ಕರಿಯರ್ ಕಾರಿಡಾರ್ನಲ್ಲಿ ವಿಕೃತಿ ಕರಾಮತ್ತು
ಮೋಹ ಜಾಲಕ್ಕೆ ವಿದ್ಯಾರ್ಥಿನಿಯರೇ ಟಾರ್ಗೆಟ್ ; ಲೆಕ್ಕಕ್ಕೆ ಸಿಕ್ಕುತ್ತಿಲ್ಲ ಪಿಜಿಗಳು ; ಹೆಡೆ ಬಿಚ್ಚುತ್ತಿದೆ ಮಾದಕ ವಸ್ತು ಜಾಲ
Team Udayavani, Aug 23, 2022, 3:11 PM IST
ಧಾರವಾಡ: ಕಣ್ತುಂಬಾ ಭವಿಷ್ಯ ರೂಪಿಸಿಕೊಳ್ಳುವ ಕನಸು, ಓದಿ ಸಾಧನೆ ಮಾಡಲೇಬೇಕೆಂಬ ಮನಸ್ಸು, ಬಡತನದ ಬವಣೆಯಿದ್ದರೂ ಲೆಕ್ಕಿಸದೇ ಮುನ್ನುಗ್ಗುವ ಛಲ ಒಂದೆಡೆಯಾದರೆ ವಿದ್ಯೆ ಕಲಿಯಲು ಬಂದ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗುವ ವಿಕೃತ ಮನಸ್ಸುಗಳು ಹದ್ದು ಮೀರುತ್ತಿವೆ.
ಹೌದು. ವಿದ್ಯಾಕಾಶಿ ಎಂದೇ ಹೆಸರು ಪಡೆದಿದ್ದ ಧಾರವಾಡ ನಗರಕ್ಕೆ ತಮ್ಮ ಹೆಣ್ಣು ಮಕ್ಕಳನ್ನು ಓದಲು ಕಳುಹಿಸುವ ಉತ್ತರ ಕರ್ನಾಟಕ ಭಾಗದ ತಂದೆ-ತಾಯಿಗಳೇ ಇನ್ಮುಂದೆ ಕೊಂಚ ಎಚ್ಚರಿಕೆ ವಹಿಸಿ. ನಿಮ್ಮ ಮಗಳು ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆ ಬಗ್ಗೆ ಹದ್ದಿನ ಕಣ್ಣಿಡುವ ಕಾಲ ಬಂದಿದೆ.
ಕಾರಣ ಇದನ್ನು ಸಾಕ್ಷೀಕರಿಸುವ ಘಟನೆ ಧಾರವಾಡದ ಕರಿಯರ್ ಕಾರಿಡಾರ್ನ ಪಿಯು ಕಾಲೇಜೊಂದರಲ್ಲಿ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸತತ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿರುವ ಕುರಿತು ಸ್ವತಃ ಅಪ್ರಾಪ್ತ ಬಾಲಕಿಯೇ ದೂರು ನೀಡಿದ್ದು, ಇದು ಮೊದಲ ಪ್ರಕರಣ. ಆದರೆ ಇಂತಹ ನೂರಾರು ಪ್ರಕರಣಗಳು ತೆರೆಯ ಹಿಂದೆಯೇ ಸದ್ದು ಮಾಡುತ್ತಿರುವ ಗುಮಾನಿ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ.
ಲಕ್ಷ ವಿದ್ಯಾರ್ಥಿನಿಯರು: ವಿದ್ಯಾಕಾಶಿಗೆ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಒಟ್ಟಾರೆ ಓದಲು ಬಂದಿರುವ ವಿದ್ಯಾರ್ಥಿಗಳ ಸಂಖ್ಯೆಎರಡು ಲಕ್ಷಕ್ಕೂ ಅಧಿಕವಾಗಿದೆ. ಈ ಪೈಕಿ ಅಂದಾಜು ಒಂದು ಲಕ್ಷ ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲೂ ಪಿಯುಸಿಯಲ್ಲಿ ಓದುವ ಅಪ್ರಾಪ್ತ ವಿದ್ಯಾರ್ಥಿನಿಯರ ಸಂಖ್ಯೆ ಶೇ.20ರಷ್ಟಿದೆ. ಓದು, ಊಟ ಮತ್ತು ಸುತ್ತಾಟಕ್ಕೆ ವಿದ್ಯಾರ್ಥಿನಿಯರು ಸೀಮಿತವಾಗಿದ್ದಲ್ಲಿ ಯಾವುದೇ ತೊಂದರೆಗಳಿಲ್ಲ. ಆದರೆ ಆಡಳಿತ ಮಂಡಳಿಗಳ ಹಂಗಿನಲ್ಲಿ ಕೆಲಸ ಮಾಡುವ ವಿದ್ಯಾರ್ಥಿನಿಯರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ.
2000 ತಲುಪಿದ ಪಿಜಿಗಳು: ಧಾರವಾಡದಲ್ಲಿ ಇದೀಗ ಬರೋಬ್ಬರಿ ಎರಡು ಸಾವಿರದಷ್ಟು ಪಿ.ಜಿ.ಗಳಿವೆ. ಸಪ್ತಾಪುರ, ರಾಣಿ ಚನ್ನಮ್ಮ ನಗರ, ಶಿವಗಿರಿ, ಚೆನ್ನಬಸವೇಶ್ವರ ನಗರ, ಶ್ರೀನಗರ, ಬಸವ ನಗರ ಭಾಗ-1 ಮತ್ತು 2, ತಪೋವನ, ನೆಹರು ನಗರ, ಗಣೇಶ ನಗರ, ಅಕ್ಕಮಹಾದೇವಿ ಆಶ್ರಮ, ಹೊಯ್ಸಳ ನಗರದ ಸುತ್ತಲಿನ ಪ್ರದೇಶದಲ್ಲಿ ಇದೀಗ ದಿನದಿಂದ ದಿನಕ್ಕೆ ಹೊಸ ಪಿ.ಜಿ.ಗಳು ನಾಯಿಕೊಡೆಯಂತೆ ಎದ್ದು ನಿಲ್ಲುತ್ತಿವೆ. ಒಂದೊಂದು ರೂಮಿನಲ್ಲಿ 4-8 ವಿದ್ಯಾರ್ಥಿನಿಯರಿಗೆ ವಾಸ್ತವ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೆ 6-10 ಸಾವಿರ ರೂ. ಪ್ರತಿ ತಿಂಗಳಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಇಲ್ಲಿ ವಿದ್ಯಾರ್ಥಿನಿಯರನ್ನು ನೋಡಿಕೊಳ್ಳಲು ವಾರ್ಡನ್ಗಳಿಲ್ಲ. ಶುಚಿತ್ವ ಇಲ್ಲ. ಭದ್ರತೆ ಇಲ್ಲ. ಅಷ್ಟೇಯಲ್ಲ ಯಾರು ಯಾವ ಪಿ.ಜಿ.ಯಲ್ಲಿದ್ದಾರೆ ಎನ್ನುವುದಕ್ಕೆ ದಾಖಲೆಗಳೂ ಇಲ್ಲ. ಹೀಗಾಗಿ ಏನಾದರೂ ಅನಾಹುತಗಳು ನಡೆದರೂ ಯಾರಿಗೆ ಯಾರೂ ಸಂಬಂಧವಿಲ್ಲ ಎನ್ನುವಂತಾಗಿದೆ.
ಹೈಟೆಕ್ ವೇಶ್ಯಾವಾಟಿಕೆ: ಇನ್ನು ಕಳೆದ ವರ್ಷ ಸಪ್ತಾಪೂರದ ಪಿ.ಜಿ.ಪಕ್ಕದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆದ ಗುಮಾನಿ ಬೆನ್ನಟ್ಟಿದ್ದ ಪೊಲೀಸರಿಗೆ ಸಾಕ್ಷಿ ಸಮೇತ ಮೂವರು ಸಿಕ್ಕಿ ಬಿದ್ದಿದ್ದರು. ನೇಪಾಳ ಮೂಲದ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಈಗಲೂ ಇಲ್ಲಿ ಸಕ್ರಿಯವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪೊಲೀಸರಿಗೆ ಅನುಮಾನ ಬರದಂತೆ ಮಾಡಲು ಪಿ.ಜಿ.ಗಳೇ ಹೆಚ್ಚಿರುವ ಪ್ರದೇಶದ ಅಜ್ಞಾತ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ನೇಪಾಳಿ ವಿದ್ಯಾರ್ಥಿನಿಯರು ಓದಲು ಬಂದಿದ್ದಾರೆಂದು ನಟಿಸುವಂತೆ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಪತ್ತೆಯಾಗಿತ್ತು. ಪ್ರತಿಷ್ಠಿತ ಕರಿಯರ್ ಅಕಾಡೆಮಿಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಪೂರ್ಣ ಸತ್ಯ ಇನ್ನು ಹೊರಗೆ ಬಂದಿಲ.
ಮಾದಕ ವಸ್ತುಗಳ ಜಾಲ
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಫುಡ್ ಕೋರ್ಟ್ಗಳು, ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಅದರ ಜತೆಗೆ ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಸಾರಾಯಿ ದಾಸರಾಗುತ್ತಿದ್ದಾರೆ. ಇದನ್ನು ಪೂರೈಸುವ ಧನದಾಹಿ ಜಾಲವೂ ಇಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿ ಸಮೂಹ ಕೊಂಚ ಮೋಜು ಮಸ್ತಿಗೆ ಇಳಿದಿದ್ದು, ನಿಧಾನಕ್ಕೆ ಅಲ್ಲಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಜತೆಗೆ ವಿದ್ಯಾರ್ಥಿನಿಯರನ್ನೂ ಬೇರೆ ಆಮಿಷಗಳನ್ನೊಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುವ ಅನೇಕ ಪ್ರಕರಣಗಳು ನಡೆದಿದ್ದು, ಅವುಗಳನ್ನು ಆಡಳಿತ ಮಂಡಳಿಗಳು ಅಲ್ಲಲ್ಲೇ ಹೊಸಕಿ ಹಾಕುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ವಹಿಸುವ ಅಗತ್ಯವಿದೆ ಎನ್ನುತ್ತಿದ್ದಾರೆ ಪೋಷಕರು.
ಐಟಿ-ಬಿಟಿಗೆ ಬೆಂಗಳೂರಿನಲ್ಲಿ ಸುಸಜ್ಜಿತ ನಗರವೊಂದನ್ನು ನಿರ್ಮಿಸಿದಂತೆ ಧಾರವಾಡದಲ್ಲಿ ಶಿಕ್ಷಣ ನಗರ ನಿರ್ಮಾಣದ ಅಗತ್ಯವಿದೆ. ಇದನ್ನು ಮುಂಬರುವ ದಿನಗಳಲ್ಲಿ ತಜ್ಞರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ. ಇನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ವಿಕೇಂದ್ರಿಕರಣ ಮಾಡಿ, ವ್ಯವಸ್ಥಿತ ಜಾಗದಲ್ಲಿ ಬೆಳೆಸುವ ನೀಲನಕ್ಷೆ ಸಿದ್ಧಪಡಿಸುತ್ತೇವೆ. -ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ವಾಸದ ಮನೆಗಳನ್ನು ರಾತ್ರೋರಾತ್ರಿ ಪಿ.ಜಿ.ಗಳನ್ನಾಗಿ ಮಾಡಿ ಪಾಲಿಕೆಗೆ ಶುಲ್ಕ ಕಟ್ಟದೇ ನೂರಾರು ಪಿ.ಜಿ. ಮಾಲೀಕರು ಮೋಸ ಮಾಡಿದ್ದಾರೆ. ಅವರಿಗೆ ನೋಟಿಸ್ ಕೊಟ್ಟಿದ್ದು, ಪರಿಶೀಲಿಸಲು ಹೇಳಿದ್ದೇನೆ. ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಇನ್ನಷ್ಟು ಕಠಿಣ ಕ್ರಮ ವಹಿಸುತ್ತೇವೆ. –ಈರೇಶ ಅಂಚಟಗೇರಿ, ಮೇಯರ್ ಹು-ಧಾ ಮಹಾನಗರ ಪಾಲಿಕೆ
ಕರಿಯರ್ ಕಾರಿಡಾರ್ ರಸ್ತೆ ಮತ್ತು ಸುತ್ತಲಿನ ನಗರಗಳಲ್ಲಿನ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಮತ್ತು ಪಿ.ಜಿ.ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಕೊಡುತ್ತೇವೆ. ಪೋಷಕರು ಆತಂಕಗೊಳ್ಳುವ ಅಗತ್ಯವಿಲ್ಲ. –ಲಾಬೂರಾಮ್, ಪೊಲೀಸ್ ಆಯುಕ್ತ,
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ
Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು
LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ
Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ
MUST WATCH
ಹೊಸ ಸೇರ್ಪಡೆ
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್