ಗೃಹ ಬಳಕೆ ವಸ್ತು ಮಾರಾಟ
Team Udayavani, Apr 23, 2020, 2:34 PM IST
ಸಾಂದರ್ಭಿಕ ಚಿತ್ರ
ಚನ್ನರಾಯಪಟ್ಟಣ: ಕೋವಿಡ್ ದಿಂದ ಸೊಂಕು ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ತಾಲೂಕಿನಲ್ಲಿ ರುವ ಸುಮಾರು 38 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಚೋಳೇನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ನಂತರ ಪಟ್ಟಣದಲ್ಲಿನ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ನ ಶಾಖಾ ಕಚೇರಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒಗಳ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವ ಜನಿಕರಿಗೆ ಪಡಿತರ ವಿತರಿಸುತ್ತಿರುವ ಎಲ್ಲಾ ಸಹಕಾರ ಸಂಘಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಬೇಳೆ ಕಾಳು, ಅಡುಗೆ ಎಣ್ಣೆ, ಉಪ್ಪು, ಕಡ್ಲೆಹಿಟ್ಟು, ಕಾಳುಗಳು ಹೀಗೆ ದಿನ ನಿತ್ಯ ಉಪಯೋಗಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಮಾರಾಟ ಮಾಡಲು ಮುಂದಾಗಬೇಕು ಎಂದು ಆದೇಶಿಸಿದರು.
ಸಗಟು ವ್ಯಾಪಾರಸ್ಥರೊಂದಿಗೆ ಮಾತು ಕತೆ ನಡೆಸಿದ್ದು, ಪ್ರತಿ ಸಹಕಾರ ಸಂಘಕ್ಕೂ ಆಹಾರ ಸಾಮಗ್ರಿ ಸರಬರಾಜು ಮಾಡಲಿದ್ದಾರೆ. ಸೊಸೈಟಿಯವರು ಲಾಭದ ಉದ್ದೇಶವಿಟ್ಟುಕೊಳ್ಳದೇ ಗ್ರಾಮಸ್ಥರ ಹಿತದೃಷ್ಟಿಯಿಂದ ವ್ಯಾಪಾರ ಮಾಡಬೇಕು. ಅಗತ್ಯ ವಸ್ತುಗಳ ಖರೀದಿ ಸಂದರ್ಭ ದಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸ ಬೇಕು ಎಂದು ಹೇಳಿದರು.
ತಹಶೀಲ್ದಾರ್ ಜೆ.ಬಿ.ಮಾರುತಿ, ಮೇಲ್ವಿಚಾರಕ ಎಸ್.ಕೆ.ಅಭಿಲಾಷ್, ಎಸ್.ಆರ್.ಮಧು ಮೊದಲಾದವರು ಉಪಸ್ಥಿತರಿದ್ದರು.