ಇನ್ನಷ್ಟು ಸ್ಮಾರ್ಟ್ ಆಗಬೇಕಿದೆ ದಾವಣಗೆರೆ ತಾಲೂಕು
Team Udayavani, Aug 16, 2018, 11:13 AM IST
ಐತಿಹಾಸಿಕ, ವಾಣಿಜ್ಯ, ಶೈಕ್ಷಣಿಕ, ಕೈಗಾರಿಕೆ ಮತ್ತು ವಿಶಿಷ್ಟ ಸಂಸ್ಕೃತಿಯ ನೆಲವೀಡು, ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿದ್ದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ 1997ರ ನಂತರ ಜಿಲ್ಲಾ ಕೇಂದ್ರ.
ದಾವಣಗೆರೆ ಹಿಂದೊಮ್ಮೆ ಕರ್ನಾಟಕದ ರಾಜಧಾನಿ ಆಗಬೇಕು ಎಂಬುದಾಗಿ ಕೇಳಿಬಂದ ಧ್ವನಿ ಇನ್ನೂ ಅಡಗಿಲ್ಲ. 1980ಕ್ಕೂ ಮೊದಲು ಜವಳಿ ಮಿಲ್ಗಳ ಕಾರಣಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿಗೆ ಪಾತ್ರವಾಗಿದ್ದ ದಾವಣಗೆರೆ ಈಗ ಶೈಕ್ಷಣಿಕ ನಗರಿ. ಜತೆಗೆ ಮೆಡಿಕಲ್ ಹಬ್, ರಾಜಕೀಯ ಪಕ್ಷಗಳ ಅದೃಷ್ಟದ ತಾಣ, ಹೋರಾಟ ಕ್ಷೇತ್ರದ ಗಂಡುಮೆಟ್ಟಿನ ಭೂಮಿ, ಜನರ ಮನಸೂರೆಗೊಂಡಿರುವ ಬೆಣ್ಣೆದೋಸೆ, ಮಂಡಕ್ಕಿ-ಮಿರ್ಚಿಗೆ ಫೇಮಸ್ ಸಿಟಿ.
ದಾವಣಗೆರೆ ತಾಲೂಕು 994.10 ಚದುರ ಕಿಮೀ ವಿಸ್ತೀರ್ಣ ಹೊಂದಿದೆ. ಕಸಬಾ ಒಳಗೊಂಡಂತೆ ಆನಗೋಡು, ಮಾಯಕೊಂಡ ಹೋಬಳಿ, 40 ಗ್ರಾಮ ಪಂಚಾಯತಿ, 153 ಜನವಸತಿ, 13 ಜನವಸತಿ ಇಲ್ಲದ ಈ ತಾಲೂಕಿನ ಜನಸಂಖ್ಯೆ 6,02,555. ಒಟ್ಟಾರೆ 1,15 ಲಕ್ಷಕ್ಕೂ ಹೆಚ್ಚು ಕುಟುಂಬಗಳಿವೆ. 69 ಸಾವಿರದಷ್ಟು ಕುಟುಂಬಗಳು ನಗರ, 45 ಸಾವಿರದಷ್ಟು ಕುಟುಂಬ ಗ್ರಾಮೀಣ ಭಾಗದಲ್ಲಿವೆ.
ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿರುವ ದಾವಣಗೆರೆ ತಾಲೂಕಿನಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ ಪ್ರಮುಖ ಬೆಳೆ. ಒಂದು ಖಾಸಗಿ ಸಕ್ಕರೆ ಕಾರ್ಖಾನೆ ಇದೆ. ಜವಳಿ ಕ್ಷೇತ್ರದಲ್ಲಿ ಉತ್ಕೃಷ್ಟ ಸ್ಥಾನದಲ್ಲಿದ್ದ ದಾವಣಗೆರೆಯ ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್ ಸಹ ಇದೆ. ದಾವಣಗೆರೆಯಲ್ಲಿ ಜವಳಿ ಮಿಲ್ಗಳ ಬಂದ್ ಹಾಗೂ ಕೆಲವಾರು ಕಾರಣಕ್ಕೆ ವ್ಯಾಪಾರ-ವಹಿವಾಟಿನ ಹಿಂದಿನ ಅಬ್ಬರತೆ ಇಲ್ಲ. ಆದರೂ, ಭತ್ತ, ಅಕ್ಕಿ, ಮೆಕ್ಕೆಜೋಳ ವಹಿವಾಟಿನಲ್ಲಿ ಮುಂದಿದೆ.
ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿರುವ ದಾವಣಗೆರೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಒಂದು ಸರ್ಕಾರಿ, ಮೂರು ಖಾಸಗಿ ಇಂಜಿನಿಯರಿಂಗ್, ಎರಡು ಖಾಸಗಿ ವೈದ್ಯಕೀಯ, ಎರಡು ದಂತ ವೈದ್ಯಕೀಯ ಕಾಲೇಜು ಇಲ್ಲಿವೆ. ದಾವಣಗೆರೆ ಸಮೀಪದ ತೋಳಹುಣಸೆ ಹೊರವಲಯದ ಶಿವಗಂಗೋತ್ರಿ ಕ್ಯಾಂಪಸ್ ನಲ್ಲಿ 2009ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿದೆ. ದೃಶ್ಯ ಕಲಾ ಮಹಾವಿದ್ಯಾಲಯ, ಒಂದು ಸರ್ಕಾರಿ ಡಿಪ್ಲೋಮಾ, ಐಟಿಐ, ಮೂರು ಖಾಸಗಿ ಡಿಪ್ಲೋಮಾ, ಐಟಿಐ, ಎಂಬಿಎ, ಆಯುರ್ವೇದ, ಕಲಾ, ವಾಣಿಜ್ಯ ಕಾಲೇಜುಗಳನ್ನು ಹೊಂದಿರುವ ದಾವಣಗೆರೆ ಆಕ್ಸ್ಫರ್ಡ್ ಸಿಟಿ ಎಂಬ ಅನ್ವರ್ಥ ನಾಮ ಹೊಂದಿದೆ. ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ, ಕೃಷಿ ಕಾಲೇಜು ಪ್ರಾರಂಭಿಸಬೇಕೆಂಬ ಬೇಡಿಕೆ ಇನ್ನೂ
ಈಡೇರಿಲ್ಲ.
2006ರವರೆಗೆ ನಗರಸಭೆಯಾಗಿದ್ದ ದಾವಣಗೆರೆ ಈಗ ಮಹಾನಗರ ಪಾಲಿಕೆ. ಇನ್ನು ದಾವಣಗೆರೆ ತಾಲೂಕು ಮೂರು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ಸಿಟಿ ಮತ್ತು ಅಮೃತ್ ಸಿಟಿ ಯೋಜನೆಗೆ ದಾವಣಗೆರೆ ಆಯ್ಕೆಯಾಗಿದ್ದು, ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ 3 ವರ್ಷವಾದರೂ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ದಕ್ಷಿಣ ಭಾಗದಲ್ಲಿ ಅಭಿವೃದ್ಧಿ ಮರೀಚಿಕೆ. ಸ್ಮಾರ್ಟ್ಸಿಟಿ ಮತ್ತು ಅಮೃತ್ ಸಿಟಿ ಕಾಮಗಾರಿ ಪೂರ್ಣಗೊಂಡಲ್ಲಿ ದಾವಣಗೆರೆ ನೈಜ ಅರ್ಥದಲ್ಲಿ ಸ್ಮಾರ್ಟ್ಸಿಟಿ ಆಗಲಿದೆ.
ತಾಲೂಕು ಕೇಂದ್ರ ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 110ಕ್ಕೂ ಹೆಚ್ಚು ಉದ್ಯಾನವನಗಳಿವೆ. ಈಚೆಗೆ 24 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿರುವ ಗಾಜಿನಮನೆ ಬೆಂಗಳೂರಿನ ಲಾಲ್ಬಾಗ್ನ ಗಾಜಿನಮನೆಗಿಂತಲೂ ದೊಡ್ಡದ್ದಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿ, ಪ್ರಮುಖ ಪ್ರವಾಸಿ ತಾಣವನ್ನಾಗಿಸುವ ಪ್ರಯತ್ನ ನಡೆದಿದೆ.
ಬೆಣ್ಣೆದೋಸೆಗೆ ಖ್ಯಾತಿವಾಗಿರುವ ದಾವಣಗೆರೆ ಮಂಡಕ್ಕಿ-ಮಿರ್ಚಿಗೂ ಭಾರೀ ಫೇಮಸ್. ದಾವಣಗೆರೆ ನಗರವೊಂದರಲ್ಲೇ 900ಕ್ಕೂ ಹೆಚ್ಚು ಮಂಡಕ್ಕಿ ಭಟ್ಟಿಗಳಲ್ಲಿ ಉತ್ಪಾದಿಸುವ ಮಂಡಕ್ಕಿ ವಹಿವಾಟು ರಾಜ್ಯದ ಉದ್ದಗಲಕ್ಕೂ ನಡೆಯುತ್ತದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಪ್ರದೇಶದ ಅಭಿವೃದ್ಧಿ ಕೈಗೊಳ್ಳಲಾಗಿದೆ.
ದಾವಣಗೆರೆಯಲ್ಲಿ ಜವಳಿ ಮಿಲ್ಗಳು ನಿಂತ ನಂತರ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಕೈಗಾರಿಕೆಗಳು ಈವರೆಗೂ ಬಂದಿಲ್ಲ. ಎರಡು ಕೈಗಾರಿಕಾ ಪ್ರದೇಶಗಳಿದ್ದರೂ ಅಂತಹ ಪ್ರಭಾವಿ ಕೈಗಾರಿಕೆ ಇಲ್ಲ. ಜವಳಿ ಪಾರ್ಕ್ ಇದೆಯಾದರೂ ಸಮಸ್ಯೆಗಳ ಕಾರಣ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿಲ್ಲ.
ದಾವಣಗೆರೆಯಲ್ಲಿ ಹಲವಾರು ವರ್ಷಗಳ ಹಿಂದೆಯೇ ಏರ್ಸ್ಟ್ರಿಪ್ ನಿರ್ಮಿಸಬೇಕೆಂಬ ಉದ್ದೇಶ ಇತ್ತು. ಆ ಬಗ್ಗೆ ಮಾತು ಕೇಳಿ ಬರುತ್ತಿವೆಯಾದರೂ ಕಾರ್ಯಗತಗೊಳ್ಳುತ್ತಿಲ್ಲ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ 524 ಕೋಟಿ ವೆಚ್ಚದ ದಿನದ 24 ಗಂಟೆಯೂ ನೀರು ಪೂರೈಸುವ ಜಲಸಿರಿ ಯೋಜನೆ ಕಾಮಗಾರಿ ಆರಂಭವಾಗಬೇಕಿದೆ.
ತುಂಗಭದ್ರಾ ನದಿಯಿಂದ ತಾಲೂಕಿನ ಹೊನ್ನೂರು, ಅಣಜಿ, ಕೊಡಗನೂರು, ಹೆಬ್ಟಾಳು, ಕಬ್ಬೂರು ಕೆರೆಗಳ ತುಂಬಿಸುವ 22 ಕೆರೆ ಏತ ನೀರಾವರಿ ಯೋಜನೆ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಯೋಜನೆ ಸಮರ್ಪಕವಾಗಿ ಜಾರಿಗೊಂಡಲ್ಲಿ ಭದ್ರಾ ಅಚ್ಚುಕಟ್ಟು ಹೊಂದಿರದ ಪ್ರದೇಶಗಳ ಸಮಸ್ಯೆ ನಿವಾರಣೆ ಆಗಲಿದೆ.
ದಾವಣಗೆರೆ ಪ್ರಮುಖ ಕ್ರೀಡಾ ಕೇಂದ್ರವೂ ಹೌದು. ಯುವಜನ ಸೇವೆ ಇಲಾಖೆಯ ಕ್ರೀಡಾನಿಲಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕುಸ್ತಿಪಟುಗಳ ತಾಣ. ಕೆಲವಾರು ರಣಜಿ ಪಂದ್ಯಗಳಿಗೆ ಸಾಕ್ಷಿಯಾಗಿರುವ ದಾವಣಗೆರೆಯಲ್ಲಿ ಈಗ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಕ್ರಿಕೆಟ್ ಸ್ಟೇಡಿಯಂ ಆಗುವ ಮಾತು ಕೇಳಿ ಬರುತ್ತಿವೆ.
ತಾಲೂಕು ದಾವಣಗೆರೆಯ ಪ್ರಮುಖ ಸಮಸ್ಯೆ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆ. ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ದಾವಣಗೆರೆ ಬಿ. ಕಲ್ಪನಹಳ್ಳಿಯಲ್ಲಿ ಪ್ರತ್ಯೇಕ ಹಾಲು ಉತ್ಪಾದನಾ ಘಟಕ ಕಾರ್ಯಾರಂಭ ಮಾಡಬೇಕಿದೆ. ಮೆಕ್ಕೆಜೋಳದ ಕಣಜ ಎಂಬ ಖ್ಯಾತಿಯ ಇಲ್ಲಿ ಮೆಕ್ಕೆಜೋಳ ಸಂಸ್ಕೃರಣಾ ಘಟಕ ಪ್ರಾರಂಭವಾಗಿಲ್ಲ, ನನೆಗುದಿಗೆ ಬಿದ್ದಿರುವ ಹಾಗೂ ಕೆಲವಾರು ಬೇಡಿಕೆ ಈಡೇರಿದಲ್ಲಿ ದಾವಣಗೆರೆ ತಾಲ್ಲೂಕು ಸಮಗ್ರ ಅಭಿವೃದ್ಧಿ ಆಗಲಿದೆ.
ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ