ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ


Team Udayavani, Feb 9, 2023, 5:07 PM IST

ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ

– ಆರು ಬಾರಿ ಶಾಸಕರಾಗಿ ಸಾಧಿಸಿದ್ದು ಸಾಕಷ್ಟು
– ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸ್ಪೀಕರ್‌ ಆಗಿ ದೊರೆತ ಅವಕಾಶಗಳ ಬಳಕೆ
– ಸೌಲಭ್ಯಗಳ ವಿಚಾರಕ್ಕೆ ಬಂದರೆ ಸಣ್ಣದು-ದೊಡ್ಡದೆಂದು ನೋಡದೆ ಅನುಷ್ಠಾನಕ್ಕೆ ಭಾಗಿ
– ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ ನಾಯಕ

ಕುರುಚಲು ಗುಡ್ಡದಂತಿದ್ದ ಬೆಟ್ಟ, ಪಾಳು ಬಿದ್ದ ಉದ್ಯಾನವನಗಳಿಗೆ ಮನಮೋಹಕ ಸೌಲಭ್ಯ-ಅಭಿವೃದ್ಧಿ ಸ್ಪರ್ಶ, ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡ ಪಿರಾಮಿಡ್‌ ಧ್ಯಾನಮಂದಿರ, ಮಾರುಕಟ್ಟೆಗಳ ಆಧುನೀಕರಣ, ಒಳಚರಂಡಿ ವ್ಯವಸ್ಥೆ, ಹಲವು ವಾರ್ಡ್‌ಗಳಿಗೆ 24/7 ನೀರು ಪೂರೈಕೆ ಯೋಜನೆ, ಭವನಗಳ ಆಧುನೀಕರಣ, ಟೆಂಡರ್‌ಶ್ಯೂರ್‌ ರಸ್ತೆ, ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಕೆರೆಗಳಿಗೆ ಕಾಯಕಲ್ಪ, ನಾಲಾಗಳ ಅಭಿವೃದ್ಧಿ ಹಾಗೂ ಹಸಿರು ಕಾರಿಡಾರ್‌ಗೆ ಪರಿಶ್ರಮ…ಹೀಗೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ. ಕ್ಷೇತ್ರ ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ, ಯತ್ನ ಹಾಗೂ ಪರಿಶ್ರಮ ಬದಲಾವಣೆ ರೂಪದಲ್ಲಿ ಗೋಚರಿಸುತ್ತಿದೆ.

1994ರಿಂದ ಸತತವಾಗಿ ಆರು ಬಾರಿ ಶಾಸಕರಾಗಿರುವ ಜಗದೀಶ ಶೆಟ್ಟರ ಅವರು, ಮೊದಲು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ನಂತರ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ನಂತರ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಕ್ಷೇತ್ರದ ಶಾಸಕರಾಗಿ ಮತದಾರರೊಂದಿಗೆ ನಿಕಟ ಸಂಪರ್ಕ ಜತೆಗೆ ಕ್ಷೇತ್ರಕ್ಕೆ ಮೂಲ ಸೌಲಭ್ಯಗಳ ನೀಡಿಕೆ, ಅಭಿವೃದ್ಧಿ ಸ್ಪರ್ಶ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದ್ದು, ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಸೌಲಭ್ಯಗಳ ವಿಚಾರಕ್ಕೆ ಬಂದರೆ ಅದು ಸಣ್ಣದು-ದೊಡ್ಡದು ಎಂದು ನೋಡದೆ ಅವುಗಳ ಅನುಷ್ಠಾನಕ್ಕೆ ಸ್ವತಃ ಭಾಗಿಯಾಗುತ್ತಾರೆ. ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಜತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಹಲವು ಪ್ರತಿಷ್ಠಿತ ಹಾಗೂ ಐತಿಹಾಸಿಕ ಸ್ಥಳ, ಸಾಧಕರಿಗೆ ನೆಲೆ ಒದಗಿಸಿ ತಾಣವಾಗಿದೆ. ವಾಣಿಜ್ಯ ನಗರಿ ಖ್ಯಾತಿ ಪಡೆದಿದ್ದರೂ ಅಭಿವೃದ್ಧಿ, ಆಧುನಿಕ ಸೌಲಭ್ಯಗಳ ದೃಷ್ಟಿಯಿಂದ ಹೆಚ್ಚು ಸಾಧನೆ ಸಾಧ್ಯವಾಗಿರಲಿಲ್ಲ. ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲದ ಸ್ಥಿತಿ ಇತ್ತು. ಜಗದೀಶ ಶೆಟ್ಟರ ಅವರು ಕೇವಲ ಶಾಸಕರಾಗಿ ತಮ್ಮ ಕ್ಷೇತ್ರಕ್ಕೆ ಸೀಮಿತರಾಗದೆ ರಾಜ್ಯ ನಾಯಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸ್ಪೀಕರ್‌ ಆಗಿ ತಮಗೆ ದೊರೆತ ಅವಕಾಶಗಳನ್ನು ಅಭಿವೃದ್ಧಿಗೆ ಬಳಸುವ ಯತ್ನ ತೋರಿದವರು. ಒಳಚರಂಡಿ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುವ ಮೂಲಕ ನಗರದ ಅಂದ ಹೆಚ್ಚಿಸುವುದಕ್ಕೆ ಯತ್ನಿಸಿದ್ದಾರೆ.

ನೃಪತುಂಗ ಬೆಟ್ಟಕ್ಕೆ ಆಧುನಿಕ ಸ್ಪರ್ಶ: ಹೊಸ ಹುಬ್ಬಳ್ಳಿಯ ಮುಕುಟಪ್ರಾಯದಂತಿರುವ ನೃಪತುಂಗ ಬೆಟ್ಟ 2008ರವರೆಗೂ ಒಂದು ರೀತಿಯಲ್ಲಿ ಕುರುಚಲು ಗುಡ್ಡದ ರೀತಿಯಲ್ಲಿತ್ತು. ಗಿಡ-ಮರಗಳು ಇದ್ದವಾದರೂ ಸಮರ್ಪಕ ಸೌಲಭ್ಯಗಳಿರಲಿಲ್ಲ. ಜಗದೀಶ ಶೆಟ್ಟರ ಅವರು ಬೆಟ್ಟದ ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದರು. ನೃಪತುಂಗ ಬೆಟ್ಟಕ್ಕೆ ಸೌಲಭ್ಯ ನೀಡಲು ಮುಂದಾಗಿದ್ದರು. ಅರಣ್ಯ ಇಲಾಖೆ ಅಧೀನದಲ್ಲಿರುವ ಬೆಟ್ಟದ ಸೌಂದರ್ಯ ಹೆಚ್ಚಿಸಲು ವಿಶೇಷ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ನೃಪತುಂಗ ಬೆಟ್ಟವನ್ನು ಸುಂದರ ತಾಣವಾಗಿಸುವ ನಿಟ್ಟಿನಲ್ಲಿ ಯತ್ನ ಕೈಗೊಳ್ಳಲಾಗಿತ್ತು. ಇದಕ್ಕೆ ಹಲವರ ಸಹಕಾರ ದೊರೆತಿತ್ತು. ನೃಪತುಂಗ ಬೆಟ್ಟದಲ್ಲಿ ರಸ್ತೆ ನಿರ್ಮಾಣ, ವಿವಿಧ ಕಲಾಕೃತಿಗಳು, ವಾಯುವಿಹಾರಕ್ಕೆ ಪಾದಚಾರಿ ಮಾರ್ಗ, ವಿವಿಧ ಹೂಗಳು, ಔಷಧೀಯ ಸಸ್ಯಗಳು, ಯೋಗ ಮಾಡುವರಿಗೆ ಸ್ಥಳಾವಕಾಶ, ಕುಟುಂಬ ಸಮೇತರಾಗಿ ಪಿಕ್‌ನಿಕ್‌ಗೆ ತೆರಳಿದರೆ ವಿವಿಧ ಸೌಲಭ್ಯ, ಮಕ್ಕಳಿಗೆ ಆಟ, ಮನರಂಜನೆ ಸವಲತ್ತುಗಳು ಹೀಗೆ ನೃಪತುಂಗ ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ, ಮನೋಹಕ ಬಣ್ಣ ಬಣ್ಣದ ಹೂಗಳು, ಸಸ್ಯಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತಿವೆ.
ಬೆಟ್ಟಕ್ಕೆ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ನೂರಾರು ಜನರು ವಾಯುವಿಹಾರಕ್ಕೆಂದು ಹೋಗುತ್ತಾರೆ. ವಾರಾಂತ್ಯ ಹಾಗೂ ಸರಕಾರಿ ರಜೆ ದಿನಗಳಲ್ಲಿ ಮಕ್ಕಳು ಸೇರಿದಂತೆ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಿನದಾಗಿರುತ್ತದೆ. ಹುಬ್ಬಳ್ಳಿ ನೆಚ್ಚಿನ ಪಿಕ್‌ನಿಕ್‌, ವಾಯುವಿಹಾರಕ್ಕೆ ಇರುವ ನೆಚ್ಚಿನ ತಾಣಗಳಲ್ಲಿ ನೃಪತುಂಗ ಬೆಟ್ಟವೂ ಒಂದಾಗಿದೆ.

ನೃಪತುಂಗ ಬೆಟ್ಟವನ್ನು ವಾಯುವಿಹಾರಿಗಳ ನೆಚ್ಚಿನ ತಾಣವಾಗಿಸುವಲ್ಲಿ ಯತ್ನಿಸಿದ್ದ ಜಗದೀಶ ಶೆಟ್ಟರ, ಧ್ಯಾನಕ್ಕೆ ಉತ್ತಮ ತಾಣವೊಂದು ಅಗತ್ಯವಿದೆ ಎಂಬ ಜನರ ಮನದಾಳದ ಮಾತನ್ನರಿತು ನೃಪತುಂಗ ಬೆಟ್ಟದ ಸೆರಗಿನಲ್ಲಿ ಧ್ಯಾನಕೇಂದ್ರದ ನಿರ್ಮಾಣ ಚಿಂತನೆ ನಡೆದಿತ್ತು. ಧ್ಯಾನಕೇಂದ್ರ ಹೇಗಿರಬೇಕು ಎಂಬುದರ ಕುರಿತು ಖುದ್ದಾಗಿ ಧ್ಯಾನಕೇಂದ್ರ ಇರುವ ಕಡೆ ಭೇಟಿ ನೀಡಿ ಪರಿಶೀಲಿಸಿ, ತಜ್ಞರೊಂದಿಗೆ ಚರ್ಚಿಸಿ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲ ಹಾಗೂ ಏಕೈಕ ಸುವ್ಯವಸ್ಥಿತ ಪಿರಾಮಿಡ್‌ ಧ್ಯಾನ ಕೇಂದ್ರ ನಿರ್ಮಾಣಕ್ಕೆ ಜಗದೀಶ ಶೆಟ್ಟರ ಯತ್ನಿಸಿದ್ದರು. ಅವರ ಪ್ರಯತ್ನದ ಫಲವಾಗಿ ಪಿರಾಮಿಡ್‌ ಧ್ಯಾನ ಕೇಂದ್ರ ಕಂಗೊಳಿಸತೊಡಗಿದೆ. ಪಿರಾಮಿಡ್‌ ಧ್ಯಾನ ಕೇಂದ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಧ್ಯಾನ ಮಾಡುವುದಕ್ಕೆ ಸೂಕ್ತ ಜಾಗ ಇದಾಗಿದೆ.

ಇಂದಿರಾ ಗಾಜಿನಮನೆ ಹೆಸರಿಗೆ ಉದ್ಯಾನವನವಾಗಿತ್ತಾದರೂ, ಕನಿಷ್ಠ ನಿರ್ವಹಣೆಯೂ ಇಲ್ಲದೆ ಎಲ್ಲೆಂದರಲ್ಲಿ ಮುಳ್ಳು-ಕಂಟಿ ಬೆಳೆದು ನಿಂತಿತ್ತು. ಇದ್ದ ಸೌಲಭ್ಯಗಳು ಹಾಳಾಗಿದ್ದವು. ಹಂದಿ, ಬೀದಿ ನಾಯಿ, ಬಿಡಾಡಿ ದನಗಳು, ಹಲವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಈಗ ಇಂದಿರಾಗಾಜಿನ ಮನೆ ಆವರಣಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಪಾದಚಾರಿ ಮಾರ್ಗ, ಸಂಗೀತ ಕಾರಂಜಿ, ಸ್ಕೇಟಿಂಗ್‌ ಮೈದಾನ, ಪುಟಾಣಿ ರೈಲು ಹೀಗೆ ವಿವಿಧ ಸೌಲಭ್ಯಗಳೊಂದಿಗೆ ಉದ್ಯಾನವನಕ್ಕೆ ಮಹಾತ್ಮಗಾಂಧಿ ಉದ್ಯಾನವನ ಎಂದು ನಾಮಕರಣ ಮಾಡಲಾಗಿದ್ದು, ಮಹಾತ್ಮಗಾಂಧಿ ಉದ್ಯಾನವನ ಹಲವು ಸೌಲಭ್ಯಗಳಿಂದ ಕೂಡಿದ ಉದ್ಯಾನವನವಾಗಿ ಕಂಗೊಳಿಸುತ್ತಿದೆ. ನಿತ್ಯ ಸಾಕಷ್ಟು ಜನರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ. ಹುಬ್ಬಳ್ಳಿಯ ನೆಹರು ಮೈದಾನ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಪುನುರುಜ್ಜೀವನ, ಸೌಂದರ್ಯ ಹೆಚ್ಚಳ ಕಾರ್ಯ ಕೈಗೊಳ್ಳಲಾಗಿದ್ದು, ಇದರ ಹಿಂದೆ ಜಗದೀಶ ಶೆಟ್ಟರ ಅವರ ಶ್ರಮ ಸಾಕಷ್ಟಿದೆ. ಒಂದು ಕಾಲಕ್ಕೆ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರಿನ ಆಸರೆಯಾಗಿದ್ದ ಉಣಕಲ್ಲ ಕೆರೆ ನಿರ್ಲಕ್ಷé, ಉದಾಸೀನತೆಗೆ ಸಿಲುಕಿತ್ತಲ್ಲದೆ ಕೆರೆಗೆ ಚರಂಡಿ ನೀರು ಸೇರುವಿಕೆ, ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕೆರೆ ಮೌನರೋದನಕ್ಕೆ ಸಿಲುಕಿತ್ತು. ಉಣಕಲ್ಲ ಕೆರೆ ಸ್ವತ್ಛತೆ, ಚರಂಡಿ ನೀರು ಬಂದು ಸೇರುವುದಕ್ಕೆ ತಡೆ ಬೇಡಿಕೆ ಇತ್ತಾದರೂ ಅದಕ್ಕೆ ಸ್ಪಂದನೆ ಸಾಧ್ಯವಾಗಿರಲಿಲ್ಲ. ಜಗದೀಶ ಶೆಟ್ಟರ ಅವರು ವಿಶೇಷ ಕಾಳಜಿ ವಹಿಸಿ ಉಣಕಲ್ಲ ಕೆರೆಗೆ ಚರಂಡಿ ನೀರು ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದರು. ಕೆರೆಗೆ ಹೊಂದಿಕೊಂಡಿದ್ದ ಉದ್ಯಾನವನ ಅಭಿವೃದ್ಧಿ, ಕೆರೆಯಲ್ಲಿ ಬೋಟಿಂಗ್‌ ಸೌಲಭ್ಯಕ್ಕೆ ಚಾಲನೆ ನೀಡಿದ್ದರು.

ತೋಳನಕೆರೆ ಹೇಳಿಕೊಳ್ಳುವುದಕ್ಕೆ ಕೆರೆ ಎಂಬ ಹಣೆಪಟ್ಟಿ ಹೊತ್ತಿತ್ತಾದರೂ ಯಾವ ದೃಷ್ಟಿಯಿಂದ ನೋಡಿದರೂ ಅದು ಕೆರೆಯಾಗಿ ಉಳಿದಿರಲಿಲ್ಲ. ಒತ್ತುವರು, ಇಟ್ಟಂಗಿ ಬಟ್ಟಿಯ ರಾಡಿ, ಚರಂಡಿ ನೀರು ಹೀಗೆ ವಿವಿಧ ಅಧ್ವಾನಗಳ ತಾಣವಾಗಿತ್ತು. ತೋಳನಕೆರೆ ಅಭಿವೃದ್ಧಿಗೆ ಜಗದೀಶ ಶೆಟ್ಟರ ಅವರು ಕಂಕಣ ತೊಟ್ಟಿದ್ದರು. ಇದೀಗ ತೋಳನ ಕೆರೆ ಒಂದಿಷ್ಟು ಅಲ್ಪ ಸ್ವಲ್ಪ ಸಮಸ್ಯೆಗಳನ್ನು ಹೊರತು ಪಡಿಸಿದರೆ, ವಾಯುವಿಹಾರಿಗಳಿಗೆ, ಮಕ್ಕಳ ಆಟಕ್ಕೆ, ಪಿಕ್‌ನಿಕ್‌ಗೆ ತನ್ನದೇ ಕೊಡುಗೆ ನೀಡತೊಡಗಿದೆ.

ಸಿಮೆಂಟ್‌ ರಸ್ತೆಗಳಾಗಿ ರೂಪುಗೊಂಡ ರಸ್ತೆಗಳು
ರಸ್ತೆಗಳ ವಿಚಾರಕ್ಕೆ ಬಂದರೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಪ್ರಮುಖ ರಸ್ತೆಗಳು ದುರಸ್ತಿ ಭಾಗ್ಯ ಕಂಡಿವೆ. ಹಲವು ರಸ್ತೆಗಳು ಸಿಆರ್‌ಎಫ್‌ ನಿಧಿ ಅಡಿ ಸಿಮೆಂಟ್‌ ರಸ್ತೆಗಳಾಗಿ ರೂಪುಗೊಂಡಿವೆ. ಸರ್ವೋದಯ ವೃತ್ತದಿಂದ ಕೇಶ್ವಾಪುರದ ಶಾಂತಿನಗರವರೆಗೆ ಸಿಮೆಂಟ್‌ ರಸ್ತೆ ನಿರ್ಮಾಣಗೊಂಡಿದೆ. ವಿದ್ಯಾನಗರ, ಮಧುರಾ ಕಾಲೊನಿ, ಭವಾನಿನಗರ, ಮಯೂರ ಎಸ್ಟೇಟ್‌, ಜೆ.ಸಿ.ನಗರ ಹೀಗೆ ವಿವಿಧ ಕಡೆಯ ಕೆಲ ರಸ್ತೆಗಳು ಸಿಮೆಂಟ್‌ ರಸ್ತೆಗಳಾಗಿ ಪರಿವರ್ತನೆಗೊಂಡಿವೆ. ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರಿನ ರಸ್ತೆ ತೋಳನ ಕೆರೆವರೆಗೆ ಕೈಗೊಂಡ ಟೆಂಡರ್‌ಶ್ಯೂರ್‌ ರಸ್ತೆ ಉತ್ತರ ಕರ್ನಾಟಕದ ಮೊದಲ ಟೆಂಡರ್‌ಶ್ಯೂರ್‌ ರಸ್ತೆ ಎಂಬ ಖ್ಯಾತಿ ಪಡೆದಿದೆ. ಇನ್ನಷ್ಟು ಕಡೆಗಳಲ್ಲಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಸಿಮೆಂಟ್‌ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ.

ಮಾರುಕಟ್ಟೆಗಳಿಗೆ ಹೈಟೆಕ್‌ ಸ್ಪರ್ಶ
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಸಂತೆಗಳು ನಡೆಯುತ್ತಿವೆ. ಬಹುತೇಕ ಸಂತೆಗಳು ಬಯಲು ಜಾಗದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲವಾಗಿತ್ತು. ಮಳೆ-ಬಿಸಿಲಿನಲ್ಲಿಯೇ ವ್ಯಾಪಾರಿಗಳು ಕೊಚ್ಚೆಯಂತಹ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡಬೇಕಿತ್ತು. ವಾರಕ್ಕೊಮ್ಮೆ ತರಕಾರಿ-ಪಲ್ಯ ಖರೀದಿ ಮಾಡಬೇಕಲ್ಲಪ್ಪ ಎಂಬ ಕಾರಣಕ್ಕೆ ಜನರು ಮಳೆಗಾಲದಲ್ಲಿ ಕೊಚ್ಚೆಯಂತಹ ಸ್ಥಿತಿಯಲ್ಲೂ ಜನರು ಖರೀದಿಗೆ ಮುಂದಾಗುತ್ತಿದ್ದರು. ಇದೀಗ ಕೆಲ ಮಾರುಕಟ್ಟೆಗಳ ಚಿತ್ರಣವೇ ಬದಲಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯ ನೆರವು ಬಳಸಿಕೊಂಡು ಎರಡು ಮಾರುಕಟ್ಟೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಬೆಂಗೇರಿ ಸಂತೆ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೊಚ್ಚೆಯಂತಿದ್ದ, ವರಾಹಗಳ ತಾಣವಾಗಿದ್ದ ಜಾಗದಲ್ಲೀಗ ಉತ್ತಮ ಬಹುಪಯೋಗಿ ಮಾರುಕಟ್ಟೆ ತಲೆ ಎತ್ತಿದೆ. ಬಿಸಿಲು-ಮಳೆಯಲ್ಲಿ ಕುಳಿತುಕೊಳ್ಳುತ್ತಿದ್ದ ತರಕಾರಿ, ಹಣ್ಣು, ಪಲ್ಯ ಇನ್ನಿತರೆ ವಸ್ತುಗಳ ಮಾರಾಟಗಾರರಲ್ಲಿ ಅನೇಕರ ತಲೆ ಮೇಲೆ ನೆರಳಿನ ಆಸರೆ ದೊರಕಿದೆ. ಜನರಿಗೂ ಕೊಚ್ಚೆಯ ಸಮಸ್ಯೆ ತಪ್ಪಿದೆ.

ಉಣಕಲ್ಲನಲ್ಲಿ ಸಂತೆ ಸ್ಥಳವೂ ಭಿನ್ನವಾಗಿರಲಿಲ್ಲ. ವಾರಕ್ಕೊಮ್ಮೆ ನಡೆಯುವ ಸಂತೆ ಮಳೆಗಾಲದಲ್ಲಿ ಸಮಸ್ಯೆ ಹೇಳತೀರದಾಗಿತ್ತು. ಇದೀಗ ಅಲ್ಲಿಯೂ ಬೆಂಗೇರಿ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸಂತೆ ದಿನ ಸಂತೆಗೆ ಬಳಕೆ ಉಳಿದ ದಿನಗಳಲ್ಲಿ ಇತರೆ ಕಾರ್ಯಗಳಿಗೆ ಬಳಸಿಕೊಳ್ಳುವ ರೀತಿಯಲ್ಲಿ ಎರಡು ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಮಾರುಕಟ್ಟೆಗಳು ಇತರೆ ಕಡೆಗಳಿಗೆ ಮಾದರಿಯಾಗಿವೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆದರ್ಶ ನಗರದಲ್ಲಿ ಡಾ|ಡಿ.ಎಸ್‌.ಕರ್ಕಿ ಕನ್ನಡ ಭವನ ತಲೆ ಎತ್ತಿದ್ದರೆ, ಶಿಥಿಲಾವಸ್ಥೆಗೆ ತಲುಪಿದ್ದ ಸವಾಯಿ ಗಂಧರ್ವ ಸಭಾಭವನ ಆಧುನಿಕ ಸೌಲಭ್ಯಗಳ ಸ್ಪರ್ಶದೊಂದಿಗೆ ಕಂಗೊಳಿಸುತ್ತಿದೆ. ಹಲವು ಸಭೆ-ಸಮಾರಂಭ, ಸಂಗೀತ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಆಗುತ್ತಿದೆ. ಅದೇ ರೀತಿ ನ್ಯೂ ಕಾಟನ್‌ ಮಾರ್ಕೆಟ್‌ನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿದೆ.

82 ವಾರ್ಡ್‌ಗಳಿಗೂ 24×7 ನೀರು
ಪ್ರತಿ ಮನೆಗೂ 24/7 ನೀರು ಪೂರೈಕೆ ಮಾಡಬೇಕೆಂಬ ಚಿಂತನೆ ಅಡಿಯಲ್ಲಿ ವಿಶ್ವಬ್ಯಾಂಕ್‌ ನೆರವಿನ ಯೋಜನೆ ದೇಶದಲ್ಲಿಯೇ ಪ್ರಾಯೋಗಿಕ ಯೋಜನೆ ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೊಂಡಿತ್ತು. ಹುಬ್ಬಳ್ಳಿಯಲ್ಲಿ ನಾಲ್ಕು ಹಾಗೂ ಧಾರವಾಡದಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಆ ನಾಲ್ಕು ವಾರ್ಡ್‌ಗಳಲ್ಲಿ ಹೆಚ್ಚಿನವು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದದ್ದು ಗಮನಾರ್ಹವಾಗಿತ್ತು. ಮುಂದೆ 24/7 ನೀರು ಪೂರೈಕೆ ಯೋಜನೆ ಇತರೆ ವಾರ್ಡ್‌ಗಳಿಗೂ ವಿಸ್ತರಿಸಬೇಕೆಂಬ ಜನರ ಬೇಡಿಕೆಗೆ ಸ್ಪಂದನೆ ರೂಪದಲ್ಲಿ ಸರಕಾರ ಮೇಲೆ ಪ್ರಭಾವ ಬೀರಿ, ಒತ್ತಡ ತಂದು ಇತರೆ ವಾರ್ಡ್‌ಗಳಿಗೆ ಯೋಜನೆ ವಿಸ್ತರಣೆ ಅಲ್ಲದೆ, ಅವಳಿನಗರದ ಎಲ್ಲ 82 ವಾರ್ಡ್‌ಗಳಿಗೂ ಯೋಜನೆ ವಿಸ್ತರಣೆ. ಮಲಪ್ರಭಾ ಜಲಾಶಯದಿಂದ ಅವಳಿನಗರಕ್ಕೆ ನೀರಿನ ಕೊರತೆ ಆಗದಂತೆ ಮಲಪ್ರಭಾ ಜಲಾಶಯದಿಂದ ಸಗಟು ನೀರು ತರುವಲ್ಲಿಯೂ ಜಗದೀಶ ಶೆಟ್ಟರ ಅವರ ಪಾತ್ರ ಪ್ರಮುಖವಾಗಿದೆ.

ಹಲವು ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ
ನಾಲಾಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ನಾಲಾಗಳಲ್ಲಿನ ಹೂಳೆತ್ತುವುದು, ಎರಡು ಕಡೆ ಗೋಡೆಗಳ ನಿರ್ಮಾಣ, ನಾಲಾ ಬದಿಯ ಜಾಗ ಹಸಿರು ಕಾರಿಡಾರ್‌ ಆಗಿ ಪರಿವರ್ತಿಸುವ ಕಾರ್ಯ ನಡೆಯತ್ತಿದೆ. ವಾಣಿಜ್ಯ ನಗರಿ ಎಂಬ ಖ್ಯಾತಿಯ ಹುಬ್ಬಳ್ಳಿಗೆ ಇತ್ತೀಚೆಗಿನ ವರ್ಷಗಳವರೆಗೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಒಳಚರಂಡಿ ವ್ಯವಸ್ಥೆ ನಿರ್ಮಾಣ ನಿಟ್ಟಿನಲ್ಲಿ ಜಗದೀಶ ಶೆಟ್ಟರ ಅವರ ಪರಿಶ್ರಮ, ಪಾತ್ರವೂ ಪ್ರಮುಖವಾಗಿದೆ. ಪರಿಣಾಮ ನಗರದ ಹಲವು ಪ್ರದೇಶ ಇದೀಗ ಒಳಚರಂಡಿ ವ್ಯವಸ್ಥೆಗೆ ಒಳಪಡುವಂತಾಗಿದೆ.

ಮಾದರಿ ಕ್ಷೇತ್ರ ನಿಟ್ಟಿನಲ್ಲಿ ಪ್ರಯತ್ನ
ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ರಸ್ತೆಗಳ ಸುಧಾರಣೆ, ಎಲ್ಲ ವಾರ್ಡ್‌ಗಳಿಗೂ 24/7 ಕುಡಿಯುವ ನೀರು, ವಿವಿಧ ಮೂಲ ಸೌಲಭ್ಯಗಳನ್ನು ಮತ್ತಷ್ಟು ಅಳವಡಿಕೆ ಮೂಲಕ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾಗಿರುವ ಜಗದೀಶ ಶೆಟ್ಟರ ತಮ್ಮದೇ ಚಿಂತನೆ, ಯತ್ನದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ, ಜನರೊಂದಿಗೆ ನಿಕಟ ಸಂಪರ್ಕ, ಸರಳ ವ್ಯಕ್ತಿತ್ವಕ್ಕೆ ಕ್ಷೇತ್ರದ ಜನತೆ ಸತತವಾಗಿ ಆರು ಬಾರಿ ಆಯ್ಕೆ ಮಾಡಿರುವುದು ಅವರ ಮೇಲೆ ಕ್ಷೇತ್ರದ ಜನತೆ ಇರಿಸಿದ ವಿಶ್ವಾಸ, ನಂಬಿಕೆ, ಪ್ರೀತಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ.

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.