ತ್ರಿವಳಿ ಕೊಲೆ ಪ್ರಕರಣ: ಪ್ರವೀಣ್ ಭಟ್ ನಿರ್ದೋಷಿಯೆಂದು ಧಾರವಾಡ ಹೈಕೋರ್ಟ್ ತೀರ್ಪು
Team Udayavani, Jun 23, 2022, 2:43 PM IST
ಧಾರವಾಡ: ಬೆಳಗಾವಿಯ ಕುವೆಂಪು ನಗರದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಭಟ್ ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಎಂದು ತೀರ್ಪು ಹೊರಡಿಸಿದೆ.
2015ರ ಆಗಸ್ಟ್ ನಲ್ಲಿ ಬೆಳಗಾವಿಯ ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ಗೃಹಿಣಿ ಮತ್ತು ಇಬ್ಬರು ಮಕ್ಕಳ ಕಗ್ಗೋಲೆ ಮಾಡಲಾಗಿದೆ ಎಂದು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಇದಾದ ಬಳಿಕ ಕೋರ್ಟ್ಗೆ ಎಪಿಎಂಸಿ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018 ರಂದೇ ಪ್ರವೀಣ್ ಭಟ್ ಗೆ ಜೀವಾವಧಿ ಶಿಕ್ಷೆ ಸಹ ವಿಧಿಸಿ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಪ್ರವೀಣ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ಪನ್ನೀರ್ ಸೆಲ್ವಂ ಮೇಲೆ ಬಾಟಲಿ ಎಸೆತ ; ಎಐಎಡಿಎಂಕೆ ಸಭೆಯಲ್ಲಿ ಕೋಲಾಹಲ
ವಿಚಾರಣೆ ಮಾಡಿದ ಹೈಕೋರ್ಟ್ ನ ನ್ಯಾಯಾಧೀಶರಾದ ಕೆ.ಎಸ್ . ಮುದಗಲ್, ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತಾಯಿ ಮತ್ತು ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ತಾಯಿ ರೀನಾ ಮಾಲಗತ್ತಿ, ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಭೀಕರವಾಗಿ ಕೊಲೆಗೈಯ್ಯಲಾಗಿತ್ತು. ಆಗ 24 ಗಂಟೆಯಲ್ಲೇ ಎಪಿಎಂಸಿ ಆರೋಪಿತ ಪ್ರವೀಣ್ ಭಟ್ ನನ್ನು ಬಂಧಿಸಿದ್ದರು. ಕೊಲೆ ಮಾಡುವ ಮುಂಚಿತವಾಗಿ ಒಂದು ವರ್ಷದ ಹಿಂದೆ ರೀನಾ ಹಾಗೂ ಪ್ರವೀಣ್ ನಡುವೆ ಸ್ನೇಹ ಅಂಕುರಿಸಿತ್ತು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.