ರಣಘಟ್ಟ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ
Team Udayavani, Jan 6, 2020, 1:44 PM IST
ಹಳೆಬೀಡು: ರಣಘಟ್ಟ ನೀರಾವರಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. 2018-19ರಲ್ಲಿ ವಿಧಾನಸಭೆ ಅಧಿವೇಶನದ ಬಜೆಟ್ನಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಬಯಲು ರಂಗ ಮಂದಿರದಲ್ಲಿ ಪುಷ್ಪಗಿರಿ ರಾಷ್ಟ್ರೀಯ ಉತ್ಸವ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ಲೋಕಾರ್ಪಣೆ ಸಮಾರಂಭ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ ಸಾವಿರ ಕೋಟಿ ರೂ. ಯೋಜನೆಗಳನ್ನು ರಾಜ್ಯ ಬಿಜೆಪಿಸರ್ಕಾರ ತಡೆ ಹಿಡಿದಿದೆ ಎಂದು ಆಪಾದಿಸಿದರು. 2 ಸಾವಿರ ರೂ. ಕೊಟ್ಟ ಮೋದಿ ನೆನಪಿಸಿ ಕೊಳ್ಳುವ ಜನ ಎರಡು ಲಕ್ಷ ಸಾಲ ಮನ್ನಾ ಮಾಡಿದ ನನ್ನನ್ನು ನೆನಪಿಸಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದರು. ಪುಷ್ಪಗಿರಿ ಮಠದ ಶ್ರೀಗಳು ಆರಂಭಿಸಿರುವ ಗ್ರಾಮೀಣಾಭಿವೃದ್ಧಿ ಯೋಜನೆ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಅತಿ ವೃಷ್ಟಿ ಸಂತ್ರಸ್ತರಿಗೆ ಸ್ಪಂದಿಸದ ಕೇಂದ್ರ: ಪ್ರವಾಹ ದಿಂದ ರಾಜ್ಯದ 14 ಜಿಲ್ಲೆಗಳ ಕುಟುಂಬಗಳು ಮನೆ ಕಳೆದುಕೊಂಡಿವೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸದೇ ಕಡೆಗಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಭವನದಲ್ಲಿದ್ದ ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ನೀಡದೇ ಇರುವುದು ರಾಜ್ಯದ ದುರ್ಗತಿಗೆ ಸಾಕ್ಷಿಯಾಗಿದೆ ಎಂದರು.
ರಾಜ್ಯಕ್ಕೆ ಕೇಂದ್ರದ ಅನುದಾನ ದೊರೆತಿಲ್ಲ: ಕರ್ನಾಟಕ್ಕೆ ನೀಡಬೇಕಾಗಿದ್ದ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಬೇಲೂರು, ಹಳೇಬೀಡು, ಅರಸೀಕೆರೆ ಭಾಗದಲ್ಲಿ ನೀರಿನ ಸಮಸ್ಯೆಯಿದೆ. ದೇವೇಗೌಡರ ದೂರದೃಷ್ಟಿಯಿಂದ ಯಗಚಿ ಜಲಾಶಯ ಕಟ್ಟಿದ್ದರಿಂದ ಈ ಭಾಗದ ಜನರು ನೀರು ಪಡೆಯುತ್ತಿದ್ದಾರೆ ಎಂದರು.
ರಣಘಟ್ಟ ಯೋಜನೆಗೆ ಹಣ ಬಿಡುಗಡೆ ಮಾಡಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಬೇಲೂರು ತಾಲೂಕು ಹಳೆಬೀಡು ಮತ್ತು ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ನಾಲಾ ಯೋಜನೆಗೆ ಮಂಜೂರಾಗಿರುವ 150 ಕೊಟಿ ರೂ.ಗಳನ್ನು ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಅರಸಿಕೇರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಡಾ.ವೀರೇಂದ್ರಹೆಗ್ಗಡೆಯವರ ಯೋಜನೆಯಂತೆ ಪುಷ್ಪಗಿರಿ ಸ್ವಾಮಿಗಳು ಸಾಗುತ್ತಿರುವುದು ಶ್ರೀಗಳ ಆಶಾದಾಯಕ ಹೆಜ್ಜೆ ಶ್ಲಾಘನೀಯ ಎಂದರು. ಬೇಲೂರು ಹಾಗೂ ಅರಸೀಕೇರೆ ಭಾಗದಲ್ಲಿನ ನೀರಿನ ಅವಶ್ಯಕತೆ ಬಗ್ಗೆ ಅಲೋಚಿಸಿ ನೀರಿಗಾಗಿ ಪ್ರತಿ ಭಟಿಸುವುದಕ್ಕೆ ಕೈ ಜೋಡಿಸಿದ್ದು ಶ್ರೀಗಳು.
ನೇತ್ರಾವತಿ ತಿರುವು ಎಂಬ ಯೋಜನೆಯಲ್ಲಿ ಸಮುದ್ರ ಸೇರುವ ನೀರನ್ನು ಈ ಭಾಗಕ್ಕೆ ತಿರುವುದಕ್ಕೆ ಯೋಜನೆ ಸರ್ವೆಗೆ ಅದೇಶಿಸಿದ್ದು ಕುಮಾರಸ್ವಾಮಿಯವರು. ಇದೇ ಇಂದು ಎತ್ತಿನಹೊಳೆ ಯೋಜನೆಯಾಗಿದೆ ಎಂದರು. ರಣಘಟ್ಟ ಯೋಜನೆ ನೀರಾವರಿಗಾಗಿ ನಾವೆಲ್ಲಾ ಹೋರಾಟ ಮಾಡಿದ್ದರಿಂದ ಹಣ ನೀಡಲಾಯಿತು. ಆದರೆ ರಾಜಕೀಯ ದೊಂಬರಾಟದಲ್ಲಿ ಕುಮಾರ ಸ್ವಾಮಿಯವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಯೋಜನೆ ಮಂದುವರಿಸುವುದಾಗಿ ಹೇಳಿರುವುದು ಆಶಾದಾಯಕ ಎಂದರು.
ಜೆಡಿಎಸ್ ಬಿಡುವುದಿಲ್ಲ: ಶಾಸಕ ಲಿಂಗೇಶ್ ಮಾತ ನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಶ್ರೀಮಠಕ್ಕೆ ಕಳೆದ ವರ್ಷ 2 ಕೂಟಿ ರೂ. ಹಾಗೂ ತಾಲೂಕಿನ ಅಭಿವೃದ್ಧಿಗೆ 620 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ ಎಂದರು. ಯಾರು ಎಷ್ಟೇ ಒತ್ತಾಯ ಮಾಡಿದರೂ ಹಣದ ಆಸೆಗೆ ಬಿದ್ದು ಪಕ್ಷ ಬಿಡುವುದಿಲ್ಲ ಎಂದರು.
ಲಿಂಗಾಯತ – ಒಕ್ಕಲಿಗ ಎಂದು ಪಂಗಡಗಳನ್ನಾಗಿ ಮಾಡಿ ಸಮಾಜ ಒಡೆಯುವ ಕೆಲಸವಾಗುತ್ತಿದೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದರು. 2 ತಿಂಗಳ ವೇತನವನ್ನು ಪುಷ್ಪಗಿರಿ ಗ್ರಾಮೀಣಾಭಿ ವೃದ್ಧಿ ಯೋಜನೆಗೆ ನೀಡುವುದಾಗಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಭರವಸೆ ನೀಡಿದರು. ಶ್ರೀಮಠದ ಶ್ರೀಗಳ ದಶಮಾನೋತ್ಸವದ ಕಿರಯೊತ್ತಿಗೆ ಬಿಡುಗಡೆ ಮಾಡಲಾಯಿತು. ಶ್ರೀ ಸೋಮಶೇಖರ ಸ್ವಾಮೀಜಿಯವರಿಗೆ ರುದ್ರಾಕ್ಷಿ ಕಿರೀಟ ಧಾರಣೆ ಯೊಂದಿಗೆ ಭಕ್ತಾದಿಗಳು ಪಾದಪೂಜೆ ನೆರವೇರಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಶಾಸಕ ಕುಮಾರಸ್ವಾಮಿ, ಶಾಸಕ ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ಎಸ್. ಎಲ್ ಬೊಜೇಗೌಡ, ತಾಪಂ ಅಧ್ಯಕ್ಷ ರಂಗೇಗೌಡ, ಜಿಪಂ ಸದಸ್ಯೆ ಲತಾ, ರತ್ನಮ್ಮ ಐಸಾಮಿಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಸಂಗೀತ ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣ ಶರ್ಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಗ್ರಾನೈಟ್ ರಾಜ್ಶೇಖರ್ ಇನ್ನಿತರರಿದ್ದರು.