ಚುನಾವಣೆಗೆ ಕಾಂಗ್ರೆಸ್ ರಣಕಹಳೆ; ಸಿದ್ದು ಹುಟ್ಟುಹಬ್ಬದಲ್ಲಿ ನಾಯಕರ ಒಗ್ಗಟ್ಟು ಪ್ರದರ್ಶನ
ಬಿಜೆಪಿ ವಿರುದ್ಧ ವಾಗ್ಧಾಳಿಗೆ ವೇದಿಕೆಯಾದ ಸಮಾವೇಶ
Team Udayavani, Aug 4, 2022, 7:20 AM IST
ದಾವಣಗೆರೆ: ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಬಿಜೆಪಿ ವಿರುದ್ಧ ವಾಗ್ಧಾಳಿಯ ವೇದಿಕೆ, ಕಾಂಗ್ರೆಸ್ ನಾಯಕರ ಒಗ್ಗಟ್ಟು ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಪ್ರಚಾರದ ರಣ ಕಹಳೆಯ ವೇದಿಕೆಯಾಗಿ ಮಾರ್ಪಟ್ಟಿತು.
ಲಕ್ಷಾಂತರ ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಮಾತನಾಡಿದ ಪ್ರತಿಯೊಬ್ಬ ಮುಖಂಡರೂ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸಂಕಲ್ಪ ತೊಡಲು ಕರೆ ನೀಡಿದರು.
ಹುಟ್ಟುಹಬ್ಬದ ಸಮಾವೇಶ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು. ಮತ್ತೆ ಕಾಂಗ್ರೆಸ್ ಅ ಧಿಕಾರಕ್ಕೆ ತರಲು ಈಗಿನಿಂದಲೇ ಹೋರಾಟ ಪ್ರಾರಂಭ ಮಾಡಬೇಕು ಎಂದು ಪ್ರತಿಪಾದಿಸಿದರು.
ವಿಶೇಷವೆಂದರೆ, ಸ್ವತಃ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇದೆಲ್ಲವೂ ಬಿಜೆಪಿ ಸೃಷ್ಟಿ. ನಮ್ಮ ಗುರಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದಾಗಿದೆ ಎಂದು ಘೋಷಿಸಿದರು. ಇದಕ್ಕೆ ದನಿಗೂಡಿಸಿದ ಡಿ.ಕೆ.ಶಿವಕುಮಾರ್ ಅವರು ಸಹ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ರಾಮನಗರದ ರೇಷ್ಮೆ ಶಾಲು ಹೊದಿಸಿ ಇಂದಿರಾಗಾಂಧಿ ಅವರ ಭಾವಚಿತ್ರದ ಸ್ಮರಣಿಕೆ ನೀಡಿ ಆಲಿಂಗಿಸಿಕೊಂಡು ನೆರೆದಿದ್ದ ಕಾರ್ಯಕರ್ತರ ಸಂಭ್ರಮ ಹೆಚ್ಚಿಸಿದರು.
ಸಾಮೂಹಿಕ ನಾಯಕತ್ವ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಡಿ ಪಕ್ಷ ಅ ಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಶ್ವದ ಭೂಪಟದಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನ ಇತ್ತು. ಇದೀಗ ಅದಕ್ಕೆ ಧಕ್ಕೆ ಬಂದಿದೆ. ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರ ಸರ್ವ ಜನರ ಒಳಿತು ಬಯಸುವ ಸರ್ಕಾರವಲ್ಲ ಎಂದು ದೂರಿದರು.
ಕಾಂಗ್ರೆಸ್ನ ಶಕ್ತಿ ಪ್ರದರ್ಶನ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಶಕ್ತಿ ಏನು ಎಂಬುದಕ್ಕೆ ಈ ಸಮಾವೇಶ ಸಾಕ್ಷಿ ಎಂದು ಹೇಳಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ವೇದಿಕೆಯಲ್ಲಿ ಎಂತೆಂತಹ ದಿಗ್ಗಜರು ಕುಳಿತಿದ್ದೀರಿ. ಇಡೀ ದೇಶದಲ್ಲಿ ಇಂತಹ ನಾಯಕತ್ವ ಬೇರೆ ಯಾವ ರಾಜ್ಯದಲ್ಲೂ ಕಾಣಸಿಗದು ಎಂದು ತಿಳಿಸಿದರು. ಐದು ವರ್ಷ ದೇಶ ಮೆಚ್ಚುವ ಸರ್ಕಾರ ಕೊಟ್ಟಿದ್ದು ಸಿದ್ದರಾಮಯ್ಯ. ಮತ್ತೆ ಅಂತಹ ಸರ್ಕಾರ ಕರ್ನಾಟಕದಲ್ಲಿ ತರಬೇಕಿದೆ ಎಂದು ಹೇಳಿದರು.
ಭ್ರಷ್ಟ ಸರ್ಕಾರ
ಸಿದ್ದರಾಮಯ್ಯ ಮಾತನಾಡಿ , ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅ ಧಿಕಾರದಲ್ಲಿದ್ದು ಇದನ್ನು ತೋಲಗಿಸಬೇಕಿದೆ. ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಈ ಸರ್ಕಾರ ಕ್ಕೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರ ಕಿತ್ತೂಗೆಯಲು ಸಂಕಲ್ಪ ತೊಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ಶಪಥ ಮಾಡಿ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಒಂದು ವರ್ಗದ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಇವರು ಬಂದ ನಂತರ ಮೂರು ಕೊಲೆಗಳಾಗಿವೆ. ಪ್ರವೀಣ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮಸೂದ್ ,ಫಾಜಿಲ್ ಮನೆಗೆ ಭೇಟಿ ಕೊಡಲಿಲ್ಲ,
ಪರಿಹಾರವನ್ನು ಕೊಡಲಿಲ್ಲ. ಇದು ರಾಜ್ಯದ ಮುಖ್ಯಮಂತ್ರಿ ಮಾಡುವ ಕೆಲಸವೇ ಎಂದು ಪ್ರಶ್ನಿಸಿ ದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ 40 ಪೆರ್ಸೆಂಟ್ ಕಮಿಷನ್ ಕೊಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ದೂರು ಕೊಟ್ಟರೂ, ಸಂತೋಷ್ ಪಾಟೀಲ್ ಎಂಬುವರು ಪರ್ಸೆಂಟ್ ಕೊಡಲು ಆಗದೆ ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಾ ಖಾವುಂಗಾ ನಾ ಖಾನೆ ದುಂಗಾ ಎಂದು ಹೇಳಿ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಸಬ್ ಕಾ ಸತ್ಯನಾಶ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೂ ಸಂಭ್ರಮ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸೋಣ. ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾವೆಲ್ಲರೂ ಇಂದು ಸಂಕಲ್ಪ ಮಾಡೋಣ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಪರಿಗಣಿಸಬೇಡಿ. ಅವರು ಎಲ್ಲ ಧರ್ಮ ಹಾಗೂ ವರ್ಗಗಳ ನಾಯಕ. ರಾಜ್ಯದ ಜನರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಸಿಗಲಿ ಎಂದು ಶುಭ ಹಾರೈಸುತ್ತೇನೆ.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇಲ್ಲಿ ಸೇರಿರುವ ಕಾರ್ಯಕರ್ತರಿಗೂ ಸಂಭ್ರಮ, ಅವರಿಗೂ ಸಂಭ್ರಮ ನಮಗೂ ಸಂಭ್ರಮ. ಅವರು ಕೇವಲ ಹಿಂದುಳಿದ ವರ್ಗದ ನಾಯಕರಲ್ಲ ಸರ್ವ ಸಮುದಾಯದ ನಾಯಕರು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ್ದು ಬಸವ ಜಯಂತಿಯಂದು. ಮೊದಲು ಘೋಷಿಸಿದ್ದು ಅನ್ನಭಾಗ್ಯ ಯೋಜನೆ. ಅದು ಅವರ ಬಡವರ ಬದ್ದತೆಗೆ ಸಾಕ್ಷಿ ಎಂದು ಹೇಳಿದರು..
ನಾನು ಸೇರಿ ಈ ವೇದಿಕೆಯಲ್ಲಿ ಕುಳಿತಿರುವ ಹಲವಾರು ಮಂದಿ ಅವರ ಸಂಪುಟದಲ್ಲಿ ಸಚಿವರಾಗಿದ್ದೆವು. ಕೈಗಾರಿಕೆ, ಇಂಧನ, ಸಮಾಜ ಕಲ್ಯಾಣ , ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ವಲಯಗಳಲ್ಲಿ ಪ್ರಗತಿ ಸಾಧಿ ಸಿದ್ದೆವು. ಆದರೆ ಬಿಜೆಪಿ ಸರ್ಕಾರ ಪರ್ಸೆಂಟೇಜ್ ನಲ್ಲಿ ನಿರತವಾಗಿದೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ನಾವೆಲ್ಲ ಸೇರಿ ಕಾಂಗ್ರೆಸ್ ಸರ್ಕಾರ ಮತ್ತೆ ತರಬೇಕಿದೆ. ಆ ಮೂಲಕ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬ ಬೇಕಿದೆ ಎಂದು ಹೇಳಿದರು.
ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದೊದಗಿದೆ. ಅದರ ರಕ್ಷಣೆಗೆ ಕಾಂಗ್ರೆಸ್ ನಿಲ್ಲಬೇಕಿದೆ. ಸಿದ್ದರಾಮಯ್ಯ ಅವರು ಇಡೀ ಜೀವನ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಪ್ರಜಾಪ್ರಭುತ್ವ ರಕ್ಷಣೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿದರೆ ಸಿದ್ದರಾಮಯ್ಯ ಅವರಂತೆ ಹಿಂದುಳಿದವರು, ದಲಿತರು ಅಲ್ಪ ಸಂಖ್ಯಾತರು ಈ ರಾಜ್ಯದ ಮುಖ್ಯಮಂತ್ರಿ ಅಗಲು ಸಾಧ್ಯ . ಹೀಗಾಗಿ ಬಿಜೆಪಿಯ ಹಿಡನ್ ಅಜೆಂಡಾ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಿ ಪಕ್ಷ ಅಕಾರಕ್ಕೆ ತರಬೇಕಿದೆ ಎಂದು ತಿಳಿಸಿದರು.
ಉಪಕಾರ ಸ್ಮರಣೆ
ಸಿದ್ದರಾಮಯ್ಯ ಅವರು ತಮ್ಮ ಭಾಷಣದ ನಡುವೆ ನಾನು ಕಾಂಗ್ರೆಸ್ ಸೇರಿದಾಗಿನಿಂದ ರಾಹುಲ್ ಗಾಂಧಿ ನನ್ನ ಮೇಲೆ ವಿಶೇಷ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ನಾನು ಬೇರೆ ಪಕ್ಷದಿಂದ ಬಂದರೂ ಸೋನಿಯಾ ಗಾಂಧಿ ರಾಹುಲ್ ಗಾಂ ಧಿ ಅವರು ಮುಖ್ಯಮಂತ್ರಿ ಅಗಲು ಅವಕಾಶ ಕೊಟ್ಟರು. ಇಲ್ಲದಿದ್ದರೆ ನಾನು ಮುಖ್ಯಮಂತ್ರಿ ಆಗಿ ಜನಪರ ಯೋಜನೆ ಕಾರ್ಯಕ್ರಮ ಜಾರಿಗೆ ತರಲು ಆಗುತ್ತಿರಲಿಲ್ಲ. ರಾಹುಲ್ ಗಾಂಧಿ ಅವರು ಈ ಸಮಾವೇಶಕ್ಕೆ ಬಂದಿದ್ದಕ್ಕೆ ಕೋಟಿ ಕೋಟಿ ವಂದನೆಗಳು ಎಂದು ತಿಳಿಸಿದರು. ನಾಲ್ಕು ದಶಕಗಳಿಂದ ನನ್ನನ್ನು ರಾಜಕೀಯವಾಗಿ ಬೆಳೆಸಿದ ರಾಜ್ಯದ ಜನತೆಗೂ ಕೋಟಿ ಕೋಟಿ ಪ್ರಣಾಮಗಳು ಎಂದು ಹೇಳಿದರು.
ಗೈರು
ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ಸಿದ್ದರಾಮಯ್ಯ ಆವರು ತಮ್ಮ ಭಾಷಣದಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಗಲು ಕೇಂದ್ರದಲ್ಲಿದ್ದ ಯುಪಿಎ ಸರ್ಕಾರದ ಕ್ರಾಂತಿಕಾರಕ ತೀರ್ಮಾನ ಕಾರಣ. ಅದಕ್ಕೆ ಶ್ರಮಿಸಿದವರು ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಎಂದು ಸ್ಮರಿಸಿಕೊಂಡರು.