ಯಶಸ್ವಿ ಕಾರ್ಯಾಚರಣೆ ನಂತರ ಸಾಕಾನೆಗಳಿಗೆ ಬೀಳ್ಕೊಡುಗೆ
Team Udayavani, Jan 29, 2021, 7:44 PM IST
ಆಲೂರು: ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಸುವಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಾಕಾನೆಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
ಉಭಯ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ತರುವ ಸಲುವಾಗಿ ಮೂರು ಹೆಣ್ಣಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಹಾಗೂ ಒಂದು ಪುಂಡಾನೆ ಹಿಡಿದು ಸ್ಥಳಾಂತರ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಅರಣ್ಯ ಇಲಾಖೆ ಕಾರ್ಯಾ ಚರಣೆಗಾಗಿ ಮತ್ತಿಗೊಡು ಆನೆ ಶಿಬಿರದಿಂದ ಅಭಿಮನ್ಯು,ಗಣೇಶ್, ಗೋಪಾಲಕೃಷ್ಣ, ದುಬಾರೆ ಆನೆ ಶಿಬಿರದಿಂದ ಸುಗ್ರೀವ, ಧನಂಜಯ, ಕೃಷ್ಣ, ಸಾಕಾನೆಗಳನ್ನು ಬಳಸಿಕೊಂಡಿತ್ತು.
ಜನವರಿ 21ರಂದು ಆಲೂರು ತಾಲೂಕಿನ ದೊಡ್ಡಬೆಟ್ಟ ಹಾಗೂ ಚಿಕ್ಕಬೆಟ್ಟಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತ್ತಾದರೂ, ದಟ್ಟವಾದ ಕಾಡಿನೊಳಗೆ ಕಾಡಾನೆಗಳು ಸೇರಿಸಿಕೊಂಡಿದ್ದರಿಂದ ಅರವಳಿಕೆ ನೀಡಲು ಅಡ್ಡಿಯಾಗಿತ್ತು. ಹೀಗಾಗಿ ಮೊದಲ ದಿನ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. 22 ರಂದು ಬೆಳಗ್ಗೆ 6.30ಕ್ಕೆ ಕಾರ್ಯಾಚರಣೆ ಮಂದುವರಿದು, ಆಲೂರು ತಾಲೂಕಿನ ಬೊಸ್ಮನಹಳ್ಳಿ ಸಮೀಪದ ಹಳ್ಳಿಯೂರು ಬಳಿ ಕಾರ್ಯಾಚರಣೆ ನಡೆಸಿ ಒಂದು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಯಿತು.
ಇದನ್ನೂ ಓದಿ:ಮತದಾರರೇ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ
23 ರಂದು ಸಕಲೇಶಪುರ ತಾಲೂಕಿನ ಇಬ್ಬಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇವೆ ಎನ್ನುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿ, ಮತ್ತೂಂದು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿ ಸಲಾಯಿತು. ಮೂರು ನಾಲ್ಕು ದಿನ ಕಾರ್ಯಾಚರಣೆಯಲ್ಲಿ ತೊಡಗಿಸಿ ಕೊಂಡಿದ್ದ ಸಾಕಾನೆಗಳು ದಣಿದಿದ್ದರಿಂದ 24 ಹಾಗೂ 25ರಂದು ಬಿಡುವು ನೀಡಲಾಯಿತು.
ನಂತರ 26 ರಂದು ಬೆಳಗ್ಗೆ ಎಂದಿನಂತೆ 6.30ಕ್ಕೆ ಪುಂಡಾನೆ ಗಾಗಿ ಹುಡುಕಾಟ ನಡೆಸಿ ಸಕಲೇಶಪುರ ತಾಲೂಕಿನ ಮತ್ತೂರು ಅರಣ್ಯ ಪ್ರದೇಶದಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿ ಪುಂಡನೆ ಸೆರೆ ಹಿಡಿದು ಮಹಾದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. 27 ರಂದು ಸಕಲೇಶಪುರ, ಬೇಲೂರು ತಾಲೂಕಿನ ಅಂಚಿನ ಸುಂಡೆಕೆರೆ ಗ್ರಾಮದ ಕಫಿ ತೋಟದಲ್ಲಿ ಒಂದು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿಜಯೋತ್ಸವ ಆಚರಿಸಿದರು.