ಚನ್ನರಾಯಪಟ್ಟಣ: ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ದುರಂತ ಅಂತ್ಯ?
ಬ್ಯಾಂಕ್ ಕೆಲಸ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ
Team Udayavani, Dec 23, 2022, 9:05 AM IST
ಚನ್ನರಾಯಪಟ್ಟಣ: ಮದುವೆಯಾಗಿ ವರ್ಷ ತುಂಬುವುದರ ಒಳಗೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಮೂರು ತಿಂಗಳ ಗರ್ಭಿಣಿ ಕಾವ್ಯ(20) ಮೃತ ನವ ವಿವಾಹಿತೆ. ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೊಬಳಿ ಸಮುದ್ರ ವಳ್ಳಿ ಗ್ರಾಮ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೃತಳ ತಂದೆ ಪಿ.ಸಿ.ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಹಳ್ಳಿಮೈಸೂರು ಸಮೀಪದ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬುವವರಿಗೆ ಎಂಟು ತಿಂಗಳ ಹಿಂದೆ ವಿವಾಹ ಮಾಡಿ ಕೊಡಲಾಗಿತ್ತು. ಮಗಳು ವಾರದ ಹಿಂದಷ್ಟೇ ಮನೆಯವರಿಂದ ವರದಕ್ಷಿಣೆ ಕಿರುಕುಳ ನೀಡುತ್ತಿ ದ್ದಾರೆ ಎಂದು ಅಳಲು ತೋಡಿಕೊಂಡಿದ್ದಳು ಎಂದು ಆರೋಪಿಸಿದ್ದಾರೆ.
ಮಗಳ ಮದುವೆಗೆ 20 ಲಕ್ಷ ವೆಚ್ಚ: ಮದುವೆ ವೇಳೆ ಸುಮಂತ್ಗೆ 250 ಗ್ರಾಂ ಚಿನ್ನ ನೀಡಿ, 20 ಲಕ್ಷ ರೂ. ಖರ್ಚು ಮಾಡಿ ಅದ್ಧೂರಿಯಗಿ ಮದುವೆ ಮಾಡಿದೆವು. ಅವರು ಹೇಳಿದ ಕಲ್ಯಾಣ ಮಂಟಪ, ಕೇಳಿದ ಹಾಗೆ ಅಡುಗೆ ಮಾಡಿಸಿ ಯಾವುದೇ ಕೊರತೆ ಬಾರದಂತೆ ವಿವಾಹ ಮಾಡಿಕೊಟ್ಟೆ. ಅದರೆ ಇಂದು ಅಳಿಯ ನನ್ನ ಮಗಳ ಜೀವ ತೆಗೆದಿದ್ದಾನೆ ಎಂದು ಕಂಬನಿ ಮಿಡಿದರು.
ಉದ್ಯೋಗದ ಬಗ್ಗೆ ಸುಳ್ಳು: ಸುಮಂತ್ಗೆ ತಂದೆ ಇಲ್ಲದ ಕಾರಣ ತಾಯಿ ಮೀನಾಕ್ಷಿ ಜತೆ ವಾಸವಿದ್ದ. ಮದುವೆಯಾದ ಎರಡು ತಿಂಗಳು ದಂಪತಿಗಳಿಬ್ಬರು ಅನ್ಯೂನವಾಗಿದ್ದರು. ನಂತರ ಅತ್ತೆ ಮೀನಾಕ್ಷಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಜತೆಗೆ ಅಳಿಯ ಬ್ಯಾಂಕ್ ಕೆಲಸ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ. ಇದು ಮನಸ್ತಾಪಕ್ಕೆ ಕಾರಣವಾಗಿತ್ತು ಎಂದರು.
ಅಕ್ಕ, ಭಾವನ ಮೇಲೂ ಕಿರುಕುಳ ಆರೋಪ: ಸುಮಂತ್ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಕೂಡ ಕಿರುಕುಳ ನೀಡುತ್ತಿದ್ದರು. ಮಗಳು ನಮಗೆ ಪೋನ್ ಮಾಡಿದರೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಕಾವ್ಯ ನಿನ್ನ ಜೊತೆ ಮಾತನಾಡಬೇಕು ಎಂದು ನನ್ನ ಮಗನಿಗೆ ಮೆಸೇಜ್ ಮಾಡಿದ್ದಾಳೆ ಎಂದರು.
ಊರಿಗೆಂದು ಹೇಳಿ ಕೆರೆ ಬಳಿ ಬಂದಿದ್ದೇಕೆ?: ಅಕ್ಕ ಸುಶ್ಮಿತಾಳ ಹುಟ್ಟುಹಬ್ಬಕ್ಕೆ ಭಾನು ವಾರ ಬೆಂಗಳೂರಿಗೆ ಹೋಗಿ ಮಂಗಳವಾರ ಊರಿಗೆ ರೈಲಿನಲ್ಲಿ ಹೊರಟಿ ದ್ದರು. ಈ ಮಧ್ಯೆ ಚನ್ನರಾಯಟಪ್ಟಣ ತಾಲೂಕಿನ ಸಮುದ್ರವಳ್ಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಕೆರೆ ಬಳಿಗೆ ಬಂದು ಪತ್ನಿಯನ್ನು ಇಲ್ಲೇ ಇರು ಎಂದು ಹೇಳಿ ಪತಿ ಮರೆಯಾಗಿದ್ದಾನೆ. ಇದಾದ ಬಳಿಕ ಕಾವ್ಯ ನಾಪತ್ತೆ ಯಾಗಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮೇಲೆ ಸತ್ಯ ಹೊರಗೆ ಬಂದಿದೆ ಎಂದರು.
ಕೆರೆಯಲ್ಲಿ ಕಾವ್ಯ ಶವ ಪತ್ತೆ: ಮೊಬೈಲ್ ಲೊಕೇಷನ್ ಮೂಲಕ ಪೊಲೀಸರು ಕೆರೆಯ ಬಳಿ ಆಗಮಿಸಿ ದಡದಲ್ಲಿ 1760 ರೂ. ಹಣ. ಮೊಬೈಲ್ ಹಾಗೂ ಚಪ್ಪಲಿ ಕಂಡು ಬಂದಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ಕಾವ್ಯ ಶವ ಪತ್ತೆಯಾಗಿದೆ. ಸುಮಂತ್ ತನ್ನ ಮಗಳನ್ನು ಹೊಡೆದುಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಇದಕ್ಕೆ ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಸಾಕ್ಷಿ ಎಂದು ಆರೋಪಿಸಿದರು. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತ ಠಾಣೆಯಲ್ಲಿ ದೂರು ದಾಖಲಾಗಿದೆ.