Ayodhya, ಶಬರಿಮಲೆಗೆ ಯಾತ್ರಾರ್ಥಿಗಳು ತೆರಳಲು ವಿಶೇಷ ರೈಲು : ಪ್ರಹ್ಲಾದ ಜೋಶಿ
ಬೆಂಗಳೂರು- ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಏಕೆ ರದ್ದು ಮಾಡಿದ್ದಾರೆಂದು ಗೊತ್ತಿಲ್ಲ!
Team Udayavani, Nov 24, 2023, 4:09 PM IST
ಹುಬ್ಬಳ್ಳಿ: ಅಯೋಧ್ಯೆ, ಶಬರಿಮಲೆಗೆ ಯಾತ್ರಾರ್ಥಿಗಳು ತೆರಳಲು ವಿಶೇಷ ರೈಲು ಕೋಚಿವೇಲು ವರೆಗೆ ಬಿಡುವ ಮೂಲಕ ಶಬರಿಮಲೆಗೆ ಸಂಪರ್ಕ ಕಲ್ಪಿಸಲಾಗುವುದು. ಅಯೋಧ್ಯೆಗೆ ಎಲ್ಲೆಲ್ಲಿಂದ ಬೇಡಿಕೆ ವ್ಯಕ್ತವಾಗುತ್ತದೆ ಅಲ್ಲಿಂದ ವಿಶೇಷ ರೈಲು ಬಿಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ” ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಸೂಪರ್ ಫಾಸ್ಟ್ ವಿಶೇಷ ಎಕ್ಸಪ್ರೆಸ್ ರೈಲ್ ಅನ್ನು ಏಕೆ ರದ್ದು ಮಾಡಿದ್ದಾರೆಂಬುದು ಗೊತ್ತಿಲ್ಲ. ಈ ಕುರಿತು ನೈಋತ್ಯ ರೈಲ್ವೆಯ ವಲಯ ಜಿಎಂ ಜೊತೆ ಮಾತನಾಡುತ್ತೇನೆ. ಪ್ರಯಾಣಿಕರ ಸ್ಪಂದನೆ ಚೆನ್ನಾಗಿದ್ದರೆ ಅದನ್ನು ಬಂದ್ ಮಾಡುವುದಕ್ಕೆ ಬಿಡುವುದಿಲ್ಲ” ಎಂದರು.
ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು
ಬೆಳಗಾವಿ ಮತ್ತು ಧಾರವಾಡ ನಡುವಿನ ರೈಲ್ವೆ ಲೈನ್ ಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದರೆ ತಕ್ಷಣ ಕೆಲಸ ಆರಂಭಿಸುತ್ತದೆ. ಅನುಮೋದನೆ ಪಡೆದ ಯಾವುದೇ ಯೋಜನೆಗೆ ಕೇಂದ್ರದಲ್ಲಿ ಹಣಕಾಸಿನ ಕೊರತೆ ಇಲ್ಲ. ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದಾಗಿದೆ. ಭೂಸ್ವಾಧೀನಕ್ಕೂ ದುಡ್ಡು ಕೊಡುವವರಿದ್ದೇವೆ. ರಾಜ್ಯ ಸರ್ಕಾರ ಯೋಜನೆಗೆ ಭೂಸ್ವಾಧೀನ ಮಾಡಿಕೊಟ್ಟರೆ ಬರುವ 3-4 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಬಹುದು ಎಂದು ಹೇಳಿದರು.