ರಾಜ್ಯದಲ್ಲಿ ವಾರಾಂತ್ಯ ಕರ್ಫೂ ಅಗತ್ಯವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Team Udayavani, Jan 18, 2022, 2:38 PM IST
ಹುಬ್ಬಳ್ಳಿ: ರಾಜ್ಯದಲ್ಲಿ ಆರಂಭಿಸಿರುವ ವಾರಾಂತ್ಯ ಕರ್ಫೂ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಾನು ಕೇಂದ್ರ ಸಚಿವನಾಗಿ ಈ ಮಾತನ್ನು ಹೇಳುತ್ತಿಲ್ಲ. ಬದಲಾಗಿ ಇಂತಹ ಸಮಯದಲ್ಲಿ ವಾರಾಂತ್ಯ ಕರ್ಫೂ ಅವಶ್ಯವಿಲ್ಲವಾಗಿದೆ ಎಂದರು.
ವಾರಾಂತ್ಯ ಕರ್ಫೂನಿಂದ ಸಾಕಷ್ಟು ಅರ್ಥಿಕ ಸಂಕಷ್ಟ ಸೃಷ್ಟಿಯಾಗಿದೆ. ಅರ್ಥಿಕ ವಹಿವಾಟು ನಡೆಯುವಂತಾಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಾರಾಂತ್ಯ ಕರ್ಫೂ ಸಡಿಲಿಕೆ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಪಂಚರಾಜ್ಯ ಚುನಾವಣೆ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಉತ್ತರ ಪ್ರದೇಶದಲ್ಲಿ, ಗೋವಾ, ಉತ್ತರಾಖಂಡ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಒಂದಿಷ್ಟು ಶಾಸಕರು ಚುನಾವಣೆ ಬಂದಾಗ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಇದು ಉತ್ತರ ಪ್ರದೇಶ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಇದನ್ನೂ ಓದಿ:ಶಿವಮೊಗ್ಗ ನಗರ ವ್ಯಾಪ್ತಿ ಶಾಲೆಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ
ಕೋವಿಡ್ ಸಮಯದಲ್ಲಿ ಚುನಾವಣೆ ಕುರಿತು ಪ್ರಶ್ನಿಸಿದಾಗ, ಈ ಕುರಿತು ನ್ಯಾಯಾಲಯ ಹಾಗೂ ಚುನಾವಣಾ ಆಯೋಗ ವಿವರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಂಡಿದೆ. ಜೊತೆಗೆ ಚುನಾವಣಾ ಆಯೋಗ ತುಂಬಾ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, 25 ಕ್ಕಿಂತ ಹೆಚ್ಚಿನ ಜನರನ್ನು ಸೇರಿಸಲು ಬಿಡುತ್ತಿಲ್ಲ ಎಂದು ಜೋಶಿ ಹೇಳಿದರು.
ಗಣರಾಜ್ಯೋತ್ಸವದ ಪೆರೇಡ್ ವೇಳೆ ಕೇರಳ ಟ್ಯಾಬ್ಲೋ ಕೇಂದ್ರ ತಿರಸ್ಕರಿಸಿದ್ದು ಶುದ್ಧ ಸುಳ್ಳು ಎಂದರು. ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರಗಳ ಕುರಿತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ ಅವರು, ಕೇರಳದಿಂದ ಕಳುಹಿಸಿದ್ದ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಕೇಂದ್ರ ವಿರೋಧಿಸಿಲ್ಲ, ಶಂಕರಾಚಾರ್ಯರ ಸ್ತಬ್ಧ ಚಿತ್ರ ಕಳಿಸಿ ಎಂದು ಕೇಂದ್ರ ಸರಕಾರ ಹೇಳಿಲ್ಲ. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರ ಮೆರವಣಿಗೆ ಅಲಿಖಿತ ನಿಯಮಾವಳಿ ರೂಪಿಸಲಾಗಿದೆ. ಪ್ರತಿ ಮೂರು ವರ್ಷಕೊಮ್ಮೆ ಈ ಕಾನೂನು ಅನ್ವಯವಾಗಲಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾವ ಕಮ್ಯುನಿಸ್ಟ್ ಪಾರ್ಟಿ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸಿತ್ತೋ, ಈಗ ಅವರೇ ನಾರಾಯಣ ಗುರುಗಳು ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರ ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದರು.