“ಶೆಟ್ಟರ ಬಗ್ಗೆ ಅಪಾರ ಗೌರವವಿದೆ, ಶೀಘ್ರವೇ ಭೇಟಿಯಾಗುವೆ: ಸಿಎಂ
Team Udayavani, Jul 30, 2021, 2:53 PM IST
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಹಿರಿಯರು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಈಗಾಗಲೇ ಅವರೊಂದಿಗೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ರಾತ್ರಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮುಗಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ ಜತೆ ಈಗಾಗಲೇ ಮಾತನಾಡಿದ್ದೇನೆ. ಇಂದು ಅವರ ನಿವಾಸಕ್ಕೆ ಹೋಗಬೇಕಾಗಿತ್ತು. ಆದರೆ ಉತ್ತರ ಕನ್ನಡ ನೆರೆಪೀಡಿತ ಪ್ರದೇಶಗಳ ಭೇಟಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರಿಂದ ಬರುವುದು ತಡವಾಯಿತು. ವಿಶೇಷ ವಿಮಾನ 9 ಗಂಟೆಗೆ ಬಿಡಬೇಕು ಎನ್ನುವ ತಾಂತ್ರಿಕ ಕಾರಣ ಇರುವುದರಿಂದ ಜಗದೀಶ ಶೆಟ್ಟರ ಅವರ ಭೇಟಿ ಸಾಧ್ಯವಾಗಿಲ್ಲ. ಅವರೊಂದಿಗೆ ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ. ಅವರ ಬಗ್ಗೆ ಅಪಾರ ಪೀÅತಿ-ವಿಶ್ವಾಸವಿದೆ. ಹೀಗಾಗಿ ಅಲ್ಲಿಯೇ ಮಾತನಾಡುವುದಾಗಿ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಭೂ ಕುಸಿತವಾಗಿದೆ, ಮಣ್ಣು ಕುಸಿದು ಆರು ಜನರು ಸಾವನ್ನಪ್ಪಿದ್ದಾರೆ. ರಸ್ತೆಗಳು ಕಡಿತವಾಗಿ, ಸೇತುವೆಗಳು ಬಿದ್ದಿವೆ. ಎಲ್ಲವನ್ನೂ ವೀಕ್ಷಣೆ ಮಾಡಿದ್ದೇನೆ. ತೋಟಗಾರಿಕೆ, ಕೃಷಿ ಬೆಳಗಳ ನಾಶದ ಕುರಿತು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಮಾಡಲು ಸೂಚಿಸಿದ್ದೇನೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ಬೇಕಾದ ಅಗತ್ಯ ಆರ್ಥಿಕ ನೆರವನ್ನು ಎನ್ಡಿಆರ್ಎಫ್ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆಯಿಂದ ತಲಾ 100 ಕೋಟಿ ರೂ. ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದರು. ಮಾಜಿ ಸಚಿವ ಶಿವರಾಮ ಹೆಬ್ಟಾರ, ವಿಧಾನಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ ಇನ್ನಿತರರಿದ್ದರು.