ಶಿರಾಡಿ ಘಾಟ್ : 6 ಚಕ್ರವಾಹನಗಳು, ಲಘುವಾಹನಗಳ ಸಂಚಾರಕ್ಕೆ ಅವಕಾಶ
ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಏಕಮುಖ ಸಂಚಾರ
Team Udayavani, Jul 21, 2022, 7:36 PM IST
ಸಕಲೇಶಪುರ: ದೋಣಿಗಾಲ್ ಸಮೀಪ ಭೂಕುಸಿತದಿಂದ ರಸ್ತೆ ಬಂದ್ ಆದ ಪರಿಣಾಮ ವಾಹನ ಸಂಚಾರಕ್ಕೆ ಹೇರಿದ್ದ ನಿರ್ಬಂಧವನ್ನು ಗುರುವಾರ ಮಧ್ಯಾಹ್ನದಿಂದ ತೆರವುಗೊಳಿಸಲಾಗಿದೆ.
ತಾಲೂಕಿನ ದೋಣಿಗಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಈ ಮಾರ್ಗವಾಗಿ ಮಂಗಳೂರು- ಬೆಂಗಳೂರು ಕಡೆ ವಾಹನಗಳಲ್ಲಿ ಸಂಚರಿಸಲು ನಿರ್ಬಂಧ ಹೇರಲಾಗಿತ್ತು. ಇದೀಗ ಗುತ್ತಿಗೆದಾರರು ಮಳೆ ಬಿಡುವು ಬಿಟ್ಟ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಎಮ್ ಸ್ಯಾಂಡ್ ಮೂಟೆಗಳನ್ನು ಹಾಗೂ ಪ್ಲಾಸ್ಟಿಕ್ ಹೊದಿಕೆಗಳನ್ನು ಭೂಕುಸಿತದ ಸ್ಥಳದಲ್ಲಿ ಹಾಕಿ ತಾತ್ಕಾಲಿಕವಾಗಿ 20 ಟನ್ ಒಳಗಿನ 6 ಚಕ್ರದ ವಾಹನಗಳು, ಸಾರ್ವಜನಿಕರು ಸಂಚರಿಸುವ ಬಸ್ಗಳು ಹಾಗೂ ಎಲ್ಲಾ ರೀತಿಯ ಲಘು ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ಕೊಡಲಾಗಿದೆ.
ಅಂಬುಲೆನ್ಸ್ ಅಗ್ನಿಶಾಮಕದಳದಂತಹ ತುರ್ತು ಪರಿಸ್ಥಿತಿ ವಾಹನಗಳಿಗೆ ಮಾತ್ರ ದಿನದ 24ಗಂಟೆ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗಿದ್ದು 20 ಟನ್ಗಳಿಗಿಂತ ಮೇಲಿರುವ ಭಾರಿ ಟ್ಯಾಂಕರ್ಗಳು, ಕಂಟೈನರ್ನಂತಹ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಪ್ರಕಟಣೆ ಹೊರಡಿಸಿದ್ದಾರೆ.
ಒಟ್ಟಾರೆಯಾಗಿ ದೋಣಿಗಾಲ್ ಸಮೀಪ ಗುತ್ತಿಗೆದಾರರು, ರಾ.ಹೆ. ಪ್ರಾಧಿಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ.