ತೇಜೋವಧೆ ವಿರುದ್ದ ಕೋರ್ಟ್ ಗೆ ಹೋಗುವುದು ತಪ್ಪಲ್ಲ: ಸಚಿವ ಶ್ರೀರಾಮುಲು
Team Udayavani, Mar 7, 2021, 4:17 PM IST
ಧಾರವಾಡ: ಶಾಸಕರು ಕಾಂಗ್ರೆಸ್ ಬಿಟ್ಟು ಬಂದ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಅಂಥವರ ತೆಜೋವಧೆ ಮಾಡುವಂತಹ ಸಂದರ್ಭದಲ್ಲಿ ಅವರು ಕೋರ್ಟ್ ಗೆ ಹೋಗಿದ್ದು ತಪ್ಪಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇಲ್ಲಿನ ಕವಿವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಿಗೆ ಯಾರಿಗೂ ತೇಜೊವಧೆ ಮಾಡುವ ಹಕ್ಕಿಲ್ಲ. ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದರೆ ಎಲ್ಲೋ ಒಂದು ಕಡೆ ಅವರಿಗೆ ಅನುಮಾನ ಬಂದಿದೆ. ಸಿಡಿ ವಿಚಾರದಲ್ಲಿ ಮಾತ್ರ ಅವರು ಕೋರ್ಟ್ ಗೆ ಹೋಗಿಲ್ಲ. ಬೇರೆ ಬೇರೆ ಕಾರಣಗಳಿಂದ ಹೋಗಿದ್ದಾರೆ ಎಂದರು.
ಬೇರೆ ಪಕ್ಷದಿಂದ ಬಂದವರು ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಗೆದ್ದವರು. ಇಂತ ಸಂದರ್ಭದಲ್ಲಿ ಅವರ ತೇಜೋವಧೆ ಮಾಡುವ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕಾಗಿದ್ದರಿಂದ ಕೋರ್ಟ್ ಗೆ ಹೋಗಿದ್ದಾರೆ. ಮತ್ತಷ್ಟು ಸಚಿವರು ಕೋರ್ಟ್ ಗೆ ಹೋಗುವ ಬಗ್ಗೆ ನಾನು ಹೇಗೆ ಭವಿಷ್ಯ ಹೇಳಲು ಆಗುತ್ತದೆ. ನಾನು ಒಂದು ಸಿಡಿ ಬಂದಿದ್ದಕ್ಕೆ ಉಲ್ಲೇಖ ಮಾಡಲು ಇಷ್ಟ ಪಡುವುದಿಲ್ಲ ಎಂದರು.
ಇದನ್ನೂ ಓದಿ:ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ
ಸದ್ಯ ತನಿಖೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡುವದು ಸಮಂಜಸವಲ್ಲ. ತನಿಖೆ ನಂತರ ಸತ್ಯ- ಸುಳ್ಳು ಗೊತ್ತಾಗುತ್ತದೆ. ಯಡಿಯೂರಪ್ಪ ಸಿಎಂ ಇದ್ದಾಗ ಈ ರೀತಿ ಘಟನೆ ನಡೆಯುತ್ತಿವೆ ಎನ್ನುವುದಕ್ಕಿಂತ, ಯಾವ ರೀತಿ ಅದನ್ನು ಸರಿಪಡಿಸಬೇಕು ಎನ್ನುವದು ವಿಚಾರ ಮಾಡಬೇಕಾಗುತ್ತದೆ ಎಂದರು.
ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರದಲ್ಲಿ ಡಿಕೆಶಿ ಹಾಗೂ ಸಿದ್ಧರಾಮಯ್ಯನವರು ಚರ್ಚೆಗೆ ಬರಬೇಕು. ಚರ್ಚೆಗೆ ಬಂದ ನಂತರ ಅದರ ಸಾಧಕ ಬಾಧಕ ನೋಡೊಣ. ನಮ್ಮ ಸರ್ಕಾರಕ್ಕೆ ಏನು ತೊಂದರೆ ಇಲ್ಲ. ನಾನು ಹೋರಾಟ ಮಾಡುತ್ತ ಮುಂದೆ ಬಂದಿದ್ದೆನೆ. ನನ್ನ ಪಕ್ಷದ ಮೇಲೆ ನನಗೆ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.
ಯಾವ ಸಮಯದಲ್ಲಿ ಯಾರಿಗೆ ಸ್ಥಾನಮಾನ ಸಿಗಬೇಕು, ನಮ್ಮ ಪಕ್ಷದವರು ಸಮಯ ಬಂದಾಗ ಅವಕಾಶ ಮಾಡಿಕೊಡುತ್ತಾರೆ. ನಾನು ಯಾವುದೇ ಸ್ವಾರ್ಥ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಯಾರು ಬ್ಲಾಕ್ಮೇಲ್ ಮಾಡುತ್ತಾರೆ ಅಂಥವರಿಗೆ ಬುದ್ದಿ ಕಲಿಸಬೇಕು ಎಂದರು.