಿತಗೊಂಡಿರುವುದು ಸರಕಾರದ ಗಮನಕ್ಕೆ ಬಂದಿತ್ತು. ಹೀಗಾಗಿ ಗುತ್ತಿಗೆದಾರರಿಗೆ ನೀಡಿರುವ ಕರಾರನ್ನು ಮುಕ್ತಾಯಗೊಳಿಸಲು, ತೀರಾ ಅಗತ್ಯದ ಕಾಮಗಾರಿಗೆ ಪ್ರತ್ಯೇಕವಾಗಿ ಅಂದಾಜುಪಟ್ಟಿ ತಯಾರಿಸಿ ಅನುಮೋದನೆ ಪಡೆಯಲು ಸೂಚಿಸಲಾಯಿತು.
ಬಳಿಕ ಧಾರವಾಡದಲ್ಲಿ ನಡೆದ ಪ್ರಗತಿಪರಿಶೀಲನ ಸಭೆಯಲ್ಲಿ ಇದೇ ವಿಷಯ ಚರ್ಚೆಗೆ ಬಂದು, ಗುತ್ತಿಗೆದಾರರು ಸುಮಾರು 7 ವರ್ಷಗಳ ಹಳೆಯ ದರಗಳಿಗೆ ಕಾಮಗಾರಿ ನಿರ್ವಹಿಸಲು ಸಾಧ್ಯ ಇಲ್ಲ ಎಂದು ತಿಳಿಸಿದ್ದರು. ಹೀಗಾಗಿ ಈ ಕಾಮಗಾರಿಯನ್ನು ಯಥಾಸ್ಥಿತಿಯಲ್ಲಿ ಕೈಬಿಡಲು ಗುತ್ತಿಗೆದಾರರಿಂದ ಒಪ್ಪಿಗೆಪತ್ರ ಪಡೆದು, ಬಾಕಿ ಕಾಮಗಾರಿಗೆ ಮರುಪ್ರಸ್ತಾವನೆ ತಯಾರಿಸಿ ಹೊಸ ಗುತ್ತಿಗೆ ನೇಮಿಸಲು ಸೂಚಿಸಲಾಗಿತ್ತು. ಪ್ರಸ್ತುತ ಈ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಯಾವಾಗ ಯೋಜನೆ ಪೂರ್ಣಗೊಳ್ಳುವುದೋ? ಎಂಬ ಪ್ರಶ್ನೆ ಮತ್ತೆ ಎದುರಾಗಿದೆ.
1991, 2003ರಲ್ಲಿ ಎರಡು ಜೆಟ್ಟಿ ನಿರ್ಮಾಣ
ಮೊದಲ ಹಂತದ ಮಂಗಳೂರು ಮೀನುಗಾರಿಕೆ ಬಂದರಿನ ನಿರ್ಮಾಣವನ್ನು 1986ರಲ್ಲಿ ಪ್ರಾರಂಭಿಸಿ, 1991ರಲ್ಲಿ ಪೂರ್ಣವಾಗಿತ್ತು. 147.80 ಲಕ್ಷ ರೂಗಳಲ್ಲಿ 138 ಮೀಟರ್ ಉದ್ದದ ಜೆಟ್ಟಿ, 675 ಚ.ಮೀ ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ಸೇರಿದಂತೆ ಇತರ ವ್ಯವಸ್ಥೆ ಒದಗಿಸಲಾಗಿತ್ತು. ಆಗ 300ರಿಂದ 350 ಸಂಖ್ಯೆಯ 30 ಅಡಿಯಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಕಾರ್ಯಾಚರಿಸುತ್ತಿದ್ದವು. ಅನಂತರ ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಮೀನುಗಾರಿಕಾ ಬಂದರಿನ 2ನೇ ಹಂತದ ಕಾಮಗಾರಿಯನ್ನು 2003ರಲ್ಲಿ ಕೈಗೊಳ್ಳಲಾಯಿತು. 67 ಮೀಟರ್ ಉದ್ದದ ಜೆಟ್ಟಿಯನ್ನು 144.67 ಲಕ್ಷ ರೂ ವೆಚ್ಚದಲ್ಲಿ 2004ರಲ್ಲಿ ಪೂರ್ಣ ಗೊಳಿಸ ಲಾಯಿತು. ಮೀನು ಹರಾಜು ಪ್ರಾಂಗಣ, ಬಂದರಿನ ರಸ್ತೆಗಳಿಗೆ ಕಾಂಕ್ರೀಟ್, ಕುಡಿಯುವ ನೀರು ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
28 ಕೋ.ರೂ.ಗಳ ಹೊಸ ಪ್ರಸ್ತಾವನೆ ಸರಕಾರಕ್ಕೆ
ಮಂಗಳೂರಿನ ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾಮಗಾರಿಯ ಹಳೆಯ ಟೆಂಡರ್ ಅನ್ನು ರದ್ದುಮಾಡಿ, ಅಲ್ಲಿ ಬಾಕಿ ಉಳಿದ ಕಾಮಗಾರಿಯನ್ನು 28 ಕೋ.ರೂ.ವೆಚ್ಚದಲ್ಲಿ ಕೈಗೊಳ್ಳುವ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಹರಾಜು ಪ್ರಾಂಗಣ, ರಸ್ತೆ ನಿರ್ಮಾಣ, ರೇಡಿಯೋ ಮಾಹಿತಿ ಕೇಂದ್ರ ಸಹಿತ ಅಗತ್ಯ ಕಾಮಗಾರಿಯು ಇದರಲ್ಲಿ ಪ್ರಸ್ತಾವಿಸಲಾಗಿದೆ.
- ಸುಜನ್ ಚಂದ್ರ ರಾವ್, ಸಹಾಯಕ ಕಾ.ನಿ. ಎಂಜಿನಿಯರ್, ಬಂದರು ಹಾಗೂ ಮೀನುಗಾರಿಕಾ ಇಲಾಖೆ-ಮಂಗಳೂರು
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ