
ಕಾಂಗ್ರೆಸ್ ಟೀಕೆಯಿಂದ ನೋವಾಗಿದೆ: ಸಿಎಂ ಬೊಮ್ಮಾಯಿ
Team Udayavani, Jan 29, 2023, 11:17 PM IST

ಹುಬ್ಬಳ್ಳಿ: ಕಾಂಗ್ರೆಸ್ನವರಂತೆ ಕೀಳುಮಟ್ಟದ ಹೇಳಿಕೆಗಳು ಹಾಗೂ ನಕಾರಾತ್ಮಕ ವಿಚಾರಗಳೊಂದಿಗೆ ವಿಧಾನ ಸಭೆ ಚುನಾವಣೆ ಪ್ರಚಾರ ಕೈಗೊಳ್ಳದೆ, ರಾಜ್ಯ-ಕೇಂದ್ರ ಸರಕಾರ ಗಳ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಂಕಲ್ಪ ಕುರಿತಾಗಿ ಜನರ ಮುಂದೆ ಹೊಗುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹತಾಶೆಗೊಂಡಿದ್ದರಿಂದ ಏನೇನೋ ಹೇಳುತ್ತಿದ್ದಾರೆ. ನನ್ನ ವಿರುದ್ಧವೇ ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಇಲ್ಲಸಲ್ಲದ ಆರೋಪ ಮಾಡಿದಾಗಲೂ ನಾನು ಅವರ ಮಟ್ಟಕ್ಕೆ ಇಳಿಯದೆ ಸಂಯಮದಿಂದ ಪ್ರತಿಕ್ರಿಯೆ ನೀಡಿದ್ದೇನೆ. ಇಲ್ಲಿವರೆಗಿನ ಈ ರೀತಿಯ ಕೀಳುಮಟ್ಟದ ಹೇಳಿಕೆಗಳನ್ನು ಕಂಡಿರಲಿಲ್ಲ. ಕಾಂಗ್ರೆಸ್ನವರ ವರ್ತನೆ ನೋವು ತರಿಸುತ್ತಿದೆ ಎಂದರು.
ರಾಜ್ಯದಲ್ಲಿ ವಿಷಯಾಧಾರಿತ ಚುನಾವಣೆಗಳ ಪ್ರಚಾರ ನಡೆಯುತ್ತಿತ್ತು. ಅದು ಈಗ ಮಾಯವಾಗಿದೆ ಎಂಬುದು ನಿಜ. ಕರ್ನಾಟಕ ಸಂಸದೀಯ ವ್ಯವಸ್ಥೆ ವ್ಯಕ್ತಿಯಾಧಾರಿತ, ದ್ವೇಷ ರೂಪದ್ದಲ್ಲ. ತನ್ನದೇ ಆದಂಥ ಮಹತ್ವ, ಮೌಲ್ಯ ಹೊಂದಿದೆ. ಅದಕ್ಕೆ ಧಕ್ಕೆ ತರುವ ಯತ್ನ ಆಗಬಾರದು. ವಿಷಯಯಾಧಾರಿತವಾಗಿಯೇ ಚುನಾವಣೆಗಳು ನಡೆಯಬೇಕು. ಅಧಿಕಾರದಲ್ಲಿ ಯಾರಿರಬೇಕು, ಯಾವ ವಿಷಯಗಳ ಪ್ರಸ್ತಾಪಕ್ಕೆ ತಮ್ಮ ಒಪ್ಪಿಗೆ ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂದರು.
ಪಕ್ಷದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ ವಿಜಯಪುರಕ್ಕೆ ಭೇಟಿ ನೀಡಿರುವುದು ಸಂಘಟನಾತ್ಮಕ ಕಾರ್ಯಕ್ಕಾಗಿ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಟಾಪ್ ನ್ಯೂಸ್
