ಸರ್ಕಾರಕ್ಕೆ ಪರಿಹಾರ ಬೇಕಿದೆ: ಮಾಧುಸ್ವಾಮಿ
Team Udayavani, May 16, 2020, 7:06 AM IST
ಹಾಸನ: ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯ ಸರ್ಕಾರವೇ ಪರಿಹಾರ ಕೇಳಬೇಕಾದ ಪರಿಸ್ಥಿತಿ ಬರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಮುಖ್ಯಮಂತ್ರಿಯವರು 1610 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಸಚಿವರು, ಶಾಸಕರ ಒತ್ತಾಯಕ್ಕೆ ಮಣಿದು ಗುರುವಾರ ಮತ್ತೆ 162 ಕೋಟಿ ರೂ. ಪರಿಹಾರದ ಕ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇನ್ನೂ ಹೆಚ್ಚು ಪರಿಹಾರ ಕೇಳಿದರೆ ರಾಜ್ಯ ಸರ್ಕಾರಕ್ಕೇ ಯಾರಾದರೂ ಪರಿಹಾರ ಕೊಡಬೇಕಾ ದೀತು ಎಂದು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದರು. ರೈತರ ಸಾಲ ಮನ್ನಾ ಅಥವಾ ಹೆಚ್ಚಿನ ಪರಿಹಾರ ನೀಡಲು ಸಾಧ್ಯವೇ ಇಲ್ಲ.
ಲಾಕ್ಡೌನ್ ಜಾರಿ ನಂತರ ಕೃಷಿ ಚಟುವಟಕೆಗಳನ್ನು ಸರ್ಕಾರ ನಿಬಂಧಿಸಿಲ್ಲ. ಹೀಗಾಗಿ ರೈತರಿಗೆ ಯಾವುದೇ ತೊಂದರೆ ಆಗಿಲ್ಲ. ಹಣ್ಣು ಮತ್ತು ತರಕಾರಿ ಮಾರಾಟವಾಗದೆ ನಷ್ಟವುಂಟಾಗಿದೆ ಎಂಬ ಕಾರಣಕ್ಕೆ ಈಗ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೂ ಪರಿಹಾರ ಘೋಷಣೆ ಮಾಡಲಾಗಿದೆ ಎಂದ ಅವರು, ರೈತರೂ ಈವರ್ಷ ಕೃಷಿ ಸಾಲ ಪಡೆದ ನಂತರ ಕೃಷಿ ಚಟುವಟಿಕೆ ಆರಂಭಿಸಿಯೇ ಇಲ್ಲ.
ಮತ್ತೆ ಸಾಲ ಮನ್ನಾ ಹೇಗೆ ಸಾಧ್ಯ ಎಂದರು. ಅಲ್ಲದೇ, ಎಚ್.ಡಿ.ರೇವಣ್ಣ ಅವರಿಗಿಂತಲೂ ನಾನು ಒಳ್ಳೆಯ ರೈತ. ಹೀಗಾಗಿ ನನಗೆ ರೈತರ ಸಮಸ್ಯೆ ಗೊತ್ತಿದೆ ಎಂದು ಹೇಳಿದರು. ಎಪಿಎಂಸಿ ಕಾಯ್ದೆ ತಿದ್ದುಪರಿ ನಮ್ಮ ದೃಷ್ಟಿಯಲ್ಲಿ ಸರಿಯಿದೆ. ಒಂದು ವ್ಯವಸ್ಥೆ ಬದಲಾವಣೆ ಸಂದರ್ಭದಲ್ಲಿ ವಿರೋಧಗಳು ಬರುವುದು ಸಹಜ. ಅದಕ್ಕೇನೂ ಮಾಡಲಾಗಲ್ಲ ಎಂದು ಜೆಡಿಎಸ್ನವರ ವಿರೋಧದ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದರು.