ಮೌಡ್ಯತೆ ಬೆನ್ನಟ್ಟಿದ ಮುಗ್ಧ ಹಳ್ಳಿಗರು
ಉಡ, ಮಂಗ, ಮೇಕೆಗಳ ಬಲಿಕರೆಮ್ಮ-ಭರಮಪ್ಪಗೆ ಕರಿಕಡಬು, ಮಂತ್ರವಾದಿಗಳಿಂದ ಪೈಶಾಚಿಕ ರಂಗೋಲಿ
Team Udayavani, May 25, 2021, 5:37 PM IST
ವರದಿ : ಬಸವರಾಜ ಹೊಂಗಲ್
ಧಾರವಾಡ: ತೊಲೆಗೆ ಜೋತು ಬೀಳುತ್ತಿರುವ ಈರುಳ್ಳಿ, ಊರ ಬಾಗಿಲಿನಲ್ಲಿ ಎತ್ತರದ ಕಂಬಕ್ಕೆ ನೇತಾಡುವ ತೆಂಗಿನಕಾಯಿ, ಸೀಮೆ ಕರಿಯಮ್ಮನೆದುರು ಕುರಿ ಬೇಟೆ, ಮನೆ ಜಗಲಿಯ ಮೇಲೆ ಬೇವಿನ ಸೊಪ್ಪು, ಹಿತ್ತ ಭರಮಪ್ಪನಿಗೆ ಕರಿಗಡಬು ಎಡೆ… ಕೊರೊನಾ ಹಾವಳಿ ಕಡಿಮೆಯಾಗಲು ಹಳ್ಳಿಗರು ಮತ್ತೆ ಮೂಢನಂಬಿಕೆಗಳ ಆಚರಣೆಗೆ ಮೊರೆ ಹೋಗಿದ್ದಾರೆ.
ಪ್ಲೇಗಮ್ಮನ ಥರಾ ಕೊರೊನಮ್ಮನನ್ನು ಶಾಂತಿ ಮಾಡಿದ್ದ ಮೂಢ ಜನರು ಇದೀಗ ಹಳ್ಳಿಗೆ ಹಳ್ಳಿಗಳೇ ಕೊರೊನಾ ಆವರಿಸಿಕೊಂಡು ಸಂಕಷ್ಟ ಪಡುವಾಗ ರೋಗ ನಿವಾರಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ಬದಲು ಹಳೆಯ ಕಾಲದ ಮಹಾಮಾರಿ ರೋಗಗಳಿಗೆ ಅಂದು ಮಾಡುತ್ತಿದ್ದ ಆಚರಣೆಗಳನ್ನೇ ಇಂದೂ ಕಿರಿಯರಿಗೆ ಹೇಳುತ್ತಿದ್ದು, ಕೆಲವು ಹಳ್ಳಿಗರು ಅವುಗಳನ್ನು ಚಾಚೂ ತಪ್ಪದೇ ಆಚರಿಸಲು ಮುಂದಾಗಿದ್ದಾರೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದ ಮಲಪ್ರಭಾ ಬಲದಂಡೆ ಕಾಲುವೆ ಬಳಿ ಹೊಲವೊಂದರಲ್ಲಿ ಕಪ್ಪೆಗಳನ್ನು ಹರಣ ಮಾಡಲಾಗಿದೆ. ಕಪ್ಪೆಗಳಿಗೆ ಪೂಜೆ ಸಲ್ಲಿಸಿ ಅವುಗಳನ್ನು ಕೊಂದು, ರಂಗೋಲಿ ಬಿಡಿಸಿ, ಬಾಳೆಹಣ್ಣು, ಹಸಿರು ಬಳೆ, ಹಸಿರು ಬಟ್ಟೆಯೊಂದನ್ನಿಟ್ಟು ಕೊರೊನಮ್ಮನನ್ನು ಶಾಂತ ಮಾಡಲಾಗಿದೆ.
ಕಳೆದ ಅಮಾವಾಸ್ಯೆ ರಾತ್ರಿ ಕಲಘಟಗಿ ತಾಲೂಕಿನ ಹುಲಕೊಪ್ಪದ ಬಳಿ ಅರಣ್ಯಕ್ಕೆ ಹೊಂದಿಕೊಂಡ ಹೊಲವೊಂದರಲ್ಲಿ ಮೇಕೆಯ ಮರಿಯೊಂದನ್ನು ಸೀಮೆ ದೇವರಿಗೆ ಬಲಿ ಅರ್ಪಿಸಲಾಗಿದೆ. ಹಸರಂಬಿ ಮತ್ತು ತುಮರಿಕೊಪ್ಪದ ಬಳಿಯೂ ಇಂತಹ ಆಚರಣೆಗಳು ನಡೆದಿವೆ.
ಹೆಣ ಹೊರುವುದಕ್ಕೂ ಸರತಿ
ಕೆಲ ಗ್ರಾಮಗಳಲ್ಲಿ ದಿನಕ್ಕೆ 5-6 ಜನ ಸಾಯುತ್ತಿದ್ದು, ಇಂತಹ ಗ್ರಾಮಗಳಲ್ಲಂತೂ ಜನರು ನಿಜಕ್ಕೂ ಆತಂಕಗೊಂಡಿದ್ದಾರೆ. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೆಣ ಹೊತ್ತುಕೊಂಡು ಹೋಗುವ ಸಿದಗಿ (ಹೆಣ ಕೂಡಿಸಿ ಸ್ಮಶಾನಕ್ಕೆ ಒಯ್ಯುವ ಮಂಟಪ)ಗೆ ಸರತಿ ಹಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಬಂದ್
ಮೊದಲ ಅಲೆ ವೇಳೆ ಭಯಭೀತರಾಗಿದ್ದ ಹಳ್ಳಿಗರಿಗೆ ಆ ಆಲೆ ತಟ್ಟಿರಲಿಲ್ಲ. ಇದೀಗ 2ನೇ ಅಲೆ ಹೊಡೆತಕ್ಕೆ ಹಳ್ಳಿಗರು ತೀವ್ರ ಸಂಕಷ್ಟದಲ್ಲಿದ್ದು, ಮೇ18ರವರೆಗೂ ಹಳ್ಳಿಗಳಲ್ಲಿ ಮದುವೆ, ಮುಂಜಿ, ನಾಮಕರಣ, ಜಾತ್ರೆ, ಉಡಿ ತುಂಬುವ ಕಾರ್ಯಗಳು ನಡೆದಿವೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವೇ ಒಪ್ಪಿಗೆ ಸೂಚಿಸಿತ್ತು. ಇದೇ ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ತೀವ್ರತೆ ಪಡೆಯಲು ಪ್ರಮುಖ ಕಾರಣ. ಅದೂ ಅಲ್ಲದೇ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ಗಳ ಬಳಕೆ ಗ್ರಾಮಾಂತರ ಪ್ರದೇಶದಲ್ಲಿ ಈಗಷ್ಟೇ ಪ್ರವೇಶ ಪಡೆದಿದೆ.
ಉಡದ ಬಲಿ
ಹಳ್ಳಿಗಳಲ್ಲಿ ಉಡ ಸಿಗುವುದೇ ಕಷ್ಟ. ಇದೀಗ ಅವಸಾನದ ಅಂಚಿಗೆ ಸೇರಿರುವ ಉಡ ಹುಡುಕಿ ಕೊಲ್ಲುವ ಕ್ರೂರ ಕೃತ್ಯಕ್ಕೆ ಧಾರವಾಡ ಜಿಲ್ಲೆಯ ಕಾಡಿನ ಮಧ್ಯದ ಊರುಗಳ ಕೆಲವಷ್ಟು ಮೂಢರು ಮುಂದಾಗಿದ್ದಾರೆ. ಇಂತಹ ಒಂದು ಘಟನೆ ಮೇ 11ರಂದು ಅಳ್ನಾವರ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ಅಷ್ಟೇಯಲ್ಲ, ಕೊಂದ ಉಡವನ್ನು ತಮ್ಮೂರಿನ ಸೀಮೆ ದೇವತೆಯರಿಗೆ ಹಸಿಮಾಂಸದ ರೂಪದಲ್ಲಿಯೇ ಎಡೆ ಹಿಡಿದು ಚೆಲ್ಲಿ ಹೋಗಿದ್ದಾರೆ. ಕೊರೊನಾಕ್ಕೂ ಕಾಡುಮೇಡು ಹೊಲಗದ್ದೆಯ ಮಣ್ಣಿನಲ್ಲಿ ಗೂಡು ಮಾಡಿಕೊಂಡು ಜೀವಿಸುವ ಉಡಕ್ಕೂ ಏನು ಸಂಬಂಧ? ಇಂತಹ ಮೂಢರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎನ್ನುತ್ತಿದ್ದಾರೆ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು.
ವಾರ ಬಿಟ್ಟ ಹಳ್ಳಿಗರು
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜೇಶನ್ಗೆ ಕೆಲವು ಹಳ್ಳಿಗರು ಮತ್ತು ಹಳ್ಳಿಯ ಹಿರಿಯರು ಇನ್ನೂ ಒತ್ತು ಕೊಡುತ್ತಿಲ್ಲ. ಆದರೆ ದನಕರುಗಳಿಗೆ, ಜನರಿಗೆ ಮಳೆಗಾಲದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಗ್ರಾಮದಲ್ಲಿ ಸೋಮವಾರ ಬಸವಣ್ಣ, ಮಂಗಳವಾರ ಹಾಗೂ ಶುಕ್ರವಾರ ಗ್ರಾಮ ದೇವತೆಯರ ಹೆಸರಿನಲ್ಲಿ ವಾರ ಬಿಡುವ ಪದ್ಧತಿಯನ್ನು ಜಿಲ್ಲೆಯ ಕೆಲವು ಹಳ್ಳಿಗರು ಆಚರಿಸುತ್ತಿದ್ದಾರೆ. ಆ ಇಡೀ ದಿನ ಮನೆಯಲ್ಲಿ ರೊಟ್ಟಿ ಮಾಡುವಂತಿಲ್ಲ. ಕರಿದ ಪದಾರ್ಥಗಳು ಮತ್ತು ಹುರಿದ ಪದಾರ್ಥಗಳನ್ನು ಸಿದ್ಧಪಡಿಸುವಂತಿಲ್ಲ. ಆದರೆ ಮುನ್ನಾ ದಿನವೇ ಇವುಗಳನ್ನು ಮಾಡಿಟ್ಟುಕೊಂಡು ತಿನ್ನಬಹುದು! ಇನ್ನೊಂದೆಡೆ ಹತ್ತಿಪ್ಪತ್ತು ಜನರು ಸೇರಿ ಗ್ರಾಮ ದೇವರ ಸಂಪ್ರೀತ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ