ಅಮೃತ ಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನ, ದರ್ಗಾಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
Team Udayavani, Aug 3, 2022, 12:19 PM IST
ದಾವಣಗೆರೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ದಾವಣಗೆರೆಯ ಹೊರ ವಲಯದ ಎಸ್.ಎಸ್. ಪ್ಯಾಲೇಸ್ ಮೈದಾನದಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಾರಂಭದ ಮುನ್ನ ಸಿದ್ದರಾಮಯ್ಯ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಹಸ್ರಾರು ಜನರ ನಡುವೆ ದೇವಸ್ಥಾನ ಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪದಾಧಿಕಾರಿಗಳು, ಮುಖ್ಯ ಅರ್ಚಕರು ಸ್ವಾಗತಿಸಿದರು. ಸಿದ್ದರಾಮಯ್ಯ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಪೂಜೆಯ ನಂತರ ಅವರಿಗೆ ಶ್ರೀ ದುರ್ಗಾಂಬಿಕಾ ದೇವಿಯ ಭಾವಚಿತ್ರ, ಕಂಬಾಳಿ ನೀಡುವ ಮೂಲಕ ಸತ್ಕರಿಸಲಾಯಿತು.
ದಾವಣಗೆರೆ ದುರ್ಗಾಂಬಿಕಾ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಕಾರ್ಯಕ್ರಮ ನಢಯುವ ಎಸ್.ಎಸ್. ಶಾಮನೂರು ಪ್ಯಾಲೇಸ್ ಮೈದಾನಕ್ಕೆ ತೆರಳಿದರು.
ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾವಿರಾರು ಜನರು ಸಿದ್ದರಾಮಯ್ಯ ಅವರಿಗೆ ಶುಭ ಕೋರಿದರು. ಗುಲಾಬಿ ಇತರೆ ಹೂವಿನ ಸುರಿಮಳೆಯನ್ನೇ ಸುರಿಸಿದರು. ಹುಲಿಯಾ, ಟಗರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಮೊಳಗಿಸಿದರು.
ದುರ್ಗಾಂಬಿಕಾ ದೇವಸ್ಥಾನ ನಂತರ ಪಕ್ಕದಲ್ಲಿ ಇರುವಂತಹ ಷಾವಲಿ ದರ್ಗಾಕ್ಕೂ ಭೇಟಿ ನೀಡಿದರು.
ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಲು ಜನರು ದೌಡಾಯಿಸುವುದು ಸಾಮಾನ್ಯವಾಗಿತ್ತು. ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಲಾಯಿತು. ಡೊಳ್ಳು ಕುಣಿತ, ಹುಲಿವೇಷ ಇತರೆ ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ಪಯಸ್ವಿನಿ : ಮಾಣಿ – ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ