ದೀಪಾವಳಿ ರಜೆ ಸವಿಯಲು ಕಾಫಿ ನಾಡಿಗೆ ಲಗ್ಗೆ
ಕಣ್ಮನ ಸೆಳೆಯುತ್ತಿರುವ ಪ್ರಾಕೃತಿಕ ಸೌಂದರ್ಯ, ಪ್ರವಾಸಿಗರಿಂದ ತುಂಬಿದ ರೆಸಾರ್ಟ್, ಹೋಂಸ್ಟೇಗಳು
Team Udayavani, Nov 16, 2020, 5:32 PM IST
ಸಕಲೇಶಪುರ: ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವಂತೆ ತಾಲೂಕಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಸತತ ಆರು ಏಳು ತಿಂಗಳಿನಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಗಳು, ಸರ್ಕಾರಿ ನೌಕರರು ದೀಪಾವಳಿ ಹಬ್ಬದ ಜೊತೆಗೆ ಸತತ ಮೂರು ದಿನ ರಜೆ ಇರುವ ಕಾರಣ, ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ಕುಟುಂಬ ಸಮೇತವಾಗಿ ಆಗಮಿಸುತ್ತಿದ್ದಾರೆ.
ಕೋವಿಡ್ ವೈರಸ್ನಿಂದಾಗಿ ಪ್ರವಾಸಿಗರಿಲ್ಲದೆ,ಬಣಗುಡುತ್ತಿದ್ದ ತಾಲೂಕಿನ ರೆಸಾರ್ಟ್ಗಳು, ಹೋಂ ಸ್ಟೇಗಳುಇದೀಗಪ್ರವಾಸಿಗರಿಂದ ತುಂಬಿತುಳುಕುತ್ತಿವೆ. ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಾದ ಮಂಜ್ರಾಬಾದ್ ಕೋಟೆ, ಬಿಸಿಲೆ ಘಾಟ್, ಮಗಜಹಳ್ಳಿ ಜಲಪಾತ, ಮೂಕನಮನೆ ಜಲಪಾತ, ಕಾಡುಮನೆ ಸೇರಿದಂತೆ ಇಲ್ಲಿನ ಬೆಟ್ಟ ಗುಡ್ಡ,ಕಣಿವೆ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಹಿತವಾದ ಗಾಳಿ, ಮೋಡ ಮುಸುಕಿದ ವಾತಾವರಣ, ಮುಂಜಾನೆಯ ಮಂಜು, ಜೊತೆಗೆ ಚಳಿ ಗಾಳಿ, ಸಂಜೆ ಸೂರ್ಯಾಸ್ತದ ಸನ್ನಿವೇಶವನ್ನು ಬೆಟ್ಟ, ಗುಡ್ಡಗಳ ಮೇಲೆ ನಿಂತು ನೋಡುವುದೇ ಒಂದು ಸೊಗಸು. ಈ ಬಾರಿ ಅಕ್ಟೋಬರ್ವರೆಗೂ ಮಳೆ ಸುರಿದ ಕಾರಣ, ಎಲ್ಲೆಡೆ ಹಸಿರಿನ ಜೊತೆ ತಂಪು ವಾತಾವರಣ ಸೃಷ್ಟಿಯಾಗಿದ್ದು, ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.
ಶತ್ರುಗಳಂತೆ ಕಾಣುತ್ತಿದ್ರು: ಲಾಕ್ಡೌನ್ ಸಮಯದಲ್ಲಿ ತಾಲೂಕಿಗೆ ಪ್ರವಾಸಿಗರು ಬಂದರೆ ಶತ್ರುಗಳಂತೆ ನೋಡಲಾಗುತ್ತಿತ್ತು.ನಮ್ಮೂರಿಗೆ ಕೋವಿಡ್ ವನ್ನೇ ಹೊತ್ತು ತರುತ್ತಿದ್ದಾರೆ ಎಂಬಂತೆ ದೂರು ಹೋಗುತ್ತಿದ್ದರು. ಇದೀಗ ಜನರಲ್ಲಿ ಕೋವಿಡ್ ಬಗ್ಗೆ ಇದ್ದ ತಪ್ಪು ತಿಳಿವಳಿಕೆ ದೂರಾಗಿ, ಸ್ಥಳೀಯರು ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ.
ಪ್ರವಾಸೋದ್ಯಮ ಚೇತರಿಕೆ: ತಾಲೂಕಿನ ಜನರಿಗೆ ಕೃಷಿ ಜೊತೆಗೆ ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲವಾಗಿದೆ. ಕೃಷಿಯಿಂದ ವಿಮುಖರಾದ ಯುವಕರು, ರೆಸಾರ್ಟ್, ಹೋಂಸ್ಟೇಗಳನ್ನು ಪ್ರಾರಂಭ ಮಾಡಿ, ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿದ್ದಾರೆ. ಇಂತಹ ಆತಿಥ್ಯ ವಲಯ ಕೋವಿಡ್ ದಿಂದ ತತ್ತರಿಸಿತ್ತು. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಲು ಹಣವಿಲ್ಲದಂತಹ ಪರಿಸ್ಥಿತಿ ಇತ್ತು. ಇದೀಗ ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸುತ್ತಿದ್ದು, ವಾಸ್ತವ್ಯ ಮಾಡಲು ವಾರಾಂತ್ಯಗಳಲ್ಲಿ ರೇಸಾರ್ಟ್ ಗಳು, ಹೋಂಸ್ಟೇಗಳು ಸಿಗುತ್ತಿಲ್ಲ.
ಹೋಟೆಲ್ಗಳೂ ಭರ್ತಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಹೆದ್ದಾರಿ ಬದಿಯ ಹೋಟೆಲ್ಗಳು ಗ್ರಾಹಕರಿಂದ ತುಂಬಿದ್ದ ದೃಶ್ಯ ಭಾನುವಾರ ಕಂಡು ಬಂದಿತು. ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್ಗಳ ಬಳಿ ಪ್ರವಾಸಿಗರು ತಿಂಡಿ ತಿನಿಸು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಂಚಾರ ದಟ್ಟಣೆ: ಕೇವಲ ಮಲೆನಾಡಿಗೆ ಮಾತ್ರವಲ್ಲ, ಕರಾವಳಿಯ ಪವಿತ್ರ ತೀರ್ಥ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮುಂತಾದ ಸ್ಥಳಗಳಿಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಮತ್ತು ಭಾನುವಾರ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಸ್ಥಳೀಯರು ರಸ್ತೆ ದಾಟಲು ಐದು ಹತ್ತು ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರವಾಸಿಗರ ಚಿತ್ತಾಕರ್ಷಿಸುತ್ತಿದೆ ಕಾಫಿ ತೋಟ,ಭತ್ತದ ಗದ್ದೆ : ಸಕಲೇಶಪುರ ಅಂದ ತಕ್ಷಣ ನೆನಪಿಗೆ ಬರುವುದುಕಾಫಿತೋಟ, ಗಿರಿ ಕಂದರ. ಇದರ ಜೊತೆಗೆ ಭತ್ತದ ಗದ್ದೆಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಬಾರಿ ಉತ್ತಮವಾಗಿ ಮಳೆ ಸುರಿದಕಾರಣ, ಎಲ್ಲೆಡೆ ಭತ್ತದ ನಾಟಿ ಮಾಡಿದ್ದು, ತಗ್ಗು ಪ್ರದೇಶದಲ್ಲಿ ಸಣ್ಣ ಸಣ್ಣ ಮಡಿಗಳನ್ನುಕಟ್ಟಿ ನಾಟಿ ಮಾಡಿರುವ ಭತ್ತದ ಪೈರು, ಅದರ ಮೇಲೆ ಮುಸುಕಿದ ಮಂಜು ಪ್ರವಾಸಿಗರ ಚಿತ್ತಾಕರ್ಷಿಸುತ್ತದೆ.
ಗ್ರಾಮೀಣ ಜನ ಹಬ್ಬ ಹರಿದಿನಗಳನ್ನು ಮನೆಯಲ್ಲೇ ಆಚರಿಸಿದರೆ, ನಗರ ಪ್ರದೇಶದ ಹಬ್ಬದ ನೆಪದಲ್ಲಿ ಸಿಗುವ ರಜೆಯನ್ನು ಸವಿಯಲು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. – ಬ್ಯಾಕರವಳ್ಳಿ ಜಯಣ್ಣ, ಮಾಲಿಕರು, ಹೋಂಸ್ಟೇ.
ಕೋವಿಡ್ ದಿಂದಾಗಿ 6 ತಿಂಗಳಿಂದ ಹೊರಗಡೆ ಪ್ರವಾಸಿ ತಾಣಗಳಿಗೆ ಹೋಗಿರಲಿಲ್ಲ. ಮೂರು ದಿನ ರಜೆ ಇರುವಕಾರಣ,ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಇಲ್ಲಿನ ಪ್ರಕೃತಿ ಆಹ್ವಾದಿಸುವುದು ನಮಗೆ ಒಂದು ರೀತಿ ಹಬ್ಬದ ಸಂಭ್ರಮವಾಗಿದೆ. – ದತ್ತು ಪ್ರಸಾದ್, ಬೆಂಗಳೂರು ನಿವಾಸಿ
– ಸುಧೀರ್ಎಸ್.ಎಲ್