ಬೇಡ್ತಿಕೊಳ್ಳದ ಬೇಲಿಗಳಲ್ಲಿ ಮೇಳೈಸಿದ ಜೀವವೈವಿಧ್ಯ
ಗರಿ ಬಿಚ್ಚಿದ 50ಕ್ಕೂ ಹೆಚ್ಚು ಪ್ರಬೇಧದ ಪಕ್ಷಿ ಸಂಕುಲ; ಕಬ್ಜಿಗೆ ಜೈವಿಕ ಬೇಲಿಗಳ ಬಲಿ
Team Udayavani, Sep 26, 2022, 3:53 PM IST
ಧಾರವಾಡ: ಸುವಾಸನೆ ಬೀರುತ್ತ ನಗೆ ಚೆಲ್ಲಿ ನಿಂತಿರುವ ನೂರಾರು ಬಣ್ಣದ ಬೇಲಿಯ ಹೂಗಳು, ಮದಿಹುಲ್ಲನ್ನು ಹೆಕ್ಕಿ ತಂದು ಮನೆ ಕಟ್ಟಿಕೊಳ್ಳುತ್ತಿರುವ ಗುಬ್ಬಚ್ಚಿಗಳು, ಫಲರಾಶಿಯನ್ನೇ ಹೊತ್ತು ನಿಂತಿರುವ ಮಡಿವಾಳ, ಹಾಗಲು, ತೊಂಟಿ, ಮಾಲಿಂಗನ ಬಳ್ಳಿಗಳು, ಎಲ್ಲದಕ್ಕೂ ಆಸರೆಯಾಗಿ ನಿಂತ ವಿವಿಧ ಜಾತಿಯ ಬೇಲಿಯ ಗಿಡಗಳು. ಒಟ್ಟಿನಲ್ಲಿ ಹಸಿರು ಹೊನ್ನ ಹೊತ್ತು ನಿಂತ ಬೇಡ್ತಿಕೊಳ್ಳದಲ್ಲಿನ ಹೊಲದ ಬೇಲಿಗಳು.
ಹೌದು. ಸತತ ಮೂರು ವರ್ಷಗಳ ಮಳೆಯಿಂದಾಗಿ ಎಲ್ಲೆಡೆ ಪರಿಪೂರ್ಣ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ಪ್ರಸಕ್ತ ಸಾಲಿನ ಹದಭರಿತ ಮಳೆಯಿಂದಾಗಿ ಬೇಡ್ತಿಕೊಳ್ಳದ ಬೇಲಿಗಳು ಜೀವ ವೈವಿಧ್ಯತೆಯ ತಾಣವಾಗಿ ಕಂಗೊಳಿಸುತ್ತಿವೆ. ವಿವಿಧ ಜಾತಿಯ ಔಷಧಿ ಸಸ್ಯಗಳು, ಬೇಲಿಯ ಹೂಗಳು, ಗಡ್ಡೆಯಾಧಾರಿತವಾಗಿ ಬೆಳೆದು ಫಲಕೊಡುವ ಬಳ್ಳಿಗಳು ಮೈದುಂಬಿಕೊಂಡಿವೆ.
ಅಡಸಲ, ಲಂವಂಗ, ಕಳ್ಳಿಕಂಟೆ, ಮುಳ್ಳು ಕಳ್ಳಿಕಂಟೆ, ಶಿರಸಲ, ಹಾಡಂಗ, ತಡಸಲ, ಮಿಟ್ಟಿ ಗಿಡಗಂಟೆಗಳು ಪೊಗರುದಸ್ತಾಗಿ ಬೆಳೆದು ನಿಂತಿದ್ದು ವಿಶೇಷ. ಇನ್ನು ಮಹಾಲಿಂಗ, ಹಾಗಲು, ತೊಂಡೆ, ರೊಟ್ಟಿ,ದಾಸಿ,ಪಿಟ್ಟಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಬೇಧದ ಬಳ್ಳಿಗಳು ಫಲ ಹಿಡಿದು ಜೀವ ಸಂಕುಲಕ್ಕೆ ಆಹಾರ ನೀಡುತ್ತಿವೆ.
ಉಕ್ಕಿ ಹರಿಯುತ್ತಿರುವ ಹಳ್ಳಗಳು:
ಇನ್ನು ಬೇಡ್ತಿ ಕೊಳ್ಳದಲ್ಲಿ ಬೇಡ್ತಿ, ಜ್ಯಾತಕ್ಯಾ, ಸಣ್ಣಹಳ್ಳ, ದೊಡ್ಡ ಹಳ್ಳ, ಡೊಂಕಹಳ್ಳ, ಡೊಂಬರಿಹಳ್ಳ, ಕಾಗಿನಹಳ್ಳ,ಬೆಣಚಿಹಳ್ಳ ಸೇರಿದಂತೆ 18ಕ್ಕೂ ಅಧಿಕ ಹಳ್ಳಗಳಿದ್ದು, ಅವೆಲ್ಲವೂ ಅಳ್ನಾವರ-ಧಾರವಾಡ ತಾಲೂಕಿನಿಂದ ಹಿಡಿದು ಕಲಘಟಗಿ ಮತ್ತು ಯಲ್ಲಾಪೂರ ತಾಲೂಕಿನವರೆಗೂ ಅಲ್ಲಲ್ಲಿ ಹುಟ್ಟಿಕೊಂಡು ದೊಡ್ಡ ಪ್ರಮಾಣದ ನೀರನ್ನು ತಂದು ಬೇಡ್ತಿಗೆ ಸೇರಿಸುತ್ತವೆ. ಈ ಹಳ್ಳಗಳಲ್ಲಿ ಹರಿಯುವ ನೀರಿಗೆ ಅಲ್ಲಲ್ಲಿ ಚೆಕ್ಡ್ಯಾಂಗಳನ್ನು ಕಟ್ಟಲಾಗಿದ್ದು, ಕೆಲವು ಕಡೆಗಳಲ್ಲಿ ಕಲ್ಲು ಗಣಿಕಾರಿಕೆಯಿಂದ ಉಂಟಾಗಿರುವ ದೈತ್ಯ ಗುಂಡಿಗಳು ಇವೆ. ಈ ಹಳ್ಳಗಳಲ್ಲಿ ಪಕ್ಷಿ ಸಂಕುಲ ಮತ್ತು ಸರಿಸೃಪಗಳು ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ವರೆಗೂ ಸಂತಾನಾಭಿವೃದ್ಧಿಗೆ ಗೂಡು ಕಟ್ಟಿಕೊಳ್ಳುತ್ತವೆ. ಅದರಲ್ಲೂ ದೇಶಿಗುಬ್ಬಿ, ಬೂದುಬಣ್ಣದ ಗುಬ್ಬಿ, ಕರಿಗುಬ್ಬಿ, ನೀಲಿಗುಬ್ಬಿ ಸೇರಿದಂತೆ 21ಕ್ಕೂ ಹೆಚ್ಚು ಪ್ರಬೇಧದ ಪಕ್ಷಿ ಸಂಕುಲಕ್ಕೆ ಇದೇ ನೆಲೆಯಾಗಿದೆ. ಈ ವರ್ಷವೂ ಉತ್ತಮ ಮಳೆಯಾಗಿದ್ದು, ಪಕ್ಷಿಪ್ರಬೇಧದ ಸಂಭ್ರಮಕ್ಕೆ ಕಾರಣವಾಗಿದೆ.
ಕಣ್ಮರೆಯಾಗುತ್ತಿವೆ ಜೈವಿಕ ಬೇಲಿ
ಕಬ್ಬು ಬೆಳೆಯ ಹಾವಳಿಯಿಂದಾಗಿ ಬೇಡ್ತಿಕೊಳ್ಳದಲ್ಲಿನ ಪಕ್ಷಿ ಮತ್ತು ಸರಿಸೃಪಗಳ ಸಂಕುಲಕ್ಕೆ ದೊಡ್ಡ ಆಸರೆಯಾಗಿದ್ದ ಜೈವಿಕ ಬೇಲಿಗಳು ಇದೀಗ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ. ಎಲ್ಲೆಡೆ ಸಿಮೆಂಟ್ ಕಂಬ-ತಂತಿಬೇಲಿಗಳನ್ನು ರೈತರು ಹಾಕುತ್ತಿದ್ದು, ಜೈವಿಕ ಬೇಲಿಯನ್ನು ಜೆಸಿಬಿಗಳಿಂದ ಕಿತ್ತೆಸೆಯುತ್ತಿದ್ದಾರೆ. ಜೈವಿಕ ಬೇಲಿ ಕನಿಷ್ಠ 6-10 ಅಡಿಯಷ್ಟು ಜಾಗೆಯನ್ನು ರಸ್ತೆಯ ಮಗ್ಗಲು ಹೊಲಗಳಲ್ಲಿ ತೆಗೆದುಕೊಳ್ಳುತ್ತದೆ. ಒಂದೆಡೆ ರಸ್ತೆ ಇನ್ನೊಂದೆಡೆ ಬೇಲಿ ನಡುವೆ ಮಳೆ ಹರಿಯಲು ಗಟಾರು, ಅಲ್ಲಲ್ಲಿ ಗುಂಡಿಗಳು ನೀರಿಂಗಿಸುತ್ತಿದ್ದರಿಂದಲೇ ಈ ಜೀವ ಸಂಕುಲ ಮತ್ತು ಜೈವಿಕ ಪ್ರಪಂಚ ಇಲ್ಲಿ ಕಳೆ ಕಟ್ಟುತ್ತದೆ. ಆದರೆ ಕಬ್ಬು ಬೆಳೆಯುವ ಆಸೆಗೆ ರೈತರು ಜೈವಿಕ ಬೇಲಿಗಳನ್ನು ಕಿತ್ತು ಹಾಕಿ ರಸ್ತೆಗಳಿಗೆ ಅಂಟಿಕೊಂಡೇ ಕಬ್ಬು ನಾಟಿ ಮಾಡುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಜೈವಿಕ ಬೇಲಿಗಳು ಕಣ್ಮರೆಯಾಗುತ್ತಿವೆ.
ಬೇಡ್ತಿಕೊಳ್ಳದಲ್ಲಿ ಅಂದಾಜು 300 ಕಿ.ಮೀ.ನಷ್ಟು ಉದ್ದದ ಜೈವಿಕ ಬೇಲಿಗಳಿವೆ. ಇಲ್ಲಿ ಪಕ್ಷಿಗಳಷ್ಟೇ ಅಲ್ಲ, ವಿವಿಧ ಔಷಧಿ ಸಸ್ಯಗಳು, ಸರಿಸೃಪಗಳು ನೆಲೆ ಕಂಡುಕೊಂಡಿವೆ. ಬೇಡ್ತಿಕೊಳ್ಳದಲ್ಲಿ ಅಂದಾಜು 8 ಸಾವಿರ ಹೆಕ್ಟೇರ್ನಷ್ಟು ಹಾಡು ಈ ಬೇಲಿಗಳಲ್ಲಿಯೇ ಇದೆ. ಹಳ್ಳದ ದಂಡೆ, ಹೊಲದ ರಸ್ತೆ ಅಕ್ಕಪಕ್ಕ ಇರುವ ಬೇಲಿಕಾಡು ಸದ್ಯಕ್ಕೆ ರಕ್ಷಣೆಯಾಗಬೇಕಿದೆ. ಬೇಡ್ತಿಕೊಳ್ಳದ ಜೈವಿಕ ಬೇಲಿಗಳು 50ಕ್ಕೂ ಅಧಿಕ ಪ್ರಬೇಧದ ಪಕ್ಷಿಗಳಿಗೆ ಆಹಾರ,ನೀರು, ಸಂತಾನಾಭಿವೃದ್ಧಿಗೆ ಪೂರಕ ತಾಣಗಳಾಗಿವೆ. 13 ಬಗೆಯ ಹಾವುಗಳು, ಎರಡು ಬಗೆಯ ಉಡಗಳು, 12ಕ್ಕೂ ಅಧಿಕ ಬಗೆಯ ಓತಿಕ್ಯಾತ್ ಅಷ್ಟೇಯಲ್ಲ, ಗೋಧಿ ಬಣ್ಣದ ನಾಗರ ಹಾವುಗಳಿಗೆ ಈ ಬೇಲಿಗಳೇ ಆಸರೆ.
ಕಲ್ಮಶ ನೀರು ಹಳ್ಳಕ್ಕೆ
ಇನ್ನು ಗ್ರಾಮಗಳಲ್ಲಿಯೂ ಸಿಮೆಂಟ್ ಗಟಾರು ಮತ್ತು ಶೌಚಾಲಯಗಳಿಂದ ಹೊರಬರುವ ನೀರು ಸದ್ಯಕ್ಕೆ ಗ್ರಾಮಗಳ ಮುಂದಿನ ಕೆರೆ ಮತ್ತು ಹಳ್ಳಗಳನ್ನೇ ಸೇರುತ್ತಿದೆ. ಬೇಡ್ತಿಕೊಳ್ಳದ ಗ್ರಾಮಗಳಲ್ಲಿನ ಕೊಳಚೆ ನೀರು ಪ್ರತ್ಯೇಕವಾಗಿ ಹರಿಯುತ್ತಿಲ್ಲ. ಬದಲಿಗೆ ದೊಡ್ಡ ಮಳೆಯಾದಾಗ ಎಲ್ಲ ಹೊಲಸು ನೀರು ಹೋಗಿ ಕೆರೆಯಂಗಳ ಮತ್ತು ಈ ಹಳ್ಳಗಳನ್ನೇ ಸೇರುತ್ತಿದೆ. ಅಷ್ಟೇಯಲ್ಲ ಘನತ್ಯಾಜ್ಯ, ಪ್ಲಾಸ್ಟಿಕ್,ಅಬ್ರಕ್, ವೈದ್ಯಕೀಯ ಕಸ, ಮತ್ತು ಟಾಯರ್ ಗಳು ಸೇರಿದಂತೆ ಪರಿಸರಕ್ಕೆ ಹಾನಿಯಾಗುವ ಮುರಿದ ಆಟಿಕೆ, ಗಾಜು ಸೇರಿದಂತೆ ಮನೆಯನ್ನು ಸ್ವತ್ಛಗೊಳಿಸಿದ ನಂತರ ಬರುವ ಎಲ್ಲಾ ಕಸವನ್ನು ಗ್ರಾಮೀಣರು ಈ ಹಳ್ಳಗಳಿಗೆ ತಂದು ಹಾಕುತ್ತಿದ್ದಾರೆ.
50 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿ ಸಂಕುಲಕ್ಕೆ ಅಗತ್ಯವಾದ ಆಹಾರ, ನೀರು ಮತ್ತು ವಸತಿಯನ್ನು ಬೇಡ್ತಿಕೊಳ್ಳ ಒದಗಿಸಿಕೊಟ್ಟಿದೆ. ಇದರಲ್ಲಿ ಜೈವಿಕ ಬೇಲಿಗಳದ್ದೇ ದೊಡ್ಡ ಪಾತ್ರ. ಇಂತಹ ಬೇಲಿಗಳನ್ನು ರೈತರು ಉಳಿಸಿಕೊಳ್ಳಬೇಕು. ಇದರಿಂದ ಕೃಷಿಗೆ ಸಹಾಯಕವಾಗುತ್ತದೆ. –ಡಾ| ಪ್ರಕಾಶ ಗೌಡರ, ಪಕ್ಷಿತಜ್ಞ
ಜೈವಿಕ ಬೇಲಿಗಳ ಮಹತ್ವವನ್ನು ರೈತರಿಗೆ ಈಗಾಗಲೇ ತಿಳಿಸಿಕೊಡುತ್ತಿದ್ದೇವೆ. ಬೇಡ್ತಿಕೊಳ್ಳದ ರೈತರ ಹೊಲದ ದಾರಿಗಳು ಮತ್ತು ಹಳ್ಳಕೊಳ್ಳದ ಇಕ್ಕೆಲುಗಳನ್ನು ರಕ್ಷಣೆ ಮಾಡಿಕೊಳ್ಳುವ ಹೊಣೆ ಇಲ್ಲಿನ ರೈತರ ಮೇಲಿದೆ. –ಪಾರ್ಶ್ವನಾಥ ಪಾರಿಶ್ವಾಡ, ಯುವ ರೈತ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ