ಪಕ್ಷಿ ಸಂಕುಲ ಉಳಿವಿಗೆ ಆದ್ಯತೆ: ಶಾಸಕ ಭೀಮಾನಾಯ್ಕ
20 ಲಕ್ಷ ರೂ ಅನುದಾನದಲ್ಲಿ ಪಕ್ಷಿಧಾಮದ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ
Team Udayavani, Sep 7, 2019, 5:52 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಕಸಮುದ್ರ ಪಕ್ಷಿಧಾಮದ ಕೆರೆ ನೀರು ತುಂಬಿಸುವ ಯೋಜನೆಗೆ ಶಾಸಕ ಭೀಮಾನಾಯ್ಕ ಚಾಲನೆ ನೀಡಿದರು.
ಹಗರಿಬೊಮ್ಮನಹಳ್ಳಿ: ಸಣ್ಣ ನೀರಾವರಿ ಇಲಾಖೆಯ 20 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಅಂಕಸಮುದ್ರ ಪಕ್ಷಿಧಾಮದ ಕೆರೆ ತುಂಬಿಸಲು ಪಂಪ್ ಮತ್ತು ಮೋಟಾರ್ ಅಳವಡಿಸಿ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಶಾಸಕ ಭೀಮಾನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಹೈ.ಕ. ವ್ಯಾಪ್ತಿಯ ಮೊದಲ ಪಕ್ಷಿಬೇಧ ಸಂರಕ್ಷಿತ ಪ್ರದೇಶವಾಗಿದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. 2001ರಲ್ಲಿ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಜೀವತುಂಬುವ ಮೂಲಕ ಪಕ್ಷಿ ಸಂಕುಲ ಉಳಿವಿಗೆ ಕೈಜೋಡಿಸಲಾಗಿದೆ. ಕೆರೆಗೆ ಪ್ರತಿವರ್ಷ 174 ಪ್ರಬೇಧದ ಪಕ್ಷಿಗಳು ಸಂತಾನಕ್ಕಾಗಿಯೇ ಇಲ್ಲಿಗೆ ಆಗಮಿಸುವುದು ವಿಶೇಷವಾಗಿದೆ. ಜೊತೆಗೆ 75 ವಿದೇಶಗಳ ಪಕ್ಷಿಗಳು ಆಗಮಿಸುವುದು ಮತ್ತೂಂದು ವಿಶೇಷವಾಗಿದೆ. ಪಕ್ಷಿಗಳ ಸಂರಕ್ಷಣೆ ಜೊತೆಗೆ ಅಂತರ್ಜಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ. ಟೀಕಾಕಾರರಿಗೆ ಕೆಲಸದ ಮೂಲಕ ಸೂಕ್ತ ಉತ್ತರ ಕೊಡುತ್ತೇನೆ. ಕ್ಷೇತ್ರದ 12 ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.
ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿ, ಶಾಸಕರು ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಅತ್ಯಂತ ಸಂತೋಷಕರ. ಪಕ್ಷಿ ಸಂಕುಲ ಸಂರಕ್ಷಿಸುವ ಹಿನ್ನೆಲೆಯಲ್ಲಿ ಅಂಕಸಮುದ್ರ ಪಕ್ಷಿಧಾಮಕ್ಕೆ ನೀರು ತುಂಬಿಸಲು ಬೃಹತ್ ಮೋಟಾರ್ ಪಂಪು ಅಳವಡಿಸಿರುವುದು ನೈಜ ಕಾಳಜಿಯಾಗಿದೆ. ಪಕ್ಷಿದಾಮದ ಅಭಿವೃದ್ಧಿ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಹನಸಿ ಹಾಲಶಂಕರ ಸ್ವಾಮೀಜಿ, ಮುಖಂಡ ರವೀಂದ್ರಗೌಡ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಸದಸ್ಯ ಹುಡೇದ ಗುರುಬಸವರಾಜ, ಮುಟುಗನಹಳ್ಳಿ ಕೊಟ್ರೇಶ, ಕನ್ನಿಹಳ್ಳಿ ಚಂದ್ರಶೇಖರ, ಹಾಲ್ದಾಳ್ ವಿಜಯಕುಮಾರ, ಕೇಶವರೆಡ್ಡಿ, ಚಂದ್ರಶೇಖರ ರೆಡ್ಡಿ, ಕಲ್ಲನಗೌಡ, ಶಿವಕುಮಾರ, ಉಮೇಶ ಇತರರಿದ್ದರು. ಗ್ರಾಮದ ಯುವಬ್ರಿಗೇಡ್ ಯುವಕರು ಕೆರೆ ತುಂಬಿಸಲು ಶಾಸಕರು ತೋರಿದ ಕಾಳಜಿಗೆ ಮೆಚ್ಚಿ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.