ಪರಸ್ತ್ರೀಯೊಂದಿಗೆ ಪರಾರಿಯಾದ ಪತಿ ಮೇಲೆ ರಾಡ್ನಿಂದ ದಾಳಿ
Team Udayavani, Aug 23, 2017, 3:54 PM IST
ಅರಸೀಕೆರೆ: ಮಧ್ಯವಯಸ್ಕ ಇಬ್ಬರು ಮಕ್ಕಳ ತಂದೆಯೊಬ್ಬ ಇಬ್ಬರು ಮಕ್ಕಳ ತಾಯಿಯೊಂದಿಗೆ ಪರಾರಿಯಾಗಿ ಪತ್ನಿ ಯಿಂದ ಹೊಡೆಸಿಕೊಂಡ ಘಟನೆ ಮಂಗಳವಾರ ಇಲ್ಲಿನ ಗಂಡಸಿ ಹ್ಯಾಂಡ್ಪೋಸ್ಟ್ ಬಳಿ ನಡೆದಿದೆ.
ಸತೀಶ್ ಎಂಬ ಹಾರ್ಡ್ವೇರ್ ಅಂಗಡಿ ಮಾಲಿಕ ತನ್ನ ಸ್ನೇಹಿತ, ಪಕ್ಕದ ಮನೆಯ ನಿವಾಸಿ ಮಂಜುನಾಥ್ ಎಂಬಾತನ ಹೆಂಡತಿ ಮಂಜುಳಾ ಎಂಬಾಕೆಯೊಂದಿಗೆ ಪರಾರಿಯಾಗಿ ಮೈಸೂರಿನಲ್ಲಿ ಮನೆ ಮಾಡಿಕೊಂಡಿದ್ದ.
ಮೇ ತಿಂಗಳಿನಲ್ಲಿ ಪರಾರಿಯಾಗಿದ್ದ ಸತೀಶ್ ಮಂಗಳವಾರ ಏಕಾಏಕಿ ಅಂಗಡಿಯಲ್ಲಿ ಪ್ರತ್ಯಕ್ಷ ಆಗಿದ್ದು , ವಿಷಯ ತಿಳಿದು ಹಾರ್ಡ್ ವೇರ್ ಅಂಗಡಿಗೆ ದೌಡಾಯಿಸಿದ ಪತ್ನಿ ರುಕ್ಷಿಣಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಳೆ. ರೊಚ್ಚಿಗೆದ್ದ ಆಕೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾಳೆ.
ಅವಾಚ್ಯ ಶಬ್ಧಗಳಿಂದ ಇಬ್ಬರು ಪರಸ್ಪರ ನಿಂದಿಸಿಕೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿಯ ಬಳಿಯಿದ್ದ ಕೆಲವರು ಗಂಡ-ಹೆಂಡಿರ ಜಗಳ ನೋಡಿ ಪುಕ್ಕಟೆ ಮನೋರಂಜನೆ ಪಡೆದರೆ, ಕೆಲವರು ಬಂದು ಜಗಳ ಬಿಡಿಸಿದರು.
ಪತ್ನಿಗೆ ಡೈವೋರ್ಸ್ ನೀಡುವುದಾಗಿ ಸತೀಶ್ ಹೇಳಿದ್ದಾನೆ. ಈ ಸಂಬಂಧ ಪ್ರಕರಣ ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು ಆಕೆಗೂ ಹಲವರ ಜೊತೆ ಅನೈತಿಕ ಸಂಬಂಧ ಇದೆ ಎಂದು ಮಾಧ್ಯಮಗಳ ಎದುರು ಆರೋಪಿಸಿದ್ದಾನೆ.
20 ವರ್ಷದ ಹಿಂದೆ ಸತೀಶ್ಗೆ ರುಕ್ಮಿಣಿಯೊಂದಿಗೆ ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಮಂಜುಳಾ ಜೊತೆಗಿನ ಅನೈತಿಕ ಸಂಬಂಧ ಬಯಲಾಗಿ ಗಂಡಸಿ ಠಾಣೆಯ ಮೆಟ್ಟಿಲೇರಿ ರಾಜಿ ಪಂಚಾಯತಿಯೂ ನಡೆದಿತ್ತು ಎಂದು ವರದಿಯಾಗಿದೆ.
20 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಂಜುಳಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಸತೀಶ್ ನನ್ನ ಪತ್ನಿ ಮತ್ತು ಮಕ್ಕಳ ತಲೆ ಕಡೆಸಿ ಮೈಸೂರಿಗೆ ಕರೆದೊಯ್ದು ಇರಿಸಿಕೊಂಡಿದ್ದಾನೆ ಎಂದು ಮಂಜುನಾಥ್ ಆರೋಪಿಸಿದ್ದಾನೆ.
ಆದರೆ ಆರೋಪವನ್ನು ತಳ್ಳಿ ಹಾಕಿದ್ದು, ಮಂಜುನಾಥ್ ನನ್ನ ಬಳಿ 6 ಲಕ್ಷ ಸಾಲ ಪಡೆದಿದ್ದ, ಆತ ದಿನ ನಿತ್ಯವೂ ಕುಡಿದು ಬಂದು ಮಂಜುಳಾಗೆ ಹಲ್ಲೆ ನಡೆಸುತ್ತಿದ್ದ. ನಾನು ಆಕೆಗೆ ಸಹಾಯ ಮಾಡಿದ್ದೇನೆ ಹೊರತು ಮೈಸೂರಿಗೆ ಕರೆದೊಯ್ಯಲಿಲ್ಲ ಎಂದಿದ್ದಾನೆ.
ಮಂಜುನಾಥ್ ಮಂಜುಳಾ ದಂಪತಿಯೂ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಕರಣ ಕೋರ್ಟ್ನಲ್ಲಿದೆ.
ಗಂಡಸಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.